ಮಂಡ್ಯ ಜಿಲ್ಲೆಯಲ್ಲಿ ಮತ್ತೆ ರೌಡಿ ಚಟುವಟಿಕೆ ಸಕ್ರಿಯ : ಹಾಡು ಹಗಲೇ ಯುವಕನ್ನು ಅಟ್ಟಾಡಿಸಿ ಕೊಲೆ..!
ಮಂಡ್ಯ ಜಿಲ್ಲೆಯಲ್ಲಿ ಮತ್ತೆ ರೌಡಿ ಚಟುವಟಿಕೆ ಸಕ್ರಿಯಗೊಂಡಿದೆ. ಹಾಡು ಹಗಲೇ ಲಾಂಗ್ ಹಿಡಿದು ಯುವಕನ್ನು ಅಟ್ಟಾಡಿಸಿ ಕೊಲೆ ಮಾಡಿದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಲ್ಲಿ ಸಾರ್ವಜನಿಕರ ಎದುರೇ ನವೀನ್ ಅಲಿಯಾಸ್ ಕುಟ್ಟಿ (32) ಎಂಬಾತನನ್ನು ಕೊಲೆ ಮಾಡಲಾಗಿದ್ದು, ಮೂವರು ಯುವಕರು ಅಟ್ಟಾಡಿಸಿ ಚುಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಮಂಡ್ಯ ರಸ್ತೆಯಲ್ಲಿ ಸಿನಿಮಾ ಶೈಲಿಯಲ್ಲಿ ನವೀನ್ನನ್ನು ಅಟ್ಟಾಡಿಸಿ ಲಾಂಗ್ನಿಂದ ಹಲ್ಲೆ ಮಾಡಿ, ಚಾಕುವಿನಿಂದ ಚುಚ್ಚಿದ್ದಾರೆ. ತೀರ್ವವಾಗಿ ಹಲ್ಲೆಗೆ ಒಳಗಾದ ನವೀನ್ ಗೆ ಕೆ.ಎಂ. ದೊಡ್ಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಮೆಡಿಕಲ್ ಕಾಲೇಜಿನಲ್ಲಿ ದಾಖಲು ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾನೆ.
ಕೆ.ಎಂ.ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.ಕೊಲೆ ಹಳೇ ವೈಷಮ್ಯವೇ ಕಾರಣ ಎನ್ನಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.