ವಿದೇಶಿ ಬೆಂಬಲವು ವಿನಾಶಕಾರಿ ಸಿದ್ದಾಂತವಾಗಿದೆ; ಅದರಿಂದ ದೇಶವನ್ನು ರಕ್ಷಿಸಬೇಕು: ಮೋದಿ
ಕೃಷಿ ಕಾಯ್ದೆಗಳ ಕುರಿತಂತೆ ರಾಜ್ಯಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ಮತ್ತೆ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ರೈತರ ಹೋರಾಟಕ್ಕೆ ಜಾಗತಿಕ ಬೆಂಬಲ ವ್ಯಕ್ತವಾಗುತ್ತಿರುವುದರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೃಷಿ ಕಾನೂನುಗಳ ಬಗ್ಗೆ ಮಾತನಾಡಿದ ಮೋದಿ, ರೈತರು ಬೆಳೆದ ಬೆಳಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ) ಮೊದಲೂ ಇತ್ತು, ಈಗಲೂ ಇದೆ, ಮುಂದೆಯೂ ಇರಲಿದೆ ಎಂದು ಹೇಳಿದ್ದಾರೆ.
ರೈತರ ಹೋರಾಟಕ್ಕೆ ಬೆಂಬಲ ನೀಡಿರುವ ಅಂತಾರಾಷ್ಟ್ರೀಯ ಸೆಲೆಬ್ರೆಟಿಗಳದ್ದು, ’ವಿದೇಶಿ ವಿನಾಶಕಾರಿ ಸಿದ್ದಾಂತ’ ಎಂದು ಪ್ರಧಾನಿ ಹೇಳಿದ್ದಾರೆ. ಅಂತಹ “ವಿನಾಶಕಾರಿ ಸಿದ್ಧಾಂತದಿಂದ ದೇಶವನ್ನು ರಕ್ಷಿಸಿಕೊಳ್ಳಬೇಕಾಗಿದೆ” ಎಂದು ಅವರು ಹೇಳಿದ್ದಾರೆ.
“ಕೆಲವರು ಭಾರತದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಪಂಜಾಬ್ನಲ್ಲಿ ಏನಾಯಿತು ಎಂಬುದನ್ನು ನಾವು ಮರೆಯಬಾರದು. 1984 ರಲ್ಲಿ ಪಂಜಾಬ್ ಹೆಚ್ಚು ಸಂಕಷ್ಟಕ್ಕೊಳಗಾಯಿತು. ಜಮ್ಮು ಕಾಶ್ಮೀರ, ಈಶಾನ್ಯವು ಭಾರತವು ಕಷ್ಟಕ್ಕೊಳಗಾಯಿತು. ಸಿಖ್ಖರನ್ನು ದಾರಿ ತಪ್ಪಿಸಲಾಗುತ್ತಿದೆ” ಎಂದು ರೈತರ ಪ್ರತಿಭಟನೆಗೆ ಹೆಚ್ಚುತ್ತಿರುವ ಅಂತರರಾಷ್ಟ್ರೀಯ ಬೆಂಬಲವನ್ನು ಉಲ್ಲೇಖಿಸಿ ಪ್ರಧಾನಿ ಹೇಳಿದ್ದಾರೆ.
“ತಮ್ಮ ಸರ್ಕಾರ ಸಣ್ಣ ರೈತರಿಗಾಗಿ ಕೆಲಸ ಮಾಡುತ್ತಿದೆ ಎಂದು ಪುನರುಚ್ಚರಿಸಿದ ಅವರು, 2014 ರಿಂದ ರೈತನನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಕೃಷಿ ಕ್ಷೇತ್ರದಲ್ಲಿ ಬದಲಾವಣೆಗಳನ್ನು ಸರ್ಕಾರ ಪ್ರಾರಂಭಿಸಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ರೈತ ಹೋರಾಟದ ನಡುವೆ ಪಂಜಾಬ್ ಚುನಾವಣೆ: BJPಗೆ ಸೋಲೆಂದು ಕೇಸರಿ ಮುಖಂಡರ ಸ್ವತಂತ್ರ ಸ್ಪರ್ಧೆ!