ನಿಷೇಧಾಜ್ಞೆ ಧಿಕ್ಕರಿಸಿ ಬಂದ್ ಆಚರಣೆ – ಕಲಬುರ್ಗಿಗೆ ಎಂಟ್ರಿ ಕೊಟ್ಟ ಅಲೋಕ್ ಕುಮಾರ್
ಬಂದ್ ಗೆ ಅನುಮತಿ ಪಡೆಯದೇ, ನಿಷೇಧಾಜ್ಞೆ ಧಿಕ್ಕರಿಸಿ ಬೃಹತ್ ರಾಲಿ. ಕೆ.ಎಸ್.ಆರ್.ಪಿ. ಎಡಿಜಿಪಿ ಅಲೋಕ್ ಕುಮಾರ್ ಕಲಬುರ್ಗಿಗೆ ಎಂಟ್ರಿ ಕೊಟ್ಟಿದ್ದಾರೆ. ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಕಲಬುರ್ಗಿ – ಪೌರತ್ವ ಮಸೂದೆ ವಿರೋಧಿಸಿ ಕಲಬುರ್ಗಿ ಬಂದ್ ಕರೆ ನೀಡುವ ಜೊತೆಗೆ ನಿಷೇಧಾಜ್ಞೆ ಧಿಕ್ಕರಿಸಿ ಬೃಹತ್ ಮೆರವಣಿಗೆ ನಡೆಸಿದ ಹಿನ್ನೆಲೆಯಲ್ಲಿ ಕೆ.ಎಸ್.ಆರ್.ಪಿ. ಎಡಿಜಿಪಿ ಅಲೋಕ್ ಕುಮಾರ್ ಕಲಬುರ್ಗಿಗೆ ಭೇಟಿ ನೀಡಿದ್ದಾರೆ. ಕಲಬುರ್ಗಿಗೆ ಆಗಮಿಸಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚಿಸಿದ ನಂತರ ರೋಜಾ ಪ್ರದೇಶ ಮತ್ತಿತರ ಕಡೆ ಭೇಟಿ ನೀಡಿ ಬಂದೋಬಸ್ತ್ ಪರಿಶೀಲಿಸಿದರು. ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಾಗಿ ವಾಸಿಸುವ ಪ್ರದೇಶದಲ್ಲಿ ಪರೀಶೀಲನೆ ಮಾಡಿದರು.
ವಿಚಾರಿಸಲು ಬಂದವರನ್ನೇ ಸನ್ಮಾನಿಸಿದ ವ್ಯಾಪಾರಿಗಳು…..
ವ್ಯಾಪಾರಿಗಳೊಂದಿಗೆ ಮಾತುಕತೆ ಮಾಡಿದ ಅಲೋಕ್ ಕುಮಾರ್, ವ್ಯಾಪಾರ ಹೇಗೆ ನಡೆಯುತ್ತಿದೆ ಎಂಬಿತ್ಯಾದಿ ಕುಶಲೋಪರಿ ವಿಚಾರಿಸಿದರು. ಈ ವೇಳೆ ಅಲೋಕುಮಾರ್ ಗೆ ಮುಸ್ಲಿಂ ಮುಖಂಡರ ಸನ್ಮಾನ ಮಾಡಿ ಗೌರವಿಸಿದ್ದಾರೆ. ಈ ಹಿಂದೆ ಕೆಲಸ ಅಲೋಕ್ ಕುಮಾರ್ ಕೆಲಸ ಮಾಡುತ್ತಿದ್ದ ದಿನಗಳನ್ನು ವ್ಯಾಪಾರಿಗಳು ಸ್ಮರಿಸಿಕೊಂಡಿದ್ದಾರೆ. ನಂತರ ಬಂದೋಬಸ್ತಬಲ್ಲಿ ತೊಡಗಿದ್ದ ಪೊಲೀಸರ ಕುಶಲೋಪರಿ ಅಲೋಕ ಕುಮಾರ್ ವಿಚಾರಿಸಿದ್ದಾರೆ. ನಿನ್ನೆಯ ಘಟನೆಯ ಹಿನ್ನೆಲೆಯಲ್ಲಿ ಕಲಬುರ್ಗಿಗೆ ಭೇಟಿ ನೀಡಿರೋ ಅಲೋಕ್ ಕುಮಾರ್, ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಕಲಬುರ್ಗಿಯಲ್ಲಿ ಎಸ್.ಪಿ.ಯಾಗಿ, ಈಶಾನ್ಯ ವಲಯ ಐಜಿಪಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರೋ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಲೋಕ್ ಕುಮಾರ್ ರನ್ನು ಕಲಬುರ್ಗಿಗೆ ಕಳುಹಿಸಿಕೊಟ್ಟಿದೆ.
ಕಿಡಿಗೇಡಿಗಳಿಗೆ ಖಡಕ್ ವಾರ್ನಿಂಗ್…
ಪೌರತ್ವ ಮಸೂದೆ ತಿದ್ದುಪಡಿ ವಿರೋಧಿಸಿ ಕಲಬುರ್ಗಿ ಬಂದ್ ಕರೆ ನೀಡಿದ್ದ ವೇಳೆ ನಿಷೇಧಾಜ್ಞೆ ಧಿಕ್ಕರಿಸಿ ಬೃಹತ್ ರಾಲಿ ನಡೆಸಿದ್ದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಘಟನೆ ಹಿನ್ನೆಲೆಯಲ್ಲಿ ಕೆ.ಎಸ್.ಆರ್.ಪಿ. ಎಡಿಜಿಪಿ ಅಲೋಕ್ ಕುಮಾರ್ ಕಲಬುರ್ಗಿಗೆ ಭೇಟಿ ನೀಡಿ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿದ್ದಾರೆ. ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಲೋಕ್ ಕುಮಾರ್, ಕಾನೂನಿನ ಪ್ರಕಾರ ಎಲ್ಲರೂ ನಡೆದುಕೊಳ್ಳಬೇಕು. ಹಿಂಸಾಚಾರ ಕೈಗೆತ್ತಿಕೊಳ್ಳುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಪಿತೂರಿ ಮಾಡುವವರ ಮೇಲೆ ಹದ್ದಿನ ಕಣ್ಣಿಟ್ಟಿದೇವೆ,
ಯಾರೂ ಕಾನೂನನ್ನು ಕೈಗೆತ್ತಿಕೊಳ್ಳುವಂತಿಲ್ಲ ಎಂದು ಎಚ್ಚರಿಸಿದ್ದಾರೆ. ನಿಷೇಧಾಜ್ಞೆ ಜಾರಿ ಬಗ್ಗೆ ಸರಿಯಾದ ಮಾಹಿತಿ ಇರದ ಪರಿಣಾಮ ನಿನ್ನೆ ಸಹಸ್ರಾರು ಜನ ರಾಲಿಗೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಹೋರಾಟಗಾರರ ಜೊತೆಗೂ ಮಾತನಾಡುತ್ತೇವೆ. ನಗರದಲ್ಲಿ ಶಾಂತಿ ಕಾಪಾಡಲು ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತೇವೆ. ಕಲಬುರ್ಗಿಯಲ್ಲಿ ಸೌಹಾರ್ದತೆಯಿದ್ದು, ಯಾವುದೇ ಗದ್ದಲವಾಗಲ್ಲ ಅನ್ನೋ ನಂಬಿಕೆಯಿದೆ ಎಂದು ಅಲೋಕ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪೌರತ್ವ ವಿರೋಧಿ ಹೋರಾಟ ರಾಜಕೀಯ ಪಿತೂರಿ ಎಂದ ವಿಜಯೇಂದ್ರ….
ಪೌರತ್ವ ಮಸೂದೆಯನ್ನು ಕೆಲವರು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ಆರೋಪಿಸಿದ್ದಾರೆ. ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಪೌರತ್ವ ಮಸೂದೆ ತಿದ್ದುಪಡಿ ವಿರೋಧಿಸಿ ಹೋರಾಟಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಪೌರತ್ವ ಮಸೂದೆ, ನರೆ ರಾಷ್ಟ್ರಗಳಿಂದ ಬಂದವರ ರಕ್ಷಣೆ ಒದಗಿಸುವ ಉದ್ದೇಶ ಹೊಂದಿದೆ. ಸತ್ಯ ಸಂಗತಿ ಗೂತ್ತಿದ್ರೂ ರಾಜಕೀಯ ದುರುದ್ದೇಶದಿಂದ ಜನತೆಯ ದಾರಿ ತಪ್ಪಿಸಲಾಗುತ್ತಿದೆ. ಜನತೆಯ ತಪ್ಪು ದಾರಿಗೆಳೆಯುವುದೂ ದೇಶದ್ರೋಹದ ಕೆಲಸ ಎಂದರು.
ಯಡಿಯೂರಪ್ಪ ಮೊದಲು ಅಧಿಕಾರಕ್ಕೆ ಬಂದಾಗ ಇಬ್ಬರು ರೈತರು ಬಲಿಪಡೆದರು, ಇದೀಗ ಇಬ್ಬರು ಯುವಕರನ್ನು ಬಲಿಪಡೆದಿದ್ದಾರೆ ಎಂಬ ಮಾಜಿ ಸಿಎಂ ಸಿದ್ಧರಾಮಯ್ಯ ಟ್ವೀಟ್ ಗೆ ವಿಜಯೇಂದ್ರ ಆಕ್ಷೇಪ ವ್ಯಕ್ತಪಡಿಸಿದರು. ಯಡಿಯೂರಪ್ಪ ರೈತ ಮತ್ತು ಯುವ ವಿರೋಧಿ ಎಂದು ಹೇಳಿಕೆ ನೀಡುತ್ತಿದ್ದಾರೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಯಡಿಯೂರಪ್ಪ ಅವರ ಆಡಳಿದ ಬಗ್ಗೆ ವಿರೋಧ ಪಕ್ಷಗಳಿಗೆ ಹೇಳಲು ಏನು ಇಲ್ಲ. ಅದಕ್ಕಾಗಿ ಸಿದ್ರಾಮಯ್ಯ ಈ ರೀತಿ ಹೇಳಿರಬೇಕೆಂದರು. ಹೆಚ್.ಡಿ.ಕುನಾರಸ್ವಾಮಿ ಹೇಳಿಕೆ ವಿಜಯೇಂದ್ರ ಕಿಡಿಕಾರಿದರು. ಪಾಪ ಉಪಚುನಾವಣೆ ನಂತ್ರ ಹೆಚ್.ಡಿ.ಕೆ ಅಡ್ರೆಸ್ ಗೂ ಇರಲಿಲ್ಲ. ಈಗ ಮಾತಾಡ್ತಿದಾರೆ.. ಇದಕ್ಕೆ ನಮ್ಮ ನಾಯಕರು ಉತ್ತರ ಕೊಡ್ತಾರೆ ಎಂದು ವಿಜಯೇಂದ್ರ ತಿಳಿಸಿದ್ದಾರೆ.