ಕ್ಯುರೇಟಿವ್ ಅರ್ಜಿ ಸಲ್ಲಿಸಿದ ನಿರ್ಭಯಾ ಪ್ರಕರಣದ ಅಪರಾಧಿ : ಗಲ್ಲು ಶಿಕ್ಷೆಗೆ ತಡೆ ಸಾಧ್ಯತೆ…
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಜನವರಿ 22ಕ್ಕೆ ಗಲ್ಲು ಶಿಕ್ಷೆ ಜಾರಿಯಾಗುತ್ತಿದ್ದಂತೆ ಅಪರಾಧಿಯಲ್ಲೊಬ್ಬನಾದ ವಿನಯ್ ಶರ್ಮ ಸುಪ್ರೀ ಕೋರ್ಟ್ ನಲ್ಲಿ ಗುರುವಾರ ಕ್ಯೂರೇಟಿವ್ ಅರ್ಜಿ ಸಲ್ಲಿಸಿದ್ದಾನೆ.
ಜನವರಿ 22ರಂದು ಬೆಳಗ್ಗೆ 7 ಗಂಟೆಗೆ ಗಲ್ಲಿಗೇರಿಸುವಂತೆ ದೆಹಲಿಯ ಪಟಿಯಾಲ ಕೋರ್ಟ್ ಮೊನ್ನೆ ಸೋಮವಾರ ಘೋಷಿಸಿದ ಬಳಿಕ ವಿನಯ್ ಶರ್ಮ ಇಂದು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾನೆ.
ತಿಹಾರ್ ಜೈಲಿನಲ್ಲಿ ಜನವರಿ 22ರಂದು ಮುಕೇಶ್ ಸಿಂಗ್, ಪವನ್ ಗುಪ್ತಾ, ವಿನಯ್ ಶರ್ಮ ಮತ್ತು ಅಕ್ಷಯ್ ಕುಮಾರ್ ಸಿಂಗ್ ನನ್ನು ಗಲ್ಲಿಗೇರಿಸಲಾಗುತ್ತದೆ. ನ್ಯಾಯಾಲಯ ಗಲ್ಲು ಶಿಕ್ಷೆ ಪ್ರಕಟಿಸುತ್ತಿದ್ದಂತೆ ನಾಲ್ವರು ಅಪರಾಧಿಗಳು ಭಾವೋದ್ರೇಕಕ್ಕೊಳಗಾಗಿ ಅತ್ತಿದ್ದರು.
2012ರ ಡಿಸೆಂಬರ್ 16ರಂದು 23 ವರ್ಷದ ಯುವತಿ ನಿರ್ಭಯಾ ಮತ್ತು ಆಕೆಯ ಸ್ನೇಹಿತ ದೆಹಲಿಯಲ್ಲಿ ಸಿನಿಮಾ ವೀಕ್ಷಣೆ ಮಾಡಿ ಖಾಸಗಿ ಬಸ್ಸಿನಲ್ಲಿ ಮನೆಗೆ ಹಿಂತಿರುಗಿ ಬರುತ್ತಿದ್ದ ವೇಳೆ ಕೇವಲ 6 ಮಂದಿಯಿದ್ದ ಬಸ್ಸಿನಲ್ಲಿ ನಾಲ್ವರು ಆಕೆಯ ಮೇಲೆ ಅತ್ಯಾಚಾರ ನಡೆಸಿ ಕಬ್ಬಿಣದ ರಾಡ್ ನಿಂದ ಹಿಂಸೆ ನೀಡಿ ರಸ್ತೆಯಲ್ಲಿ ಎಸೆದು ಹೋಗಿದ್ದರು.
ನಂತರ ಆಸ್ಪತ್ರೆಗೆ ಸೇರಿಸಿದ್ದ ಆಕೆ ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 29ರಂದು ಮೃತಪಟ್ಟಿದ್ದಳು. ಅತ್ಯಾಚಾರವೆಸಗಿದ್ದ ಆರು ಮಂದಿಯಲ್ಲಿ ರಾಮ್ ಸಿಂಗ್ ಎಂಬುವವನು ಜೈಲಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರೆ ಮತ್ತೊಬ್ಬ ಅಪ್ರಾಪ್ತನಾಗಿದ್ದರಿಂದ ಮೂರು ವರ್ಷ ಕಳೆದ ನಂತರ ಬಿಡುಗಡೆಯಾಗಿದ್ದನು.
ಸದ್ಯಕ್ಕೆ ನಿರ್ಭಯಾ ಪ್ರಕರಣದ ಅಪರಾಧಿ ಕ್ಯೂರೇಟಿವ್ ಅರ್ಜಿ ಸಲ್ಲಿಸಿದ್ದು ಗಲ್ಲು ಶಿಕ್ಷೆಗೆ ತಡೆ ನೀಡಲಾಗುತ್ತಾ..? ಅಥವಾ ಅರ್ಜಿ ನಿರಾಕರಿಸಿ ಜನವರಿ 22ಕ್ಕೇ ಅಪರಾದಿಗಳಿಗೆ ಗಲ್ಲು ಶಿಕ್ಷೆ ನೀಡಲಾಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.