ಚೀನಾ ಗಡಿ ವಿವಾದ; “ನಿಖರವಾಗಿ ಏನು ನಡೆಯುತ್ತಿದೆ ಎಂದು ಭಾರತಕ್ಕೆ ತಿಳಿಸಿ” – ರಾಹುಲ್ ಟ್ವೀಟ್
ಈ ತಿಂಗಳ ಆರಂಭದಲ್ಲಿ ಲಡಾಕ್ನಲ್ಲಿ ಭಾರತ ಮತ್ತು ಚೀನ ಮಿಲಿಟರಿ ಮುಖಾಮುಖಿಯಾದ ಹಿನ್ನೆಲೆಯಲ್ಲಿ ಮತ್ತು ಚೀನಾದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ “ನಿಖರವಾಗಿ ಏನು ನಡೆಯುತ್ತಿದೆ ಎಂದು ದೇಶಕ್ಕೆ ತಿಳಿಸಿ” ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ದೇಶದಲ್ಲಿ 1.6 ಲಕ್ಷಕ್ಕೂ ಹೆಚ್ಚು ಜನರಿಗೆ ತಗುಲಿರುವ ಕೊರೋನವೈರಸ್ ಸೋಂಕಿನ ವಿರುದ್ಧ ಭಾರತವು ಹೋರಾಡುತ್ತಿರುವಾಗ ಈ ವಿಷಯದಲ್ಲಿ ಕೇಂದ್ರ ಸರ್ಕಾರದ ನಿರಂತರ ಮೌನ “ಬೃಹತ್ ಊಹಾಪೋಹ ಮತ್ತು ಅನಿಶ್ಚಿತತೆಗೆ” ಕಾರಣವಾಗಿದೆ ಎಂದು ರಾಹುಲ್ ಹೇಳಿದ್ದಾರೆ. ಲಡಾಕ್ನ ಪರಿಸ್ಥಿತಿ ಮತ್ತು ಚೀನಾದೊಂದಿಗಿನ ಉದ್ವಿಗ್ನತೆಯನ್ನು ಗಂಭೀರ ರಾಷ್ಟ್ರೀಯ ಕಾಳಜಿಯಾಗಿ ಪರಿಗಣಿಸಿ ಎಂದು ಕಾಂಗ್ರೆಸ್ ಹೇಳಿದೆ.
“ಚೀನಾದೊಂದಿಗಿನ ಗಡಿ ಪರಿಸ್ಥಿತಿಯ ಬಗ್ಗೆ ಸರ್ಕಾರದ ಮೌನವು ಬಿಕ್ಕಟ್ಟಿನ ಸಮಯದಲ್ಲಿ ಭಾರಿ ಊಹಾಪೋಹಗಳಿಗೆ ಮತ್ತು ಅನಿಶ್ಚಿತತೆಗೆ ಉತ್ತೇಜನ ನೀಡುತ್ತಿದೆ. ಕೇಂದ್ರ ಸರ್ಕಾರ ಏನಾಗುತ್ತಿದೆ ಎಂಬುದನ್ನು ದೇಶಕ್ಕೆ ನಿಖರವಾಗಿ ಹೇಳಬೇಕು” ಎಂದು ರಾಹುಲ್ ಗಾಂಧಿ ಶುಕ್ರವಾರ ಬೆಳಿಗ್ಗೆ ಟ್ವೀಟ್ ಮಾಡಿದ್ದಾರೆ.
The Government’s silence about the border situation with China is fueling massive speculation and uncertainty at a time of crisis.
GOI must come clean and tell India exactly what’s happening.
— Rahul Gandhi (@RahulGandhi) May 29, 2020
ಮೇ 5 ಮತ್ತು 6 ರಂದು ಲಡಾಕ್ನ ಪಾಂಗೊಂಗ್ ಸರೋವರ ಪ್ರದೇಶದಲ್ಲಿ ಉಭಯ ರಾಷ್ಟ್ರಗಳ ಸೈನಿಕರ ನಡುವೆ ನಡೆದ ಮಾತಿನ ಚಕಮಕಿಯಲ್ಲಿ ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನತೆ ಹೆಚ್ಚಾಗಿದ್ದು, ಇದರಲ್ಲಿ ಹಲವಾರು ಭಾರತೀಯ ಸೈನಿಕರು ಗಾಯಗೊಂಡಿದ್ದಾರೆ ಎನ್ನಲಾಗಿತ್ತು.
ಅಂದಿನಿಂದ, ಚೀನಾದ ಸೈನ್ಯದ ಆಕ್ರಮಣಗಳ ಬಗ್ಗೆ ಅನೇಕ ವರದಿಗಳು ಬಂದಿವೆ, ಚೀನಾ ಸೈನಿಕರನ್ನು ಪಂಗೊಂಗ್ ಸರೋವರದ ಮೋಟಾರು ದೋಣಿಗಳಲ್ಲಿ ಗುರುತಿಸಲಾಗಿದೆ. ಚೀನೀ ಹೆಲಿಕಾಪ್ಟರ್ಗಳು ಸಹ ಈ ಪ್ರದೇಶದಲ್ಲಿ ಕಂಡುಬಂದಿವೆ.