ಡಾಲಿ ಅಭಿಮಾನಿಗಳಿಂದ ಬೇಸರ : ವಿವಾದ ಸೃಷ್ಟಿಸಿದ ‘ಬಡವ ರಾಸ್ಕಲ್’ ಗೀತೆ – ಧನಂಜಯ್ ಸ್ಪಷ್ಟನೆ
ಸಿನಿಮಾದಲ್ಲಿ ಬಳಕೆಯಾಗುವ ಹೆಸರು, ಸಂಭಾಷಣೆಗಳು ಚಲನಚಿತ್ರಗಳ ಶೀರ್ಷಿಕೆಗಳಾಗುವುದು ಇತ್ತೀಚಿಗೆ ವಾಡಿಕೆಯಾಗಿಬಿಟ್ಟದೆ. ಆದರೆ ಇಲ್ಲಿ ಸಿನಿಮಾದ ಶೀರ್ಷಿಕೆಯು ಹಾಡೊಂದರ ಸಾಲಾಗಿ ವಿವಾದಕ್ಕೆ ಕಾರಣವಾಗಿದೆ. ನಟ ಡಾಲಿ ಧನಂಜಯ್ ಅಭಿನಯದ ಬಡವ ರಾಸ್ಕಲ್ ಎಂಬ ಸಿನಿಮಾ ಶೀರ್ಷಿಕೆಯ ಹೆಸರನ್ನು ಬಳಸಿಕೊಂಡ ಹಾಡೊಂದು ಈಗ ವೈರಲ್ ಆಗಿದ್ದು ಸೋಮವಾರ, ನ.4 ರಂದು ಡಾಲಿ ಅಭಿಮಾನಿಗಳು ಇದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ನಟ, ನಿರ್ದೇಶಕ ರಿಷಭ್ ಶೆಟ್ಟಿ ‘ಒಂಭತ್ತು ಸುಳ್ಳು ಕಥೆಗಳು’ ಎಂಬ ಚಿತ್ರದಲ್ಲಿ ‘ಏನೋ ಬಡವ ರಾಸ್ಕಲ್’ ಎಂದು ಹಾಡಿದ್ದಾರೆ. ಈ ಹಾಡನ್ನು ಕೇಳಿದ ಡಾಲಿ ಅಭಿಮಾನಿಗಳು ಡಾಲಿ ಸಿನಿಮಾದ ಗೀತೆ ಇರಬಹುದು ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ಇದು ಆ ಸಿನಿಮಾದ ಗೀತೆಯಲ್ಲ ಎಂದು ತಿಳಿದ ಕೂಡಲೆ ಗೀತೆಯನ್ನು ರಚಿಸಿದವರ ಮೇಲೆ ಮತ್ತು ಹಾಡು ಹಾಡಿರುವ ರಿಷಭ್ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ನ.1 ರಂದು ರಿಷಭ್ ಹಾಡಿರುವ ರಾಸ್ಕಲ್ ಗೀತೆಯನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಯಿತು. ಈ ಕುರಿತ ಲೇಖನವೂ ಪ್ರಕಟವಾಯಿತು
ಇದನ್ನು ಕಂಡ ಧನಂಜಯ್ ಹಾಡಿನ ಬಗ್ಗೆ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ. “ನಮ್ಮ ಚಿತ್ರಕ್ಕೂ ರಿಷಭ್ ಅದ್ಭುತವಾಗಿ ಹಾಡಿರುವ ಈ ಹಾಡಿಗೂ ಯಾವುದೇ ಸಂಬಂಧವಿಲ್ಲ. ಯಾವ ಸಿನಿಮಾ ಗೀತೆ ಎಂಬುದು ನನಗೆ ಗೊತ್ತಿಲ್ಲ. ಆ ಚಿತ್ರತಂಡಕ್ಕೆ ಶುಭವಾಗಲಿ, ನಮ್ಮ ಚಿತ್ರವನ್ನು ಪ್ರಮೋಟ್ ಮಾಡಿದ್ದಕ್ಕೆ ಧನ್ಯವಾದಗಳು”, ಎಂದು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ನಂತರದಲ್ಲಿ ಡಾಲಿ ಅಭಿಮಾನಿಗಳು ಗೀತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಯಾವ ಪದದ ಮೇಲೂ ಯಾರಿಗೂ ಹಕ್ಕಿಲ್ಲ. ಯಾರು ಯಾವ ಪದವನ್ನಾದರೂ ಬಳಸಬಹುದು. ಆದರೆ ಎಲ್ಲದಕ್ಕೂ ವೃತ್ತಿ ಧರ್ಮ ಎಂಬುದು ಇದೆ. ಡಾಲಿಯ ಬ.ರಾಸ್ಕಲ್ ಸಿನಿಮಾ ಬರುತ್ತಿದೆ ಎಂದು ತಿಳಿದ ನಂತರವೂ ಆ ಸಿನಿಮಾ ಶೀರ್ಷಿಕೆಯ ಪದವನ್ನಿಟ್ಟುಕೊಂಡು ಹಾಡು ಮಾಡಿರುವುದು ಸರಿಯಲ್ಲ. ಕನ್ನಡ ಗೊತ್ತಿಲ್ಲದವರಿಗೆ ಈ ಹಾಡನ್ನು ಮಾಡಿದ್ದಾರೆ. ಆದರೆ ಕನ್ನಡ ಗೊತ್ತಿಲ್ಲದವರಿಗೆ ಈ ಹಾಡು ಹೇಗೆ ಅರ್ಥವಾಗುತ್ತದೆ”, ಎಂದು ಮುರುಳಿ ಎಂಬುವವರು ಕಿಡಿಕಾರಿದ್ದಾರೆ. ಒಂದು ಕಡೆ ಗೀತೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನೊಂದೆಡೆ ರಿಷಭ್ ಅವರು ಧನಂಜಯ್ ಅವರ ಟ್ವೀಟ್ ನ್ನು ರೀಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ.
“ಧನ್ಯವಾದಗಳು ಗೆಳೆಯ, ತಮ್ಮ ಅಭಿನಯದ ಬ.ರಾಸ್ಕಲ್ ಚಿತ್ರಕ್ಕೆ ಶುಭವಾಗಲಿ”, ಎಂದು ಹೇಳಿದ್ದಾರೆ. ಒಂಭತ್ತು ಸುಳ್ಳು ಕಥೆಗಳು ಚಿತ್ರದ ಗೀತೆ ಈ ಮಟ್ಟಿಗೆ ವಿವಾದಕ್ಕೆ ಕಾರಣವಾಗಿದೆ. ರಿಷಭ್ ಶೆಟ್ಟಿ ಡಾಲಿ ಚಿತ್ರಕ್ಕೂ ಶುಭ ಕೋರುವ ಮೂಲಕ ವಿವಾದಕ್ಕೆ ಅಂತ್ಯ ಹಾಡಿದ್ದಾರೆ. ನಟ ಡಾಲಿ ಧನಂಜಯ್ ಮುಖ್ಯ ಭೂಮಿಕೆಯಲ್ಲಿರುವ ಬಡವ ರಾಸ್ಕಲ್ ಚಿತ್ರವು ಒಂದು ಮನರಂಜನಾತ್ಮಕ ಚಿತ್ರವಾಗಿದ್ದು ಶಂಕರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಧನಂಜಯ್ ನಾಯಕನ ಜೊತೆಗೆ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಗುಜ್ಜಾಲ್ ಪುರುಷೋತ್ತಮ್ ಸಹ ನಿರ್ಮಾಪಕರಾಗಿದ್ದಾರೆ. ಚಿತ್ರದಲ್ಲಿ ಧನಂಜಯ್, ಅಮೃತಾ ಅಯ್ಯಂಗಾರ್ ಮುಖ್ಯಭೂಮಿಕೆಯಲ್ಲಿದ್ದಾರೆ.