ಅಯ್ಯೋ… ಅಮ್ಮಾ… ನಾನು ಇನ್ನೋಮ್ಮೆ ಇಂಥ ತಪ್ಪು ಮಾಡಲ್ಲಾ.. ಹೊಡಿಬೇಡಿ…
ಕಳ್ಳತನಕ್ಕೆ ಬಂದಿದ್ದ ವ್ಯಕ್ತಿಯನ್ನು ಸಾರ್ವಜನಿಕರು ಮರಕ್ಕೆ ಕಟ್ಟಿಹಾಕಿ ಬಳಿಕ ಪೊಲೀಸರಿಗೆ ಒಪ್ಪಿಸಿದ ಘಟನೆ ಕೊಪ್ಪಳದ ಹುಲಗಿಯಲ್ಲಿ ನಡೆದಿದೆ.
ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದ ಪ್ರಸಿದ್ಧ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದ ಆವರಣದಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ದೇವಸ್ಥಾನದ ಆವರಣದಲ್ಲಿ ಮಲಗಿದ್ದ ಭಕ್ತರ ಬಳಿ ಹಣ, ಒಡವೆಯ ಕಳ್ಳತನಕ್ಕೆ ಈ ವ್ಯಕ್ತಿ ಬಂದಿದ್ದ ಎನ್ನಲಾಗಿದೆ. ಕಳ್ಳತನ ಮಾಡುತ್ತಿದ್ದ ವೇಳೆ ಭಕ್ತರು ನೋಡಿ ಆತನನ್ನು ಹಿಡಿದಿದ್ದಾರೆ. ಬಳಿಕ ಅಲ್ಲಿಯೇ ತೆಂಗಿನಮರಕ್ಕೆ ಕಟ್ಟಿಹಾಕಿ ಧರ್ಮದೇಟು ನೀಡಿದ್ದಾರೆ.
ಇನ್ನೂ ಕಳ್ಳತನಕ್ಕೆ ಬಂದಿದ್ದ ಇನ್ನೊಬ್ಬ ವ್ಯಕ್ತಿ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಸಿಕ್ಕಿ ಹಾಕಿಕೊಂಡ ವ್ಯಕ್ತಿ ತಾನು ವಿಜಯಪುರ ಮೂಲದವನು ಎಂದಿದ್ದಾನೆ. ಕಳ್ಳನನ್ನು ಸುಮಾರು ನಾಲ್ಕೈದು ಗಂಟೆಯವರೆಗೂ ಮರಕ್ಕೆ ಕಟ್ಟಿಹಾಕಲಾಗಿತ್ತು. ಬಳಿಕ ವ್ಯಕ್ತಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.