ಭಾರತ ಮತ್ತು ಚೀನಾ ಗಡಿಯಲ್ಲಿ ಉದ್ವಿಘ್ನತೆ ನಿಯಂತ್ರಣ: ಸೇನಾ ಮುಖ್ಯಸ್ಥ
ಭಾರತ ಮತ್ತು ಚೀನಾ ಗಡಿ ಭಾಗದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕಾರ್ಪ್ಸ್ ಕಮಾಂಡರ್ ಮಟ್ಟದಲ್ಲಿ ಮೊದಲ ಮಾತುಕತೆಯಿಂದ ಆರಂಭವಾದ ಶಾಂತಿಯುತ ಸಭೆಯ ನಂತರ ಸ್ಥಳೀಯ ಮಟ್ಟದ ಕಮಾಂಡರ್ಗಳ ಹಲವಾರು ಸಭೆಗಳು ಸುದೀರ್ಘವಾಗಿ ನಡೆದಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾನೆ ತಿಳಿಸಿದ್ದಾರೆ.
ಭಾರತ-ಚೀನಾ ಮಧ್ಯೆ ಈಗಾಗಲೇ ಸಾಕಷ್ಟು ಸುತ್ತಿನ ಮಾತುಕತೆಗಳು ನಡೆದಿರುವುದರಿಂದ ಭಿನ್ನಾಭಿಪ್ರಾಯಗಳು ಮರೆಯಾಗಿ ಗಡಿಯಲ್ಲಿ ಶಾಂತಿ ನೆಲೆಸುತ್ತದೆ ಎಂಬ ನಂಬಿಕೆ ನಮಗಿದೆ. ಸದ್ಯ ಪರಿಸ್ಥಿತಿಯೆಲ್ಲವೂ ನಿಯಂತ್ರಣದಲ್ಲಿದೆ ಎಂದಿದ್ದಾರೆ.
ನೇಪಾಳದ ಜೊತೆಗೆ ನಮ್ಮ ಸಂಬಂಧ ಗಟ್ಟಿಯಾಗಿದೆ. ಆ ದೇಶದ ಜೊತೆಗೆ ಭೌಗೋಳಿಕ, ಸಾಂಸ್ಕೃತಿಕ, ಐತಿಹಾಸಿಕ, ಧಾರ್ಮಿಕ ಸಂಬಂಧಗಳ ಬೆಸುಗೆಯಿದೆ. ಈ ಸಂಬಂಧ ಇನ್ನು ಮುಂದೆಯೂ ನೇಪಾಳದ ಜೊತೆಗೆ ಗಟ್ಟಿಯಾಗಿ ಮುಂದುವರಿಯಲಿದೆ ಎಂದು ಹೇಳಿದರು.
ಆದರೆ, ಭಾರತ-ಚೀನಾ ಎರಡೂ ರಾಷ್ಟ್ರಗಳು ಇನ್ನೂ ತಮ್ಮ ಸೈನ್ಯವನ್ನು ಗಡಿ ಭಾಗದಿಂದ ಹಿಂಪಡೆದುಕೊಂಡಿಲ್ಲ. ಮಾತುಗಳ ನಂತರವೂ ಸೈನ್ಯ ಗಡಿ ಭಾಗದಲ್ಲಿ ನೆಲೆಸಿದೆ. ಚೀನಾದ ಸೈನ್ಯ ಹಿಂದೆ ಸರಿಯುವ ವರೆಗೂ ಭಾರತದ ಸೈನ್ಯ ಗಡಿ ಭಾಗದಿಂದ ಮರಳುವುದಿಲ್ಲ ಎನ್ನಲಾಗುತ್ತಿದೆ.