ಬೆಳಗಾವಿ ಸಾಹುಕಾರನಿಗೆ ಕೊನೆಗೂ ಸಿಕ್ತು ಜಿಲ್ಲಾ ಉಸ್ತುವಾರಿ ಪಟ್ಟ….
ಬೆಳಗಾವಿ ಜಿಲ್ಲಾ ಉಸ್ತುವಾರಿ ಪಡೆದುಕೊಳ್ಳುವಲ್ಲಿ ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿ ಕೊನೆಗೂ ಯಶಸ್ವಿಯಾಗಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡುಯೂರಪ್ಪ ಆದೇಶ ಹೊರಡಿಸಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಗೋಪಾಲಯ್ಯ ಅವರಿಗೆ ಹಾಸನ ಜಿಲ್ಲಾ ಉಸ್ತುವಾರಿ ವಹಿಸಲಾಗಿದೆ.
ಬೆಳಗಾವಿ ಉಸ್ತುವಾರಿ ಸ್ಥಾನದ ಮೇಲೆ ಈ ಮೊದಲು ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆ, ಲಕ್ಷ್ಮಣ್ ಸವದಿ ಹಾಗೂ ರಮೇಶ್ ಜಾರಕಿಹೊಳಿ ನಡುವೆ ಪೈಪೋಟಿ ಉಂಟಾಗಿದ್ದರಿಂದ ಬೆಳಗಾವಿಯನ್ನು ಇವರಿಗೆ ಕೊಡದೆ ಸಚಿವ ಜಗದೀಶ್ ಶೆಟ್ಟರ್ ಗೆ ಸಿಎಂ ವಹಿಸಿದ್ದರು. ಇದೀಗ ಅಂದುಕೊಂಡ ಖಾತೆ ಜೊತೆಗೆ ತನ್ನ ಜಿಲ್ಲೆಯ ಉಸ್ತುವಾರಿಯನ್ನು ಬೆಳಗಾವಿ ಸಾಹುಕಾರ್ ಪಡೆದುಕೊಂಡಿದ್ದಾರೆ.
ಜಾರಕಿಹೊಳಿಯವರಿಗೆ ಡಿಸಿಎಂ ಸ್ಥಾನ ನೀಡುವುದಾಗಿ ಹೇಳಿ ಕೊನೇಯ ಘಳಿಗೆಯಲ್ಲಿ ಕೈ ತಪ್ಪಿದ ಪರಿಣಾಮ ಹುಬ್ಬಳ್ಳಿ-ಧಾರವಾಡ ಜತೆಗೆ ಬೆಳಗಾವಿ ಉಸ್ತುವಾರಿಯನ್ನು ಜಗದೀಶ್ ಶೆಟ್ಟರ್ ಅವರಿಗೆ ವಹಿಸಿದ್ದರು. ಆದರೆ ಜಗದೀಶ್ ಶೆಟ್ಟರ್ ಹಳೆ ಜಿ.ಪಂ. ಕಚೇರಿಯಲ್ಲಿ ತಮ್ಮ ಕಚೇರಿ ತೆರೆದಿದ್ದರೂ ಒಂದೂ ಬಾರಿ ಭೇಟಿಯಾಗಲಿಲ್ಲ. ಈ ಮೂಲಕ ಬೆಳಗಾವಿ ಜನರ ಅಸಮಾಧಾನಕ್ಕೆ ಕಾರಣವಾಗಿದ್ದರು.
ಕೊನೆಗೂ ಸಿಎಂ ಯಡಿಯೂರಪ್ಪ ರಮೇಶ್ ಜಾರಕಿಹೊಳಿ ಅವರಿಗೆ ಬೆಳಗಾವಿ ಉಸ್ತುವಾರಿ ನೀಡಿದ್ದು, ಜಿಲ್ಲೆಯ ಜನ ಸಂತಸ ವ್ಯಕ್ತಪಡಿಸಿದ್ದಾರೆ.