ಐದು ರಾಜ್ಯಗಳಿಂದ ಬರುವವರಿಗೆ ನೋ ಎಂಟ್ರಿ ಎಂದ ಕರ್ನಾಟಕ ಸರ್ಕಾರ; ಯಾಕೆ ಈ ನಿರ್ಧಾರ!
ಮುಂದಿನ 15 ದಿನಗಳ ಕಾಲ ಕರ್ನಾಟಕಕ್ಕೆ ಐದು ರಾಜ್ಯಗಳ ಜೊತೆಗಿನ ವಿಮಾನ ಸಂಚಾರ ಮತ್ತು ಮೂರು ರಾಜ್ಯಗಳ ರಸ್ತೆ ಹಾಗೂ ರೈಲು ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಧುಸ್ವಾಮಿಯವರು, ಮುಂದಿನ 15 ದಿನಗಳ ಕಾಲ ಮಹಾರಾಷ್ಟ್ರ, ಮಧ್ಯ ಪ್ರದೇಶ, ರಾಜಸ್ಥಾನ, ತಮಿಳುನಾಡು ಮತ್ತು ಗುಜರಾತ್ ನಿಂದ ಬರುವವರಿಗೆ ನಿರ್ಬಂಧ ವಿಧಿಸಲಾಗಿದೆ ಎಂದಿದ್ದಾರೆ.
ಗುಜರಾತ್, ಮಹಾರಾಷ್ಟ್ರ ಹಾಗೂ ತಮಿಳುನಾಡು ಸೇರಿದಂತೆ ಈ ಮೂರು ರಾಜ್ಯಗಳ ವಿಮಾನ, ರಸ್ತೆ ಮತ್ತು ರೈಲು ಸಂಚಾರವನ್ನು ನಿರ್ಬಂಧಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇಡೀ ದೇಶದಲ್ಲಿಯೇ ಅತಿ ಹೆಚ್ಚು ಸೋಂಕಿತ ಪ್ರಕರಣಗಳು ಮಹಾರಾಷ್ಟ್ರದಲ್ಲಿ ದಾಖಲಾಗುತ್ತಿವೆ. ಕರ್ನಾಟಕದಲ್ಲಿ ಪತ್ತೆಯಾಗುತ್ತಿರುವ ಪ್ರಕರಣಗಳಲ್ಲಿ ಮಹಾರಾಷ್ಟ್ರದಿಂದ ಬಂದವರ ಸಂಖ್ಯೆಯೇ ಹೆಚ್ಚಾಗಿದೆ. ಪ್ರತಿದಿನ ಸರಾಸರಿ 6,000 ಪ್ರಕರಣಗಳು ದೇಶಾದ್ಯಂತ ಕಾಣಿಸಿಕೊಳ್ಳುತ್ತಿದ್ದು, ಈ ಐದು ರಾಜ್ಯಗಳು ಸೋಂಕಿತ ರಾಜ್ಯಗಳ ಪಟ್ಟಿಯಲ್ಲಿ ಮೊದಲ ಐದು ಸ್ಥಾನಗಳನ್ನು ಪಡೆದುಕೊಂಡಿವೆ. ಆ ಕಾರಣಕ್ಕಾಗಿ ಈ ಐದು ರಾಜ್ಯಗಳಿಂದ ಬರುವವರಿಗೆ ನಿರ್ಬಂಧಿಸಲಾಗಿದ್ದು, ಎಲ್ಲಾ ರೀತಿಯ ನಾಗರಿಕ ಸಾರಿಗೆಗಳನ್ನು ನಿರ್ಬಂಧಿಸಲಾಗಿದೆ.