ನಿರಾಣಿ ಶುಗರ್ಸ್ ಪಾಲಾಯ್ತು ಪಾಂಡವಪುರ ಸಕ್ಕರೆ ಕಾರ್ಖಾನೆ; ಸಹಕಾರ ತತ್ವಕ್ಕೆ ಕೊಡಲಿ ಪೆಟ್ಟು

ಮಂಡ್ಯ ಜಿಲ್ಲೆಯ ಪಾಂಡವಪುರ ಸಕ್ಕರೆ ಕಾರ್ಖಾನೆಗೆ (PSSK) ರಾಜ್ಯದ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆ ಎಂಬ ಹೆಗ್ಗಳಿಕೆ ಇತ್ತು.  ಈಗ ಖಾಸಗಿ ಸಂಸ್ಥೆಯ ಪಾಲಾಗಿದ್ದು ಸಹಕಾರಿ ಹೆಗ್ಗಳಿಕೆಗೆ ಮುಗಿದಿದೆ. ನಾಲ್ಕು ವರ್ಷಗಳಿಂದ ಆರ್ಥಿಕವಾಗಿ ಚೇತರಿಸಿಕೊಳ್ಳಲು ಈ ಸಂಸ್ಥೆ ಹೆಣಗಾಡುತ್ತಿತ್ತು. ಈಗ ಕಾರ್ಖಾನೆಯನ್ನು ಪುನಶ್ಚೇತನದ ಹೆಸರಿನಲ್ಲಿ ಸರ್ಕಾರ, ಮಾಜಿ ಸಚಿವ ಮುರುಗೇಶ್‌ ನಿರಾಣಿ ಮಾಲೀಕತ್ವದ ನಿರಾಣಿ ಶುಗರ್ಸ್‌ಗೆ 40 ವರ್ಷಗಳ ಕಾಲ ಗುತ್ತಿಗೆಗೆ ನೀಡಿದೆ.

ಇಂದು ನಡೆದ ಬಿಡ್‌ನಲ್ಲಿ ಈ ಕಾರ್ಖಾನೆ ನಿರಾಣಿ ಶುಗರ್ಸ್‌ ಪಾಲಾಗಿದೆ. ಹಲವು ದಿನಗಳಿಂದ ರೈತರು ಮತ್ತು ಸರ್ಕಾರದ ನಡುವೆ ಜಟಾಪಟಿಗೆ ಕಾರಣವಾಗಿದ್ದ ಈ ಕಾರ್ಖಾನೆ ಕೊನೆಗೂ ಖಾಸಗಿ ತೆಕ್ಕೆಗೆ ಹೊರಳಿದ್ದು ಮುಂದೆ ಅದರ ಅಭಿವೃದ್ದಿ ಏನಾಗಲಿದೆ ಗೊತ್ತಿಲ್ಲ.

ಪಿಎಸ್‌ಎಸ್‌ಕೆ ಇತಿಹಾಸ

1959ರಲ್ಲಿ ಬಿ.ವೈ ನೀಲೇಗೌಡರು ಆರಂಭಿಸಿದ್ದ ಈ ಸಹಕಾರಿ ಕಾರ್ಖಾನೆಯನ್ನು ಪಾಂಡವಪುರ, ಶ್ರೀರಂಗಪಟ್ಟಣ ಮತ್ತು ಕೆ.ಆರ್.ಪೇಟೆ ತಾಲೂಕು ಭಾಗದ ಕಬ್ಬು ಬೆಳೆಗಾರ ರೈತರು ಅವಲಂಬಿಸಿದ್ದಾರೆ. 2003ರವರೆಗೂ ರೈತರ ಸಹಕಾರದಲ್ಲಿ ಅಚ್ಚುಕಟ್ಟಾಗಿ ನಡೆಯುತ್ತಿತ್ತು. ವಿ.ಸಿ ನಾಲೆ ಆಧುನೀಕರಣದಿಂದಾಗಿ ಕೆ.ಆರ್‌.ಎಸ್‌ ನೀರು ನಿಂತ ಪರಿಣಾಮ ಒಂದು ವರ್ಷ ಕಬ್ಬು ಸರಬರಾಜು ಆಗದೇ ಸ್ಥಗಿತಗೊಂಡು ನಷ್ಟಕ್ಕೆ ಸಿಲುಕಿತು. ನಂತರ ಕೊಥಾರಿ ಕಂಪನಿ ಏಳು ವರ್ಷದ ಅವಧಿಗೆ ಗುತ್ತಿಗೆಗೆ ತೆಗೆದುಕೊಂಡು ಕಾರ್ಖಾನೆಯನ್ನು ನಡೆಸಿತು.

ಆದರೆ 2009ರಲ್ಲಿ ಕೊಥಾರಿ ಕಂಪನಿ 30 ವರ್ಷಗಳ ಗುತ್ತಿಗೆಗೆ ಕೇಳಿದಾಗ ಸರ್ಕಾರ ಅದನ್ನು ನಿರಾಕರಿಸಿತು. ಆಗ ಕೊಥಾರಿ ಕಂಪನಿ ತನ್ನ ಗುತ್ತಿಗೆ ಹಿಂತೆಗೆತುಕೊಂಡಿತು. ಅಲ್ಲಿಗೆ ಕಾರ್ಖಾನೆ ಮತ್ತೆ ನಷ್ಟಕ್ಕೆ ಸಿಲುಕಿತು. ಅಷ್ಟರಲ್ಲಿ ಆಗಲೇ ನಷ್ಟದಲ್ಲಿದ್ದ ಮಂಡ್ಯದ ಮೈಷುಗರ್‌ ಸರ್ಕಾರಿ ಸಕ್ಕರೆ ಕಂಪನಿಯೊಂದಿಗೆ ಇದರ ಆಡಳಿತ ಮಂಡಳಿಯನ್ನು ವಿಲೀನ ಮಾಡಲಾಯ್ತು. ರೈತರ ಬಾಕಿ ಸೇರಿದಂತೆ ಹಲವು ಸಮಸ್ಯೆಗಳಿಗೆ ಕಾರ್ಖಾನೆ ಸಿಲಕಿತು. ಸರ್ಕಾರದ ನಿರ್ಲಕ್ಷದಿಂದಾಗಿ ಇಂದು ಅದು ಸಂಪೂರ್ಣ ಖಾಸಗಿಯವರ ಪಾಲಾಗುವಲ್ಲಿಗೆ ಬಂದು ನಿಂತಿದೆ.

ಮುಂದೇನು?

ಒಂದು ಕಾಲದಲ್ಲಿ ರೈತರ ನೆಚ್ಚಿನ ಕಂಪನಿಯಾಗಿದ್ದ ಪಿಎಸ್‌ಎಸ್‌ಕೆ ಈಗ ತನ್ನ ನೌಕರರಿಗೆ ಮೂರು ವರ್ಷಗಳಿಂದ ಸಂಬಳ ಕೊಟ್ಟಿಲ್ಲ. ಸದ್ಯಕ್ಕೆ ಪ್ರತಿನಿತ್ಯ 3500 ಟನ್‌ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿರು ಇದನ್ನು ನಿರಾಣಿ ಶುಗರ್ಸ್ 5000 ಟನ್‌ಗಳಿಗೆ ಏರಿಸಲಿದೆ. ಅಲ್ಲದೇ ಡಿಸ್ಟಲರಿ ಮತ್ತು ಕೋಜನ್‌ ಘಟಕಗಳು ಆರಂಭಿಸುತ್ತೇವೆ ಎಂದು ನಿಬಂಧನೆಗಳಲ್ಲಿ ಅದು ಹೇಳಿಕೊಂಡಿದೆ. ಈ ಮೊದಲು ರೈತರಿಗೆ ಮುಂಗಡ ಕೊಟ್ಟು ಕಂಪನಿಗಳು ಕಬ್ಬ ಖರೀದಿಸುತ್ತಿದ್ದವು. ಈಗ ನಿರಾಣಿ ಷುಗರ್ಸ್‌‌ಗೆ ಅದರಿಂದ ವಿನಾಯಿತಿ ನೀಡಲಾಗಿದೆ ಎನ್ನಲಾಗಿದೆ.

ಈ ಕಾರ್ಖಾನೆ ಸಹಕಾರಿಯಾಗಿಯೇ ಉಳಿಯುವಲ್ಲಿ ರೈತರು ಸಾಕಷ್ಟು ಹೋರಾಟ ಮಾಡಿದ್ದರು. ಆದರೆ ಈಗ PSSK ಸಕ್ಕರೆ ಕಾರ್ಖಾನೆ ಮುಚ್ಚಲ್ಪಟ್ಟಿದ್ದರಿಂದ ಈ ಭಾಗದ ಸುಮಾರು 4 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಕಬ್ಬು ಬೆಳೆದ ರೈತರು ಬೇರೆ ವಿಧಿ ಇಲ್ಲದೆ ತಾವು ಬೆಳೆದ ಕಬ್ಬನ್ನು ಬೇರೆ ಬೇರೆ ಕಾರ್ಖಾನೆಗೆ ಸಾಗಿಸಲು ಪರದಾಡಿ ನಷ್ಟ ಅನುಭವಿಸುತ್ತಿದ್ದರು. ಹೀಗಾಗಿ ಈ ಕಾರ್ಖಾನೆಯ ಅಭಿವೃದ್ದಿಗೆ ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಬೇಕು ಎಂಬ ಕೂಗು ಕೇಳಿ ಬಂದಿತ್ತು. ವಿಶೇಷ ಪ್ಯಾಕೇಜ್‌ ಘೋಷಣೆಗೆ ಮುಂದಾಗದ ಸರ್ಕಾರ ಇದೀಗ ಈ ಕಾರ್ಖಾನೆಯನ್ನೇ ಖಾಸಗಿ ವಲಯಕ್ಕೆ 40 ವರ್ಷ ಗುತ್ತಿಗೆ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ಕೊಥಾರಿ ಕಂಪನಿ ಸೇರಿದಂತೆ ಹತ್ತು ಕಂಪನಿಗಳು ಗುತ್ತಿಗೆಯ ಟೆಂಡರ್‌ನಲ್ಲಿ ಆಕಾಂಕ್ಷಿಗಳಾಗಿದ್ದರು. ಸದ್ಯಕ್ಕೆ ಸಚಿವ ಸ್ಥಾನಕ್ಕಾಗಿ ಆಗಾಗ ಬಂಡಾಯವೇಳುತ್ತಿದ್ದ ನಿರಾಣಿಯವರಿಗೆ ಈ ಕಾರ್ಖಾನೆಯ ಗುತ್ತಿಗೆ ನೀಡಿ ಸಮಾಧಾನ ಮಾಡಲಾಗಿದೆ ಎಂಬ ಮಾತುಗಳ ಸಹ ಕೇಳಿಬರುತ್ತಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights