ಪೌರತ್ವ ತಿದ್ದುಪಡಿ ವಿರೋಧಿಸಿ ತೀವ್ರಗೊಂಡ ಪ್ರತಿಭಟನೆ : ಮೇಘಾಲಯಕ್ಕೆ ಶಾ ಭೇಟಿ ರದ್ದು
ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಬಂಗಾಳ ಹಾಗೂ ದಿಲ್ಲಿ ರಾಜ್ಯಗಳಿಗೂ ವ್ಯಾಪಿಸಿದ್ದು,ಬಂಗಾಳದಲ್ಲಿ ರೈಲ್ವೆ ನಿಲ್ದಾಣಕ್ಕೆ ಬೆಂಕಿ ಹಚ್ಚಲಾಗಿದೆ. ಇದೇ ವೇಳೆ ಮೇಘಾಲಯಕ್ಕೆ ಗೃಹ ಸಚಿವ ಅಮಿತ್ ಶಾ ಅವರ ಭೇಟಿಯನ್ನು ರದ್ದುಪಡಿಸಲಾಗಿದೆ.
ಅಸ್ಸಾಂನಲ್ಲಿ ಪರಿಸ್ಥಿತಿ ಹತೋಟಿಗೆ ಬಾರದೇ ರಾಜ್ಯದೆಲ್ಲೆಡೆ ಪ್ರತಿಭಟನೆ ಕಾವು ಪಡೆದಿದ್ದು, ಈ ಕಾರಣ ಸುಮಾರು 30 ರೈಲುಗಳ ಪ್ರಯಾಣದಲ್ಲಿ ಭಾರೀ ವ್ಯತ್ಯಯ ಉಂಟಾಯಿತು. ದಿಬ್ರುಗಢದಲ್ಲಿ ಶುಕ್ರವಾರ ಕೆಲ ಕಾಲ ಕರ್ಫ್ಯೂ ಸಡಿಸಲಾಗಿತ್ತಾದರೂ ಮತ್ತೆ ಜಾರಿಗೊಳಿಸಲಾಯಿತು.
ಈ ಮಧ್ಯೆ ಪೌರತ್ವ ಕಾಯ್ದೆಯನ್ನು ದೆಹಲಿಯ ವಿರೋಧಿಸಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿಯಲ್ಲಿ ನಡೆದ ಪ್ರತಿಭಟನೆ ಹಿಂಸೆಗೆ ತಿರುಗಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ಮತ್ತು ಅಶ್ರುವಾಯು ಪ್ರಯೋಗ ಮಾಡಬೇಕಾಗಿ ಬಂತು.
ಬಂಗಾಳದ ಮುರ್ಶೀದಾಬಾದಿನಲ್ಲಿ ರೈಲು ನಿಲ್ದಾಣಕ್ಕೆ ನುಗ್ಗಿದ ಪ್ರತಿಭಟನಾಕಾರರ ಗುಂಪು ಪೆಟ್ರೋಲ್ ಸುರಿದು ಬೆಂಕ ಹಚ್ಚಿದರು. ಹೀಗಾಗಿ ನಿಲ್ದಾಣದ ಕೆಲ ಭಾಗಗಳಲ್ಲಿ ವ್ಯಾಪಕ ಹಾನಿ ಸಂಭವಿಸಿದೆ.
ಪೌರತ್ವ ತಿದ್ದುಪಡಿಯ ಕಾವು ಕಲಬುರ್ಗಿಗೂ ವ್ಯಾಪಿಸಿದ್ದು, ನಿಷೇಧಾಜ್ಞೆ ಉಲ್ಲಂಘಿಸಿ ನಗರದ ಮುಸ್ಲಿಂ ಚೌಕದಲ್ಲಿ ಎಡಪಕ್ಷಗಳು ಸೇರಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಬೃಹತ್ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.