ಬಿಕ್ಕಟ್ಟು ಒಂದು ವೈರಸ್‌ನಿಂದ ಉಂಟಾಯಿತು, ಸರ್ಕಾರ ಅದನ್ನು ದೇಶಾದ್ಯಂತ ಹರಡಿತು: ರಾಜೀವ್ ಬಜಾಜ್

ಕೊರೋನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ದೇಶಾದ್ಯಂತ ಹೇರಲಾಗಿದ್ದ ಲಾಕ್‌ಡೌನ್‌ನಿಂದಾಗಿ ವೈರಸ್‌ ನಿಯಂತ್ರಣವಾಗುವುದರ ಬದಲಾಗಿ ದೇಶದ ಆರ್ಥಿಕತೆ ಹಳ್ಳ ಹಿಡಿಸಿದೆ ಎಂದು ಉದ್ಯಮಿ ರಾಜೀವ್ ಬಜಾಜ್ ಆರೋಪಿಸಿದ್ದಾರೆ.

ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಏರ್ಪಡಿಸಿದ್ದ ಸೋಷಿಯಲ್ ಮೀಡಿಯಾ ಚರ್ಚಾ ಕಾರ್ಯಕ್ರಮದಲ್ಲಿ  ಬಜಾಜ್ ಆಟೋ ಸಂಸ್ಥೆ ಮ್ಯಾನೇಜಿಂಗ್ ಡೈರೆಕ್ಟರ್ ರಾಜೀವ್ ಬಜಾಜ್ ಅವರು ಪಾಲ್ಗೊಂಡಿದ್ದರು.

ಚರ್ಚೆಯಲ್ಲಿ ಮಾತಮಾಡಿದ ಅವರು ಪ್ರಧಾನಿ ಮೋದಿ ಅವರು  ಹೇರಿದ್ದ ಲಾಕ್ ಡೌನ್ ನಿಂದಾಗಿ ಖಂಡಿತಾ ಇಳಿಮುಖ ಸಾಧ್ಯವಾಗಿದೆ. ಆದರೆ ಅದು ವೈರಸ್ ನಿಯಂತ್ರಣವಲ್ಲ ಬದಲಿಗೆ ದೇಶದ ಆರ್ಥಿಕತೆಯ ಇಳಿಕೆಯಾಗಿದೆ. ಲಾಕ್ ಡೌನ್ ನಿಂದಾಗಿ ದೇಶದ ಆರ್ಥಿಕತೆ ಹಳ್ಳಕ್ಕೆ ಬಿದ್ದಿದೆ ಎಂದು ಹೇಳಿದ್ದಾರೆ.

ಕೊರೋನಾ ವೈರಸ್ ನಿಯಂತ್ರಣಕ್ಕೆ ಲಾಕ್ ಡೌನ್ ಉತ್ತಮ ಕ್ರಮವಲ್ಲ. ವೈರಸ್‌ ನಿಯಂತ್ರಣಕ್ಕಾಗಿ ಜಪಾನ್ ಮತ್ತು ಸ್ವೀಡನ್ ದೇಶಗಳು ಲಾಕ್ ಡೌನ್ ಹೇರಿರಲಿಲ್ಲ. ಬದಲಿಗೆ ವೈರಸ್ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಂಡಿದ್ದವು. ಸಾಮಾಜಿಕ ಅಂತರಕ್ಕೆ ಪ್ರಾಮುಖ್ಯತೆ ನೀಡಿದ್ದವು. ಈ ದೇಶಗಳಲ್ಲಿ ಅಂಗಡಿಗಳು, ರೆಸ್ಟೋರೆಂಟ್ ಗಳು ತೆರೆದೇ ಇದ್ದವು. ಕೆಲ ವಿದ್ಯಾರ್ಥಿಗಳು ವೈರಸ್ ಭೀತಿ ನಡುವೆಯೇ ಶಾಲೆಗಳಿಗೆ ಹೋಗುತ್ತಿದ್ದರು. ಈ ದೇಶಗಳ ಗಡಿ ಎಂದಿನಂತೆ ಕಾರ್ಯ ನಿರ್ವಹಿಸಿತ್ತು. ಆದ್ದರಿಂದ ಆ ದೇಶಗಳ ಆರ್ಥಿಕತೆ ಕುಸಿಯದಂತೆ ನೋಡಿಕೊಂಡಿತು. ಆದರೆ, ಮೋದಿಯವರು ಲಾಕ್‌ಡೌನ್‌ ವಿಧಿಸಿಯೂ ಕೊರೊನಾ ನಿಯಂತ್ರಣ ಸಾಧ್ಯವಾಗಲಿಲ್ಲ. ಆರ್ಥಿಕತೆಯ ಉಳಿಯಲಿಲ್ಲ ಎಂದು ರಾಜೀವ್ ಬಜಾಜ್ ಹೇಳಿದ್ದಾರೆ.

ವಿಶ್ವದ ಬಹುತೇಕ ದೇಶಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಪರ್ಯಾಯ ಮಾರ್ಗಗಳನ್ನು ಹುಡುಕಿ ಜನರಿಗೆ ಮಾಹಿತಿ ನೀಡುತ್ತಿವೆ. ಅದಕ್ಕೆ ತಕ್ಕಂತೆ ನಿಯಮಾವಳಿಗಳನ್ನು ಮತ್ತು ಮಾರ್ಗ ಸೂಚಿಗಳನ್ನು ಜಾರಿಗೆ ತರುತ್ತಿವೆ ಎಂದು ರಾಜೀವ್ ಬಜಾಜ್ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಲಾಕ್ ಡೌನ್ ನಿರ್ವಹಣೆಯಲ್ಲಿ ಸಂಪೂರ್ಣ ಎಡವಿದೆ.  2ನೇ ವಿಶ್ವಯುದ್ಧದ ಸಂದರ್ಭದಲ್ಲೂ ಇಡೀ ವಿಶ್ವ ಲಾಕ್ ಡೌನ್ ಎದುರಿಸಿತ್ತು. ಆದರೆ ಅಂತಹ ಕಠಿಣ ಸಂದರ್ಭದಲ್ಲೂ ಕೂಡ ಸಂಪೂರ್ಣ ವ್ಯವಸ್ಥೆ ಸ್ಥಗಿತವಾಗಿರಲಿಲ್ಲ. ಆದರೆ ಮೋದಿ ಸರ್ಕಾರ ಕೈಗೊಂಡ ಕ್ರಮದಿಂದಾಗಿ ದೇಶದ ಆರ್ಥಿಕ ವ್ಯವಸ್ಥೆ ಪಾತಾಳಕ್ಕೆ ಕುಸಿದಿದ್ದು, ಆರ್ಥಿಕ ಅಭಿವೃದ್ಧಿ ದರ ನೆಗೆಟಿವ್ ಗೆ ಕುಸಿದಿದೆ. ಬಡವರು ಮತ್ತು ಕೂಲಿ ಕಾರ್ಮಿಕರಿಗೆ ಲಾಕ್ ಡೌನ್ ವೈರಸ್ ಗಿಂತಲೂ ಮಾರಕವಾಗಿ ಪರಿಣಮಿಸಿದೆ ಎಂದು ಹೇಳಿದ್ದಾರೆ.

ಲಾಕ್‌ಡೌನ್ ವಿಚಾರವಾಗಿ ಈ ಹಿಂದೆ ಮಾತನಾಡಿದ್ದ ರಾಜೀವ್ ಬಜಾಜ್,  ಬಿಕ್ಕಟ್ಟು ಒಂದು ವೈರಸ್‌ನಿಂದ ಆರಂಭಗೊಂಡಿತ್ತು. ಆದರೆ ಸರ್ಕಾರವು ಅದನ್ನು ಹರಡುತ್ತಿದೆ. ಲಾಕ್‌ಡೌನ್ ಆರೋಗ್ಯ ಬಿಕ್ಕಟ್ಟಿಗೆ ದೀರ್ಘಾವಧಿಯ ಉತ್ತರವಲ್ಲ. ಯುವಜನರು ಮತ್ತು ಆರೋಗ್ಯವಂತರು ಕೆಲಸಕ್ಕೆ ಮರಳುವುದು ಅಗತ್ಯವಾಗಿದೆ. ಲಾಕ್‌ಡೌನ್ ನಿರಂಕುಶವಾಗಿದೆ ಮತ್ತು ಅದು ಆರ್ಥಿಕ ಬಿಕ್ಕಟ್ಟಿಗೆ ಉತ್ತರವೂ ಅಲ್ಲ. ಲಾಕ್ ಡೌನ್ ಮೂಲಕ ಬಡ ಜನರ ಮೇಲೆ ಶಾಶ್ವತ ದುಷ್ಪರಿಣಾಮ ಹೇರುತ್ತಿದೆ ಎಂದು ಹೇಳಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights