ಆ ಕಳ್ಳರು ಕದ್ದಿದ್ದು ವ್ಯಾಪಾರಿಯ ಹಣವಲ್ಲ, ಬೆಲೆಬಾಳುವ ಆಭರಣವಲ್ಲ ಹಾಗಾದ್ರೆ ಏನು..?
ಆ ಕಳ್ಳರು ಕದ್ದಿದ್ದು ವ್ಯಾಪಾರಿಯ ಹಣವಲ್ಲ, ಬೆಲೆಬಾಳುವ ಆಭರಣವಲ್ಲ ಹಾಗಾದ್ರೆ ಏನು..? ಪೊಲೀಸರಿಗೆ ವ್ಯಾಪಾರಿ ನೀಡಿದ ದೂರು ನಿಜಕ್ಕೂ ಆಶ್ಚರ್ಯವನ್ನುಂಟು ಮಾಡಿತ್ತು. ಅದ್ಯಾಕೆ ಗೊತ್ತಾ..? ವ್ಯಾಪಾರಿಯ ಬರೋಬ್ಬರಿ 22 ಲಕ್ಷ ರೂಪಾಯಿ ಮೌಲ್ಯದ ಈರುಳ್ಳಿ ಕಳ್ಳತನವಾಗಿತ್ತು. ಇದನ್ನ ಕೇಳಿದ ಪೊಲೀಸರು ಈರುಳ್ಳಿನಾ..? ಅಂತ ಒಂದು ಕ್ಷಣ ವ್ಯಾಪಾರಿಯ ಮುಖವನ್ನ ಕಣ್ಣು ಮಿಟುಕಿಸಿದೆ ನೋಡಿದ್ದಾರೆ.
ಹೌದು… ದೇಶದಲ್ಲಿ ಈರುಳ್ಳಿ ಬೆಲೆ ಗಗನಮುಖಿಯಾಗಿರುವ ನಡುವೆಯೇ 22 ಲಕ್ಷ ರೂಪಾಯಿ ಮೌಲ್ಯದ ಈರುಳ್ಳಿ ಕಳ್ಳತನವಾಗಿದೆ ಎಂದು ಮಹಾರಾಷ್ಟ್ರದ ನಾಸಿಕ್ ವ್ಯಾಪಾರಿಯೊಬ್ಬರು ಉತ್ತರ ಪ್ರದೇಶ ಪೊಲೀಸರಿಗೆ ದೂರು ನೀಡಿದ್ದಾರೆ.
40 ಟನ್ ಈರುಳ್ಳಿ ಸಾಗಿಸುತ್ತಿದ್ದ ಟ್ರಕ್, ಗಮ್ಯತಾಣ ತಲುಪದ ಹಿನ್ನೆಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಟ್ರಕ್ ನವೆಂಬರ್ 11ರಂದು ನಾಸಿಕ್ನಿಂದ ಈರುಳ್ಳಿ ತುಂಬಿಕೊಂಡು ಹೊರಟಿತ್ತು. ಗೋರಖ್ಪುರಕ್ಕೆ 22ರಂದು ತಲುಪಬೇಕಿತ್ತು ಎಂದು ಸಗಟು ವ್ಯಾಪಾರಿ ಪ್ರೇಮ್ಚಂದ್ ಶುಕ್ಲಾ ದೂರು ನೀಡಿದ್ದಾರೆ. ಈ ಟ್ರಕ್ ತೆಂಡು ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ. ಆದರೆ ಪತ್ತೆಯಾದದ್ದು ಖಾಲಿ ಟ್ರಕ್ ಎಂದು ಎಸ್ಪಿ ರಾಜೇಶ್ ಸಿಂಗ್ ಚಂಡೇಲ್ ಹೇಳಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಅಕಾಲಿಕ ಮಳೆಯಿಂದಾಗಿ ಈರುಳ್ಳಿ ಬೆಳೆ ನಾಶವಾಗಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಈರುಳ್ಳಿಬೆಲೆ ಗಗನಕ್ಕೇರಿದೆ. ಈರುಳ್ಳಿ ಬೆಲೆ ಏರಿಕೆ ತಡೆಯುವ ನಿಟ್ಟಿನಲ್ಲಿ ಸರ್ಕಾರ ಈರುಳ್ಳಿ ರಫ್ತು ನಿಷೇಧಿಸಿದೆ. ಆದಾಗ್ಯೂ ಹಲವು ರಾಜ್ಯಗಳಲ್ಲಿ ಸಗಟು ಈರುಳ್ಳಿ ಬೆಲೆ ಕೆಜಿಗೆ 100 ರೂಪಾಯಿ ತಲುಪಿದೆ.