ಬೈಕ್ ಮೇಲೆ ಹೋಗುತ್ತಿದ್ದ ವ್ಯಕ್ತಿಗೆ ಚಾಕು ಇರಿತ – ಪೌರತ್ವ ತಿದ್ದುಪಡಿ ವಿರೋಧಿಸುವವರೇ ಟಾರ್ಗೆಟ್..?
ಪೌರತ್ವ ವಿರೋಧಿ ಹೋರಾಟ ಮಾಡುತ್ತಿದ್ದ ಮುಖಂಡನೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಐದಾರು ಜನರಿದ್ದ ಗುಂಪು ಬೈಕ್ ಅಡಗಟ್ಟಿ, ತೀವ್ರ ಹಲ್ಲೆ ಮಾಡಲಾಗಿದ್ದು, ಹಲ್ಲೆಗೊಳಗಾದ ಮುಖಂಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕಲಬುರ್ಗಿ – ಬೈಕ್ ಮೇಲೆ ಹೋಗುತ್ತಿದ್ದ ವ್ಯಕ್ತಿ ನೇಲೆ ದುಷ್ಕರ್ಮಿಗಳ ದಾಳಿ ನಡೆಸಿದ ಘಟನೆ ಕಲಬುರ್ಗಿ ನಗರದ ಪಿ ಅಂಡ್ ಟಿ ಕಾಲೋನಿ ಬಳಿ ನಡೆದಿದೆ. ಇಸ್ಲಾಮುದ್ದೀನ್ ಎಂಬಾತನ ಮೇಲೆ ತೀವ್ರ ಹಲ್ಲೆ ಮಾಡಲಾಗಿದೆ. ಐದಾರು ಜನರಿದ್ದ ಗುಂಪಿನಿಂದ ಹಲ್ಲೆ ನಡೆದಿದೆ. ಬಡಿಗೆಯಿಂದ ಹೊಡೆದು, ಚಾಕುವಿನಿಂದ ಇರಿದು ಹಲ್ಲೆ ಮಾಡಲಾಗಿದೆ. ಹೊಟ್ಟೆಗೆ ಚಾಕಿವಿನಿಂದ ಇರಿಯಲಾಗಿದ್ದು, ಮನಬಂದಂತೆ ಥಳಿಸಲಾಗಿದೆ.
ಕಳೆದ ಹಲವು ದಿನಗಳಿಂದ ಜಗತ್ ವೃತ್ತದಲ್ಲಿ ಪೌರತ್ವ ವಿರೋಧಿ ಹೋರಾಟ ನಡೆದಿತ್ತು. ಇದರಲ್ಲಿ ಇಸ್ಲಾಮುದ್ದೀನ್ ಸಕ್ರಿಯವಾಗಿ ಭಾಗವಹಿಸಿದ್ದ. ಅದೇ ಸೇಡಿನಿಂದ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಗಾಯಾಳುವನ್ನು ಯುನೈಟೆಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿದ ಸಿಪಿಐಎಂ ಮುಖಂಡ ಮಾರುತಿ ಮಾನ್ಪಡೆ, ಆರೋಗ್ಯ ವಿಚಾರಿಸಿದ್ದಾರೆ.
ಕೆಲ ಕೋಮುವಾದಿಗಳು ಪೌರತ್ವ ವಿರೋಧಿ ಹೋರಾಟಗಾರರನ್ನು ಟಾರ್ಗೆಟ್ ಮಾಡಿದ್ದಾರೆ. ಅದರ ಪರಿಣಾಮವೇ ಈ ಹಲ್ಲೆ. ಇಸ್ಲಾಮುದ್ದೀನ್ ಕೊಲೆಗೆ ಯತ್ನಿಸಿದ್ದು, ಆತ ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ, ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಾಳು ಇಸ್ಲಾಮುದ್ದೀನ್ ಯುನೈಟೆಡ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ.