“ದಯವಿಟ್ಟು ನಮ್ಗೆ ಊಟ ಕೊಡಿ ಸರ್” – ಯಾರಿಗೇಳೋಣ ಗದಗ ಮಂದಿಯ ಸಂಕಷ್ಟ?
ನಮ್ಮ ಕಷ್ಟ ಕೇಳೋರಿಲ್ಲ. ನಮಗೆ ಊಟ ಕೊಡಿ, ಜೀವನ ನಡೆಸೋಕೆ ದಾರಿ ಮಾಡಿಕೊಡಿ. ನೀವು ಹೇಳಿದಂತೆ ನಾವು ಮನೆಬಿಟ್ಟು ಹೊರಬರುತ್ತಿಲ್ಲ. ಆದರೆ ನಮ್ಮ ಜೀವನಕ್ಕಾಗಿ ನೀವು ಸಹಕರಿಸಿ ಎಮದು ಗದಗ ಜಿಲ್ಲೆಯ ಹೊಂಬಳ ನಾಕಾ ಜನತಾ ಕಾಲೋನಿ ಜನ ಆಹಾರಕ್ಕಾಗಿ ಗೋಳಾಡುತ್ತಿದ್ದಾರೆ.
ಹೌದು… ದೇಶಾದ್ಯಂತ ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದೆ. ಕೂಲಿ ಮಾಡಿಕೊಂಡು ಬದುಕುವ ಜನರ ಪಾಡಂತೂ ಹೇಳೋ ಹಾಗೇ ಇಲ್ಲ. ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಜಿಲ್ಲಾಧಿಕಾರಿ, ನಗರಸಭೆ ಅಧಿಕಾರಿಗಳಿಗೆ ಕೈಮುಗಿದು ಪರಿ ಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ. ಉಚಿತ ಹಾಲು ಇಲ್ಲ, ದಿನಸಿ, ಪಡಿತರ ಧಾನ್ಯವೂ ನೀಡಿಲ್ಲ ಅಂತ ವಿಡಿಯೋ ಮಾಡುವ ಮೂಲಕ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಎಂಥಹ ಸ್ಥಿತಿ ನಿರ್ಮಾಣವಾಗಿದೆ ನೋಡಿ. ಒಂದು ಕಡೆ ಜನ ಲಾಕ್ ಡೌನ್ ಅನ್ನ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅಸಡ್ಡೆ ತೋರಿ ಬೀದಿಗಿಳಿಯುತ್ತಿದ್ದಾರೆ. ಮತ್ತೊಂದು ಕಡೆ ಜನ ಲಾಕ್ ಡೌನ್ ಗೆ ನಾವು ಸಹಕರಿಸುತ್ತೇವೆ ನಮಗೆ ಊಟ ಕೊಡೆ ಎಂದು ಪರಿ ಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ.
ಮಹಿಳೆಯರು, ಮಕ್ಕಳು, ಗಂಡಸರು, ವಯಸ್ಸಾದವರು ಬೀದಿಗಿಳಿದು ತಮ್ಮ ನೋವನ್ನು ತೋಡಿಕೊಳ್ಳುತ್ತಿದ್ದ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಚುನಾವಣೆಯಲ್ಲಿ ಮನೆ ಮನೆಗೆ ಹೋಗಿ ಕೈ ಮುಗಿದು ಮತ ಕೇಳುವ ರಾಜಕಾರಣಿಗಳು ಜನರ ಸಂಕಷ್ಟಕ್ಕೆ ಸಹಾಯವಾಗಬೇಕಿದೆ.