ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿಗೆ ಸ್ಥಳೀಯರ ಅಡ್ಡಿ : ಓಣಿ ಹೊರಗೆ ಬಿಜೆಪಿ ಮುಖಂಡರು, ಕಾರ್ಯಕರ್ತರನ್ನು ತಡೆದ ಜನತೆ
ಹೊಸಪೇಟೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜನಜಾಗೃತಿಗೆ ಮುಂದಾಗಿದ್ದ ಬಿಜೆಪಿ ಮುಖಂಡರು, ಕಾರ್ಯಕರ್ತರನ್ನು ಸೋಮವಾರ ಇಲ್ಲಿನ ಚಲವಾದಿಕೇರಿ ನಿವಾಸಿಗಳು ತಡೆದು, ಅವರ ವಿರುದ್ಧ ಧಿಕ್ಕಾರ ಎಂದು ಘೋಷಣೆ ಹಾಕುತ್ತಿದ್ದಾರೆ.
ಬಿಜೆಪಿ ಕಾರ್ಯಕರ್ತರು ಬರುವ ವಿಷಯ ಗೊತ್ತಾಗುತ್ತಿದ್ದಂತೆ ಓಣಿಯ ಪ್ರವೇಶ ದ್ವಾರ ಬಳಿ ಸೇರಿದ ಸ್ಥಳೀಯ ನಿವಾಸಿಗಳು ಕಪ್ಪು ಬಾವುಟ ಪ್ರದರ್ಶಿಸಿ, ಗೋ ಬ್ಯಾಕ್, ಗೋ ಬ್ಯಾಕ್ ಎಂದು ಘೋಷಣೆ ಕೂಗುತ್ತಿದ್ದಾರೆ.
‘ನಾವು ಕರಪತ್ರಗಳನ್ನು ಕೊಟ್ಟು ಹೋಗಲು ಬಂದಿದ್ದೇವೆ. ಅದಕ್ಕೆ ಅವಕಾಶ ಕಲ್ಪಿಸಬೇಕು’ ಎಂದು ಬಿಜೆಪಿ ಮುಖಂಡರು ಹೇಳಿದರು. ಅದಕ್ಕೆ ಸ್ಥಳೀಯರು ನೀವು ಇಲ್ಲಿಗೆ ಬರುವುದೇ ಬೇಡ. ಬೇರೆಡೆ ಹೋಗಿ ಜನಜಾಗೃತಿ ನಡೆಸಿ ಎಂದರು. ಎರಡೂ ಕಡೆಯವರ ನಡುವೆ ಪರಸ್ಪರ ವಾಗ್ವಾದ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಬಂದಿದ್ದು, ವಾತಾವರಣ ತಿಳಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ.
ಆಜಾದಿ, ಆಜಾದಿ, ಹಿಂದೂಸ್ತಾನ್ ಜಿಂದಾಬಾದ್ ಎಂದು ಘೋಷಣೆಗಳನ್ನು ಹಾಕುತ್ತಿದ್ದಾರೆ. ಓಣಿಯಲ್ಲಿ ದಲಿತರು, ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಎರಡೂ ಕಡೆಯವರು ಪಟ್ಟು ಸಡಿಲಿಸದ ಕಾರಣ ಸ್ಥಳದಲ್ಲಿ ಪರಸ್ಪರ ನೂಕಾಟ, ತಳ್ಳಾಟ ನಡೆದಿದೆ. ಪೊಲೀಸರು ಅಸಹಾಯಕರಾಗಿ ನಿಂತಿದ್ದಾರೆ.