ಪಿಡಿಒ ನಿರ್ಲಕ್ಷ್ಯ: ಪುಟ್ಟ ಮಕ್ಕಳೊಂದಿಗೆ ಚರಂಡಿ ಸ್ವಚ್ಛಗೊಳಿಸಿದ ಗ್ರಾ.ಪಂ ಸದಸ್ಯೆ
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಗುಡದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರಂಗಾಪೂರ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯೆಯೊಬ್ಬರು ತನ್ನ ಪುಟ್ಟ ಮಕ್ಕಳು ಹಾಗೂ ಕುಟುಂಬಸ್ಥರೊಂದಿಗೆ ಚರಂಡಿ ಸ್ವಚ್ಛಗೊಳಿಸಿದ ಘಟನೆಯೊಂದು ನಡೆದಿದೆ.
ಗ್ರಾಮ ಪಂಚಾಯ್ತಿ ಸದಸ್ಯೆ ಸುನೀತಾ ಬಸವರಾಜ ಚರಂಡಿ ಸ್ವಚ್ಛಗೊಳಿಸಿದವರಾಗಿದ್ದಾರೆ. ಸುನೀತಾ ತಮ್ಮೂರಿನ ಚರಂಡಿ ಸ್ವಚ್ಛಗೊಳಿಸಿ ಗ್ರಾಮದಲ್ಲಿ ನೈರ್ಮಲ್ಯ ಕಾಪಾಡುವಂತೆ ಗುಡದೂರು ಪಿಡಿಒ ಸರಸ್ವತಿಯವರಿಗೆ ಅನೇಕ ಭಾರಿ ಮನವಿ ಸಲ್ಲಿಸಿದ್ದರು. ಸದಸ್ಯೆಯ ಮನವಿಗೆ ಕ್ಯಾರೇ ಅನ್ನದೇ ಪಿಡಿಒ ಸರಸ್ವತಿ ನಿರ್ಲಕ್ಷ್ಯವಹಿಸಿದ್ದರು. ಇತ್ತ ಗ್ರಾಮಸ್ಥರು ಪ್ರತಿನಿತ್ಯ ಸದಸ್ಯೆ ಸುನೀತಾ ಬಸವರಾಜರವರಿಗೆ ಚರಂಡಿ ಸ್ವಚ್ಛಗೊಳಿಸಿ ನೈರ್ಮಲ್ಯ ಕಾಪಾಡುವಂತೆ ಒತ್ತಡ ಹಾಕುತ್ತಿದ್ದರು. ಪಿಡಿಒ ನಿರ್ಲಕ್ಷ್ಯ, ಗ್ರಾಮಸ್ಥರ ಒತ್ತಡದಿಂದ ಬೇಸತ್ತ ಸದಸ್ಯೆ ಸುನೀತಾ ತನ್ನ ಪುಟ್ಟ ಮಕ್ಕಳು ಹಾಗೂ ಕುಟುಂಬಸ್ಥರೊಂದಿಗೆ ತಾನೇ ಚರಂಡಿ ಸ್ವಚ್ಛಗೊಳಿಸಿದ್ದಾರೆ.
ಈ ಘಟನೆಯ ಪೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸುನೀತಾ ಬಸವರಾಜ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಇತ್ತ ಪಿಡಿಒ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಪಿಡಿಒ ಸರಸ್ವತಿಯವರ ನಿರ್ಲಕ್ಷ್ಯ ಪ್ರವೃತ್ತಿಯಿಂದ ಅಧಿಕಾರಿ ವರ್ಗವೇ ತಲೆ ತಗ್ಗಿಸುವಂತಾಗಿದೆ ಎನ್ನುತ್ತಿದ್ದಾರೆ ಗ್ರಾಮಸ್ಥರು.
ರಂಗಾಪೂರ ಗ್ರಾಮದ ಚರಂಡಿ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ನಮ್ಮ ಸಿಬ್ಬಂದಿ ಜಿಪಿಎಸ್ ಮಾಡಿಕೊಂಡು ಬಂದಿದ್ದಾರೆ. ಆದಷ್ಟೂ ಬೇಗನೆ ಸ್ವಚ್ಚಗೊಳಿಸುತ್ತೇವೆ. ಕಳೆದ ಆರು ತಿಂಗಳುಗಳ ಹಿಂದೆ ಕ್ಲೀನ್ ಮಾಡಿದ್ವಿ. ಈಗ ಮತ್ತೆ ಸ್ವಚ್ಛಗೊಳಿಸುತ್ತೇವೆ. ಅಂತಹ ಸಮಸ್ಯೆ ಏನು ಆಗಿಲ್ಲ.