ತಪ್ಪುಗಳಿಂದ ಪಾಠ ಕಲಿಯಿರಿ; ಜನರ ಜೀವನಕ್ಕೆ ಯೋಜನೆ ರೂಪಿಸಿ: ರಘುರಾಮ್ ರಾಜನ್
ದೇಶಾದ್ಯಂತ 21 ದಿನಗಳ ಲಾಕ್ಡೌನ್ ಘೋಷಿಸಲಾಗಿದ್ದು, ಏಪ್ರಿಲ್ 14ಕ್ಕೆ ಲಾಕ್ ಡೌನ್ ಕೊನೆಯಾಗಲಿದೆ. ಲಾಕ್ಡೌನ್ ನಂತರ ಜನರ ಜೀವನ ಎಂದಿನಂತೆ ಸಾಗುತ್ತಿರುತ್ತದೆ ಎಂದು ಸಾಮಾನ್ಯ ಜನತೆ ಅಂದುಕೊಂಡಿದ್ದರೆ ಅದು ತಪ್ಪು ಕಲ್ಪನೆ. ದೇಶದಲ್ಲಿ ಹಲವು ನಾಗರಿಕರಿಗೆ ಮುಂದೆ ಜೀವನದ ಪರಿಸ್ಥಿತಿ ಇದೇ ರೀತಿ ಇರುವುದಿಲ್ಲ ಎಂದು ಆರ್ ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಎಚ್ಚರಿಕೆ ನೀಡಿದ್ದಾರೆ.
ಕೊರೋನಾ ಸೋಂಕಿನ ವಿರುದ್ಧ ಭಾರತ ಗೆದ್ದರೆ ಎಲ್ಲವೂ ಮುಗಿದಂತೆ ಎಂದು ಹೇಳಿದಷ್ಟು ಸುಲಭವಲ್ಲ, ಇಷ್ಟು ದಿನಗಳ ಲಾಕ್ ಡೌನ್ ನಿಂದ ಉಂಟಾದ ಆರ್ಥಿಕ ಸಂಕಷ್ಟದಿಂದ ಹೊರಬರಲು ಕಷ್ಟವಿದೆ, ಸಾಕಷ್ಟು ಸಮಯವೇ ಬೇಕಾಗಬಹುದು ಎಂದು ಅವರು ಹೇಳಿದ್ದಾರೆ.
ಲಾಕ್ ಡೌನ್ ಮುಗಿದ ನಂತರ ಸರ್ಕಾರ ಆರ್ಥಿಕ ಚೇತರಿಕೆಗೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ಸಾಮಾನ್ಯ ಜನತೆ ಪರಿಸ್ಥಿತಿ ಕಷ್ಟವಾಗಬಹುದು ಎಂದು ರಘುರಾಮ್ ರಾಜನ್ ಹೇಳಿದ್ದಾರೆ.
2008-09ರಲ್ಲಿ ಜಾಗತಿಕ ಮಟ್ಟದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರ ಹದಗೆಟ್ಟಿತ್ತು. ಆದರೆ ಅಂದು ಲಾಕ್ ಡೌನ್ ಆಗಿರಲಿಲ್ಲ. ಆರ್ಥಿಕ ಚಟುವಟಿಕೆಗಳು, ವ್ಯವಹಾರಗಳು, ಜನಜೀವನ ಎಂದಿನಂತೆ ಅಂದು ಸಾಗಿತ್ತು. ಅಂದು ಸರ್ಕಾರದ ಆರ್ಥಿಕ ಪರಿಸ್ಥಿತಿ ಆರೋಗ್ಯಕರವಾಗಿತ್ತು. ಆದರೆ ಇಂದು ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಇಂದು ಕೊರೋನಾ ವೈರಸ್ ಸೋಂಕಿನಿಂದ ಭಾರತ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ತತ್ತರಿಸಿ ಹೋಗಿವೆ. ವಾರಗಟ್ಟಲೆ ಚಟುವಟಿಕೆಗಳು, ವ್ಯವಹಾರಗಳು ಸ್ಥಗಿತಗೊಂಡಿವೆ, ಈ ಎಲ್ಲಾ ಕಾರಣಗಳಿಂದ ಜನರ ಜೀವನದ ಮೇಲೆ ಪರಿಣಾಮ ಬೀರಲಿದೆ ಎಂದು ರಘುರಾಮ್ ರಾಜನ್ ತಮ್ಮ ಬ್ಲಾಗ್ ನಲ್ಲಿ ಹೇಳಿಕೊಂಡಿದ್ದಾರೆ.
ಲಾಕ್ ಡೌನ್ ನಂತರ ಮುಂದೇನು ಎಂಬ ಬಗ್ಗೆ ಸರ್ಕಾರ ಯೋಜನೆ ಹಾಕಿಕೊಳ್ಳಬೇಕಾಗಿತ್ತು. ಲಾಕ್ ಡೌನ್ ಮುಗಿದ ನಂತರ ಕೂಡ ಕೊರೋನಾ ನಿಯಂತ್ರಣಕ್ಕೆ ಬರದಿದ್ದರೆ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದರ ಜೊತೆಗೆ, ಕೋಟಿಗಟ್ಟಲೆ ಜನರ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ಅವರು ಹೇಳಿದ್ದಾರೆ.