ಗದ್ದೆಯಲ್ಲಿ ನಾಟಿ ಮಾಡಿದ ಶೋಭಾ ಕರಂದ್ಲಾಜೆ : ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ!
ಮಂಡ್ಯ ಹೊನಗನಹಳ್ಳಿಯಲ್ಲಿ ಗದ್ದೆಯಲ್ಲಿ ಭತ್ತ ನಾಟಿ ಮಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರೈತ ಮಹಿಳೆಯಾಗಿದ್ದಾರೆ. ಇದೇ ವೇಳೆ ಸಚಿವ ನಾರಾಯಣಗೌಡರಿಂದ ನಾಟಿ ಮಾಡುವ ಯಂತ್ರಕ್ಕೆ ಚಾಲನೆ ನೀಡಿದ್ದಾರೆ. ಇದೇ ವೇಳೆ ಖಾಸಗಿ ಸಮೂದಾಯ ಭವನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಗೆ ಬಿಜೆಪಿ ಮುಖಂಡ ಚಂದಗಾಲು ಶಿವಣ್ಣರನ್ನು ಆಹ್ವಾನಿಸಿಲ್ಲ ಅಂತ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ.
ಜನಾಶೀರ್ವಾದ ಯಾತ್ರೆ ಹಿನ್ನೆಲೆಇಂದು (ಆಗಸ್ಟ್ 16) ಮಂಡ್ಯಕ್ಕೆ ಆಗಮಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಗದ್ದೆಯಲ್ಲಿ ರೈತ ಮಹಿಳೆಯಂತೆ ನಾಟಿ ಮಾಡಿದ್ದಾರೆ. ಮೊದಲು ಜಿಲ್ಲೆಯ ಮದ್ದೂರು ತಾಲೂಕಿನ ರುದ್ರಾಕ್ಷಿಪುರ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಶೋಭಾ ಅವರು ಪಡಿತರ ಪರಿಶೀಲನೆ ಮಾಡಿದರು. ನಂತರ ಹೊನಗನಹಳ್ಳಿಯ ಗದ್ದೆಯಲ್ಲಿ ನಾಟಿ ಮಾಡಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶೋಭಾ ಕರಂದ್ಲಾಜೆ, ‘ರೈತ ಮಹಿಳೆಗೆ ದೇಶದ ಕೃಷಿ ಮಂತ್ರಿಯಾಗುವ ಅವಕಾಶ ಸಿಕ್ಕಿದೆ. ಅವಕಾಶ ಕೊಟ್ಟ ನರೇಂದ್ರ ಮೋದಿ ಅವರಿಗೆ ಧನ್ಯವಾದ. ರೈತರ ಆದಾಯ ದ್ವಿಗುಣಗೊಳಿಸುವುದು ಪ್ರಧಾನಿಗಳ ಆಶಯ. ಚಿಕ್ಕ-ಚಿಕ್ಕ ರೈತರನ್ನ ಒಟ್ಟಗೂಡಿಸಿ ಕೃಷಿಗೆ ಉತ್ತೇಜನ ನೀಡಬೇಕು. ಕೃಷಿ ಮೂಲಭೂತ ಸೌಕರ್ಯ ನಿಧಿಯಲ್ಲಿ 1 ಲಕ್ಷ ಕೋಟಿ ಮೀಸಲಿಡಲಾಗಿದೆ. ಸಬ್ಸಿಡಿ, ಸಾಲ, ಕೃಷಿ ಉತ್ಪನ್ನಗಳನ್ನ ಒದಗಿಸಿ ಕೃಷಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಆತ್ಮನಿರ್ಭರ ಯೋಜನೆಯಡಿ ಸಾವಯವ ಬೆಲ್ಲ ಹೆಚ್ಚು ರಫ್ತಾಗಬೇಕು’ ಎಂದು ಹೇಳಿದರು.
ಇದೇ ವೇಳೆ ಬಿಜೆಪಿ ಕಾರ್ಯಕರ್ತರ ಸಭೆಗೆ ಬಿಜೆಪಿ ಮುಖಂಡ ಚಂದಗಾಲು ಶಿವಣ್ಣರನ್ನು ಆಹ್ವಾನಿಸಿಲ್ಲ ಅಂತ ಸಭೆಯ ಮಧ್ಯ ಎದ್ದು ಬಿಜೆಪಿ ಕಾರ್ಯಕರ್ತರು ಕಿರುಚಾಡಿದರು. ಈ ವೇಳೆ ಶೋಭಾ ಕರಂದ್ಲಾಜೆ ಕಾರ್ಯಕರ್ತರನ್ನು ಸಮಾಧಾನ ಮಾಡಿದರೂ ತಲೆ ಕಡೆಸಿಕೊಳ್ಳದೇ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.