ದೇಶದಲ್ಲಿ ಕೊರೊನಾ ರಣಕೇಕೆ : ಮಹಾಮಾರಿಗೆ ಓರ್ವ ಯೋಧ ಬಲಿ!
ಕಿಲ್ಲರ್ ಕೊರೊನಾ ಅಟ್ಟಹಾಸ ದೇಶದಲ್ಲಿ ಮುಮದುವರೆದಿದ್ದು, ಮಹಾಮಾರಿಗೆ ಮೊದಲ ಯೋಧ ಬಲಿಯಾದ ಘಟನೆ ನಡೆದಿದೆ.
ಇಡೇ ದೇಶವೇ ಕೊರೊನಾ ಚಾಟಿ ಏಟಿಗೆ ನಲುಗಿ ಹೋಗಿದೆ. ಕೊರೊನಾ ಕಾಡ್ಗಿಚ್ಚಿಗೆ ಸಿಆರ್’ಪಿಎಫ್ ಬೆಟಾಲಿಯನ್ ಪಡೆದ 46 ಯೋಧರನ್ನೂ ಬಿಟ್ಟಿಲ್ಲ. ಅಲ್ಲದೆ, ಮಹಾಮಾರಿಗೆ ಓರ್ವ ಯೋಧ ಬಲಿಯಾಗಿದ್ದಾರೆಂದು ಬುಧವಾರ ತಿಳಿದುಬಂದಿದೆ.
ದೇಶ ಕಾಯುವ 46 ಯೋಧರಲ್ಲಿ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇದೀಗ 1,000ಕ್ಕೂ ಹೆಚ್ಚು ಯೋಧರನ್ನು ಕ್ವಾರಂಟೈನ್ ನಲ್ಲಿರಿಸಿರುವುದಾಗಿ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ. ದೆಹಲಿ ಮಯೂರ್ ವಿಹಾರದಲ್ಲಿರುವ ಸಿಆರ್’ಪಿಎಫ್ 31ನೇ ಬೆಟಾಲಿಯನ್ ಪಡೆಯಲ್ಲಿ ಕೆಲ ದಿನಗಳಿಂದ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ಇದೀಗ ಮೃತಪಟ್ಟಿರುವ 55 ವರ್ಷದ ಯೋಧರ ಕೆಲ ದಿನಗಳಿಂದ ಸಫ್ದರ್ಜುಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಏಪ್ರಿಲ್ 17 ರಂದು ಯೋಧನಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದಿತ್ತು. ಬಳಿಕ ಏಪ್ರಿಲ್ 21 ರಂದು ವೈರಸ್ ಇರುವುದಾಗಿ ದೃಢಪಟ್ಟಿದೆ.ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಸೋಂಕು ದೃಢಪಟ್ಟ ಯೋಧರಿಗೆ ಮಂಡ್ವಾಲಿಯಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತಷ್ಟು ಯೋಧರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.