ಕೇಂದ್ರದಿಂದ ಬಡವರಿಗೆ ಉಚಿತ ಅಕ್ಕಿ, ಅಡುಗೆ ಅನಿಲ : ತೆರಿಗೆದಾರರಿಗೆ ಬಂಪರ್ ಗಿಫ್ಟ್!
ಕೊರೊನಾ ಲಾಕ್ ಡೌನ್ ನಿಂದಾಗಿ ಭಾರತ ಆರ್ಥಿಕ ಸಂಕಷ್ಟವನ್ನು ನಿಭಾಯಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಅನ್ನು ಘೋಷಣೆ ಮಾಡಿದ್ದರು. ಇದನ್ನು ಯಾವ ಕ್ಷೇತ್ರಗಳಿಗೆ ಎಷ್ಟು ಹಂಚಲಾಗಿದೆ ಮತ್ತು ಹೇಗೆ ಹಂಚಿಕೆ ಮಾಡಲಾಗಿದೆ ಎಂಬುದರ ವಿವರಣೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದರು.
ಪ್ರಧಾನಿ ಅವರು ಸಮಗ್ರ ದೃಷ್ಟಿಕೋನದೊಂದಿಗೆ ಮತ್ತು ಸಮಾಜದ ಹಲವಾರು ವರ್ಗಗಳೊಂದಿಗೆ ನಡೆಸಿದ ವ್ಯಾಪಕ ಸಮಾಲೋಚನೆಯ ನಂತರ ಘೋಷಿಸಲಾದ ಈ ಪ್ಯಾಕೇಜ್ ಮೂಲಭೂತವಾಗಿ ಬೆಳವಣಿಗೆಯನ್ನು ಉತ್ತೇಜಿಸುವ ಮತ್ತು ಅತ್ಯಂತ ಸ್ವಾವಲಂಭಿ ಭಾರತವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ ಎಂದು ವಿತ್ತ ಸಚಿವೆ ತಿಳಿಸಿದ್ದಾರೆ.
ಸಣ್ಣ, ಅತಿಸಣ್ಣ, ಮಧ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂಪಾಯಿ ಜಾಮೀನು ರಹಿತ ಸಾಲ ನೀಡಲು ಮೀಸಲಿರಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಇದೇ ವೇಳೆ ತೆರಿಗೆದಾರರಿಗೆ ಬಂಪರ್ ಗಿಫ್ಟ್ ನೀಡಿದ ಸಚಿವೆ, 18 ಸಾವಿರ ಕೋಟಿ ರೂಪಾಯಿ ಆದಾಯ ತೆರಿಗೆಯನ್ನು ವಾಪಸ್ ನೀಡುವುದಾಗಿ ತಿಳಿಸಿದರು.
15 ಸಾವಿರ ರೂಪಾಯಿಗೂ ಕಡಿಮೆ ವೇತನಹೊಂದಿರುವ ಉದ್ಯೋಗಿಗಳಿಗೆ ತಕ್ಷಣ ಇಪಿಎಫ್ ವಾಪಸ್ ನೀಡಲಾಗುವುದು. ಆಗಸ್ಟ್ ವರೆಗೆ ಇಪಿಎಫ್ ಹಣವನ್ನು ಸರ್ಕಾರವೇ ಪಾವತಿಸಲಿದೆ ಎಂದು ಸೀತಾರಾಮನ್ ಹೇಳಿದ್ದಾರೆ.
ಇದರ ಜೊತೆಗೆ ಮುಂದಿನ ಮೂರು ತಿಂಗಳುಗಳ ಕಾಲ ಭಾರತದಲ್ಲಿರುವ 80 ಕೋಟಿ ಜನರಿಗೆ ಐದು ಕೆಜಿ ಅಕ್ಕಿ ಅಥವಾ ಗೋಧಿ ಉಚಿತವಾಗಿ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಅಲ್ಲದೇ ಮುಂದಿನ ಮೂರು ತಿಂಗಳ ಕಾಲ 8 ಕೋಟಿ ಬಡ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಎಲ್ಲ ಕುಟುಂಬದವರಿಗೆ ಮೂರು ತಿಂಗಳ ಕಾಲ ಒಂದು ಕೆಜಿ ಧವಸ-ಧಾನ್ಯ ಉಚಿತವಾಗಿ ನೀಡುವುದಾಗಿ ಸರ್ಕಾರ ತಿಳಿಸಿದೆ.