ಕರ್ನಾಟಕ ವಿಧಾನಪರಿಷತ್ ಚುನಾವಣೆ: ಲಾಭದ ನಗೆಯಲ್ಲಿ ಬಿಜೆಪಿ, ನಷ್ಟದ ಹೊರೆ ಕಾಂಗ್ರೆಸ್ಗೆ!
ರಾಜ್ಯಸಭೆ ಚುನಾವಣೆಯ ನಂತರ ಈಗ ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗವು ಘೋಷಣೆ ಮಾಡಿದೆ. ವಿಧಾನ ಪರಿಷತ್ಗೆ ತೆರವಾಗುವ 07 ಸ್ಥಾನಗಳಿಗೆ ವಿಧಾನಸಭ ಸದಸ್ಯರು ಆಯ್ಕೆ ಮಾಡುತ್ತಾರೆ. ಚುನಾವಣೆ ಜೂ.29ರಂದು ನಡೆಯಲಿದೆ.
ಕಾಂಗ್ರೆಸ್ ಪಕ್ಷದ ನಸೀರ್ ಅಹಮದ್, ಜಯಮ್ಮ, ಎಂ.ಸಿ.ವೇಣುಗೋಪಾಲ್, ಹೆಚ್.ಎಂ.ರೇವಣ್ಣ, ಎನ್ಎಸ್ ಬೋಸರಾಜು, ಜೆಡಿಎಸ್ನ ಟಿಎ ಶರವಣ ಹಾಗೂ ಪಕ್ಷೇತರ ಸದಸ್ಯ ಡಿಯು ಮಲ್ಲಿಕಾರ್ಜುನ್ ಅವರ ಸದಸ್ಯತ್ವದ ಅವಧಿಯು ಜೂ.30ಕ್ಕೆ ಮುಗಿಲಿದ್ದು, ಆ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಈ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ 04 ಸ್ಥಾನಗಳನ್ನು ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಅಲ್ಲದೆ, ಬಿಜೆಪಿಯಲ್ಲಿ ವಿಧಾನ ಪರಿಷತ್ ಟಿಕೆಟ್ಗಾಗಿ ಮತ್ತೊಂದು ರೇಸ್ ಶುರುವಾಗಿದೆ.
ಚುನಾವಣಾ ದಿನಾಂಕ ಹೊರಬೀಳುತ್ತಿದ್ದಂತೆ, ಬಿಜೆಪಿ ಸರ್ಕಾರದ ಸ್ಥಾಪನೆಗಾಗಿ ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದ ವಲಸಿಗರಾದ ಎಸ್.ಶಂಕರ್, ಎಂಟಿಬಿ ನಾಗರಾಜ್ ಹಾಗೂ ಹೆಚ್.ವಿಶ್ವನಾಥ್ ಅವರ ಪೈಕಿ ಮೂವರಿಗೂ ಟಿಕೆಟ್ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದರೂ, ಹೈಕಮಾಂಡ್ ಏನು ನಿರ್ಧಾರ ಮಾಡುತ್ತದೆ ಎಂಬುದು ಆ ಮೂವರಲ್ಲಿಯೂ ಕಳವಳ ಹುಟ್ಟಿಸಿದೆ. ಈ ಕಳವಳಕ್ಕೆ ಬಿಜೆಪಿ ಹೈಕಮಾಂಡ್ ರಾಜ್ಯಸಭಾ ಅಭ್ಯರ್ಥಿಗಳ ಆಯ್ಕೆಯಲ್ಲಿ ರಾಜ್ಯ ಬಿಜೆಪಿಗೆ ಶಾಕ್ ಕೊಟ್ಟಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ.
7 ಸ್ಥಾನಗಳ ಪೈಕಿ ನಾಲ್ಕು ಸ್ಥಾನಗಳು ಬಿಜೆಪಿಗೆ, ಎರಡು ಕಾಂಗ್ರೆಸ್ ಮತ್ತು ಇನ್ನುಳಿದ ಒಂದು ಸ್ಥಾನ ಜೆಡಿಎಸ್ ಪಕ್ಷದ ಪಾಲಾಗುವ ಸಾಧ್ಯತೆಯಿದೆ.
ತೆರವಾಗುವ 7 ಸ್ಥಾನಗಳ ಪೈಕಿ 05 ಕಾಂಗ್ರೆಸ್, ಒಂದು ಜೆಡಿಎಸ್ ಮತ್ತು ಒಬ್ಬ ಪಕ್ಷೇತರ ಸದಸ್ಯರಿದ್ದಾರೆ. ಹೀಗಾಗಿ, ಈ ಚುನಾವಣೆಯಲ್ಲಿ ಬಿಜೆಪಿಗೆ ಲಾಭವಾಗಲಿದ್ದು, ಕಾಂಗ್ರೆಸ್ ಪಕ್ಷಕ್ಕೆ ನಷ್ಟವಾಗಲಿದೆ. ಒಂದೂ ಸ್ಥಾನ ಕಳೆದುಕೊಳ್ಳದ ಬಿಜೆಪಿ ನಾಲ್ಕು ಸ್ಥಾನಗಳನ್ನು ಪಡೆದುಕೊಳ್ಳಲಿದೆ. ಐದು ಸ್ಥಾನ ಹೊಂದಿರುವ ಕಾಂಗ್ರೆಸ್ ಎರಡು ಸ್ಥಾನ ಗಳಿಸಲಿದ್ದು, 3 ಸ್ಥಾನ ಕಳೆದುಕೊಳ್ಳಲಿದೆ. ಜೆಡಿಎಸ್ ಒಂದು ಸ್ಥಾನ ಹೊಂದಿದ್ದು, ಅದನ್ನು ಉಳಿಸಿಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ.