ಆತ್ಮಹತ್ಯೆ ಮಾಡಿಕೊಂಡವನ ಡೆತ್ನೋಟ್ ನಲ್ಲಿತ್ತು ವಿಚಿತ್ರ ಕೊನೆಯ ಆಸೆ….!
ಈ ಸುದ್ದಿಯನ್ನು ಕೇಳಿದ್ರೆ ನೀವೆಲ್ಲ ಹೀಗೂ ಯಾರಾದರೂ ಡೆತ್ನೋಟ್ ಬರೆದಿಡ್ತಾರಾ? ಎಂದು ಗಾಬರಿಯಾಗುವುದು ಖಚಿತ. ಹೌದು.. ಈ ವ್ಯಕ್ತಿ ಬರೆದಿಟ್ಟಿರುವ ಡೆತ್ನೋಟ್ ಹಾಗಿದೆ. ನಿನ್ನೆ ಮಧ್ಯಾಹ್ನ ವಿಜಯಪುರ ನಗರದ ಇಂಬ್ರಾಹಿಂಪೂರ ರೈಲು ನಿಲ್ದಾಣದ ಬಳಿ ವ್ಯಕ್ತಿಯೊಬ್ಬ ರೈಲಿನಡಿ ಸಿಲುಕು ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ದೇಹ ಎರಡು ಭಾಗವಾಗಿ ಕತ್ತರಿಸಿ ಹೋಗಿತ್ತು. ಸುದ್ದಿ ತಿಳಿದು ಆ ವ್ಯಕ್ತಿಯ ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು.
ಈ ಶವವನ್ನು ಪೊಲೀಸರ ತಪಾಸಣೆ ನಡೆಸಿದಾಗ ಆತನ ಬಳಿ ಇದ್ದ ಡೆತ್ನೋಟ್ ಅಚ್ಚರಿ ಮೂಡಿಸಿದೆ. ಹೀಗೂ ಡೆತ್ನೋಟ್ ಬೆರದಿಡುತ್ತಾರಾ? ಅಂಥ ವಿಚಿತ್ರ ಮತ್ತು ಕೆಟ್ಟ ಕೊನೆ ಆಸೆ ಇರುತ್ತಾ ಎಂದು ಅಚ್ಚರಿ ಮೂಡಿಸಿದೆ.
ಅಷ್ಟಕ್ಕೂ ಆ ಡೆತ್ನೋಟ್ನಲ್ಲಿ ಆತ ಬರೆದಿದ್ದೇನೆಂದರೆ, ನಾನು ವಿಶ್ವನಾಥ ಗಂಜ್ಯಾಳ, ನನ್ನ ಸಾವಿಗೆ ನಾನೇ ಕಾರಣ, ನಾನು ಸತ್ತ ಮೇಲೆ ನಮ್ಮ ಮನೆಯಲ್ಲಿ ತಾಯಿ, ಅಕ್ಕ, ತಮ್ಮ, ಅಳಿಯ ಇವರೆಲ್ಲರಿಗೂ ಬಾದಾಮಿ ಹಾಲು ಕುಡಿಸಿ. ನನ್ನನ್ನು ಅಂದ್ರೆ ನಾ ಸತ್ತ ಸುದ್ದಿ ಕೇಳಿ ಮಾತನಾಡಿಸಲಿಕ್ಕೆ ಬರುವವರು ಇವರಿಗೆ ಬಾದಾಮಿ ಹಾಲು ಕುಡಿಸಿ. ಇದೇ ನನ್ನ ಕೊನೆಯ ಆಸೆ ಎಂದು ಆತನ ಬಳಿ ಸಿಕ್ಕ ಡೆತ್ನೋಟ್ನಲ್ಲಿ ಬರೆಯಲಾಗಿದೆ.
ಈ ಡೆತ್ನೋಟ್ ವಶಪಡಿಸಿಕೊಂಡಿರುವ ವಿಜಯಪುರ ಪೊಲೀಸರು ಪ್ರಕರಣವನ್ನು ಕೈಗೆತ್ತಿಕೊಂಡಾಗ ಈತನ ಹೆಚ್ಚುವರಿ ಮಾಹಿತಿ ಸಿಕ್ಕಿದೆ. 42 ವರ್ಷದ ವಿಶ್ವನಾಥ ಬಸಪ್ಪ ಗಂಜ್ಯಾಳ ಈತ ವಿಜಯಪುರ ನಗರದ ಇಬ್ರಾಹಿಂಪೂರ ನಿವಾಸಿಯಾಗಿದ್ದು, ಎಲೆಕ್ಟಿಕಲ್ ಕೆಲಸ ಮಾಡುತ್ತಿದ್ದ. ಕಾಯಿಲೆಯೊಂದರಿಂದ ಬಳಲುತ್ತಿದ್ದ. ಈ ಹಿನ್ನೆಲೆಯಲ್ಲಿ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ರೇಲ್ವೆ ಪೊಲೀಸ್ ಮೂಲಗಳು ತಿಳಿಸಿವೆ.