ಕೊರೊನಾ ಭೀತಿಯ ನಡುವೆ ಭೂಕಂಪ : ದೆಹಲಿಯಲ್ಲಿ ಹೆಚ್ಚಿದ ಆತಂಕ!
ಕೊರೊನಾ ಭೀತಿಯ ನಡುವೆ ದೆಹಲಿಯಲ್ಲಿ ಜನ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊರೊನಾ ಹರಡುವ ಭೀತಿಯಲ್ಲಿ ಮನೆಯಲ್ಲೇ ಇರಬೇಕಾದ ಅನಿವಾರ್ಯತೆ ಒಂದೆಡೆಯಾದರೆ ಮತ್ತೊಂದೆಡೆ ಭೂಕಂಪನದಿಂದಾಗಿ ಮನೆಯಿಂದ ಹೊರಬರಬೇಕಾದ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ.
ಹೌದು… ದೆಹಲಿಯಲ್ಲಿ ಸತತ 2ನೇ ದಿನ ಲಘು ಭೂಕಂಪನ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ 2.7 ತೀವ್ರತೆ ದಾಖಲಾಗಿದೆ. ಇದೇ ಏ.12 ರಂದು ಸಂಜೆ 5.45ರ ಸುಮಾರಿಗೆ ಭೂಕಂಪನ ಸಂಭವಿಸಿ, ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲಾಗಿತ್ತು. ನಿನ್ನೆ ಎರಡನೇ ಬಾರಿಗೆ ಭೂಕಂಪನದ ಅನುಭವವಾಗಿದ್ದು ವರದಿಯಾಗಿದೆ. ಭೂಕಂಪನವಾದ ಸ್ಥಳದ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಿದೆ. ಆದರೆ ದೆಹಲಿ-ಉತ್ತರ ಪ್ರದೇಶ ಗಡಿಯನ್ನು ಕೇಂದ್ರ ಬಿಂದು ಎಂದು ಗುರುತಿಸಲಾಗಿತ್ತು.
ಅಷ್ಟು ಮಾತ್ರವಾಲ್ಲದೆ ದೆಹಲಿಯ ಪಕ್ಕದ ನಗರಗಳಾದ ನೋಯ್ಡಾ, ಗಾಜಿಯಾಬಾದ್ ನಲ್ಲಿ ಭೂಕಂಪನ ಉಂಟಾಗಿದ್ದು ಜನ ಭಯಭೀತರಾಗಿದ್ದಾರೆ. ಈ ಬಗ್ಗೆ ಜನ ತಮ್ಮ ಅನುಭವ ಹಂಚಿಕೊಂಡಿದ್ದು, ಅದೃಷ್ಟವಶಾತ್ ಯಾವುದೇ ಸಾವು ನೋವು ಮತ್ತು ಆಸ್ತಿ–ಪಾಸ್ತಿ ಹಾನಿಯಾಗಿಲ್ಲ.
ಭಾನುವಾರ ಸಂಜೆ 5.45ಕ್ಕೆ ಭೂಕಂಪ ಸಂಭವಿಸಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಹೀಗಾಗಿ ಮತ್ಯಾವಾಗ ಇಂತಹ ಅನುಭವವಾಗುತ್ತದೆಯೋ ಎನ್ನುವ ಭಯದಲ್ಲಿ ಜನ ದಿನ ಕಳೆಯುತ್ತಿದ್ದಾರೆ. ಒಂದು ವೇಳೆ ಭೂಕಂಪನದ ತೀವ್ರತೆ ಹೆಚ್ಚಾದರೆ ಜನ ಕೊರೊನಾ ಭೀತಿಯಿಂದಲೇ ಮನೆ ಬಿಟ್ಟು ಹೊರಬರಬೇಕಾದಂತ ಸ್ಥಿತಿ ಎದುರಾಗುವ ಆತಂಕವಿದೆ.