ಕೊರೊನಾ ಸೋಂಕಿತರ ಬಗ್ಗೆ ಸಚಿವರಿಗಿಲ್ಲ ಸರಿಯಾದ ಮಾಹಿತಿ : ಸೋಂಕಿತರು 18? 19?
ಕೊರೊನಾ ಸೋಂಕಿತರ ಬಗ್ಗೆ ಸಚಿವರಿಗೆ ಸರಿಯಾದ ಮಾಹಿತಿ ಇಲ್ಲದೇ ಒಬ್ಬರು 18 , ಇನ್ನೊಬ್ಬರು 19 ಜನ ಸೋಂಕಿತರು ಎಂದೇಳುತ್ತಿದ್ದಾರೆ. ಇಂತಹ ಸೂಕ್ಷ್ಮ ವಿಚಾರದ ಬಗ್ಗೆ ಸಚಿವರಿಗೇ ಸರಿಯಾದ ಮಾಹಿತಿ ಇಲ್ಲವಾ ಎನ್ನುವ ಪ್ರಶ್ನೆ ಈಗ ಎದುರಾಗಿದೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರ ಪ್ರಕಾರ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 19. ಇಂದು ಒಟ್ಟು ನಾಲ್ಕು ಜನರಲ್ಲಿ ಕೊರೊನಾ ವೈರಸ್ ಪತ್ತೆಯಾಗಿವೆ ಎಂದಿದ್ದಾರೆ. ಆದರೆ ಆರೋಗ್ಯ ಇಲಾಖೆ ಕೊಟ್ಟಿರುವ ಮಾಹಿತಿ ಪ್ರಕಾರ ಜೊತೆಗೆ ಆರೋಗ್ಯ ಸಚಿವರು ಹೇಳುವ ಪ್ರಕಾರ 18 ಸೋಂಕಿತರು ಎನ್ನಲಾಗುತ್ತಿದೆ. ಇಂದು 3 ಜನರಲ್ಲಿ ಸೋಂಕು ತಗುಲಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಹೇಳಿದ್ದಾರೆ.
ಡಾ.ಕೆ ಸುಧಾಕರ್ ಅವರು ಹೇಳುವ ಪ್ರಕಾರ, ಗೌರಿಬಿದನೂರಿನಲ್ಲಿ ಒಂದು ಪ್ರಕರಣ ದಾಖಲಾಗಿದೆ. ಇನ್ನೂ ಮೂರು ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿವೆ ಎಂದು ಹೇಳಿದ್ದಾರೆ. ಹಾಗಾದ್ರೆ ಇನ್ನೊಬ್ಬರು ಯಾರು..? ಇಲ್ಲಿ ಸುಧಾಕರ್ ಅವರಿಗೆ ಸರಿಯಾದ ಮಾಹಿತಿ ಇಲ್ಲವೋ..? ಅಥವಾ ಆರೋಗ್ಯ ಸಚಿವರಲ್ಲಿ ಸರಿಯಾದ ಮಾಹಿತಿ ಇಲ್ವೋ..? ಅನ್ನೋ ಅನುಮಾನ ಶುರುವಾಗಿದೆ.
ಯಾಕೆಂದರೆ ಸೋಂಕಿತರನ್ನು ಮಾತ್ರವಲ್ಲದೇ. ಅವರು ಓಡಾಡಿದ, ಅವರ ಕುಟುಂಬದ, ಬಂಧುಗಳ ಬಗ್ಗೆ ಮಾಹಿತಿ ಕಲೆ ಹಾಕಿ ಚಿಕಿತ್ಸೆ ನೀಡಿ, ತೀರ್ವ ನಿಗಾದಲ್ಲಿಟ್ಟು ಸೋಂಕು ತಡೆಗೆ ಕಾರ್ಯಗಳು ನಡೆಯುತ್ತಿವೆ. ಹೀಗೆ ಸರಿಯಾದ ಮಾಹಿತಿ ನೀಡದೇ ಇದ್ದರೆ ಸೋಂಕು ತಡೆಗಟ್ಟುವುದು ಹೇಗೆ..? ಎನ್ನುವ ಗೊಂದಲ ಇದೆ. ಸಚಿವರಲ್ಲೇ ಗೊಂದಲ ಇದ್ದರೆ ಹೇಗೆ..? ಜೊತೆಗೆ ಇಂಥಹ ಸೂಕ್ಷ್ಮ ವಿಚಾರಗಳ ಬಗ್ಗೆ ಜನರಿಗೆ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಕೊಡಬೇಕಾದ ಸಚಿವರೇ ಈ ರೀತಿ ಗೊಂದಲ ಸೃಷ್ಟಿ ಮಾಡಿದರೆ ಯಾರ ಮಾತನ್ನು ನಂಬೋದು ಎನ್ನುವ ಅನುಮಾನ ಶುರುವಾಗಿದೆ.