ನಟ ಸಿದ್ಧಾರ್ಥ್ ಶುಕ್ಲಾ ಅವರದ್ದು ಸಹಜ ಸಾವು ಎಂಬುದಕ್ಕೆ ಸಾಕ್ಷಿಯಾದ ಮರಣೋತ್ತರ ವರದಿ!
ಬಿಗ್ ಬಾಸ್ 13ರ ವಿಜೇತ ಹಾಗೂ ಬಾಲಿವುಡ್ ನಟ ಸಿದ್ಧಾರ್ಥ್ ಶುಕ್ಲಾ ಅವರದ್ದು ಸಹಜ ಸಾವು ಎಂಬುದಕ್ಕೆ ಮರಣೋತ್ತರ ಪರೀಕ್ಷಾ ವರದಿ ಬೆಳಕು ಚೆಲ್ಲಿದೆ. ನಿನ್ನೆ ಹೃದಯಾಘಾತದಿಂದ ನಿಧನರಾದ ಸಿದ್ಧಾರ್ಥ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಆ ವರದಿಯಲ್ಲಿ ಸಿದ್ಧಾರ್ಥ್ ದೇಹದ ಮೇಲೆ ಆತಂರಿಕವಾಗಿ ಬಾಹ್ಯವಾಗಿ ಯಾವುದೇ ಗಾಯದ ಗುರುತುಗಳು ಕಂಡು ಬಂದಿಲ್ಲ. ಹೀಗಾಗಿ ಸಿದ್ಧಾರ್ಥ್ ಅವರದ್ದು ಹೇದಯಾಘಾತದಿಮದಾದ ಸಹಜ ಸಾವು ಎನ್ನಲಾಗುತ್ತಿದೆ.
ಮೊನ್ನೆ ರಾತ್ರಿ ತಾಯಿಯನ್ನು ವಿಮಾನ ನಿಲ್ದಾಣದಿಂದ ಕರೆತಂದಿದ್ದ ಸಿದ್ಧಾರ್ಥ ಕೊಂಚ ಆಯಾಸಗೊಂಡಿದ್ದು, ಕೆಲವು ಮಾತ್ರಗಳನ್ನು ಸೇವಿಸಿ ಮಲಗಿದ್ದಷ್ಟೇ ನಿನ್ನೆ ಬೆಳಿಗ್ಗೆ ಮೇಲೇಳಲೇ ಇಲ್ಲ. ತಾಯಿ ಸಿದ್ಧಾರ್ಥ್ ರನ್ನು ಎಬ್ಬಿಸಲು ಮುಂದಾದಾಗ ಸಿದ್ಧರ್ಥ್ ಮಾತನಾಡಿಲ್ಲ. ಗಾಬರಿಯಾದ ತಾಯಿ ತಮ್ಮ ಸಹೋದರಿಗೆ ಕರೆ ಮಾಡಿದ್ದಾರೆ. ತಕ್ಷಣ ಅವರು ವೈದ್ಯರಿಗೂ ಕರೆ ಮಾಡಿದ್ದಾರೆ. ತಡಮಾಡದೇ ಸಿದ್ಧಾರ್ಥ್ ಅವರನ್ನು ಮುಂಬೈನ ಕೂಪರ್ ಆಸ್ಪತ್ರೆಗೂ ದಾಖಲಿಸಲಾಗಿದೆ. ಅಲ್ಲಿ ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
40 ವರ್ಷದ ನಟನ ಹಠಾತ್ ಮರಣದಿಂದಾಗಿ ಬಾಲಿವುಡ್ ಬೆಚ್ಚಿಬಿದ್ದಿತ್ತು. ಇದು ಸಹಜ ಸಾವೋ? ಎನ್ನುವ ಅನುಮಾನ ಕೂಡ ಮೂಡಿತ್ತು. ಮುಂಬೈ ಪೊಲೀಸರು ಮರಣೋತ್ತರ ಪರೀಕ್ಷೆಯನ್ನು ವಿಡಿಯೋ ಮಾಡಿದ್ದಾರೆ. ಆಸ್ಪತ್ರೆಯ ವೈದ್ಯರು ಕೂಡ ನಟನ ಸಾವಿನಲ್ಲಿ ಯಾವುದೇ ಅನುಮಾನ ವ್ಯಕ್ತವಾಗುವ ಅಂಶಗಳು ಕಂಡುಬಂದಿಲ್ಲ. ಅನುಮಾನಕ್ಕೆ ಎಡೆ ಮಾಡಿಕೊಡುವ ಹೇಳಿಕೆಗಳನ್ನೂ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ವೈದ್ಯರು ತಿಳಿಸಿಲ್ಲ. ಹಿಸ್ಟೊಪಾಥಾಲಜಿ ಅಧ್ಯಯನ ಮತ್ತು ಸಿಎ (ರಾಸಾಯನಿಕ ವಿಶ್ಲೇಷಣೆ) ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಯಾವುದೇ ಬಾಹ್ಯ ಅಥವಾ ಆಂತರಿಕ ಗಾಯಗಳು ಕಂಡುಬಂದಿಲ್ಲ.
ಪೊಲೀಸರ ಪ್ರಕಾರ ಶವವನ್ನು ನೇರವಾಗಿ ಆಸ್ಪತ್ರೆಗೆ ತಂದಿದ್ದರಿಂದ ಎರಡು ಬಾರಿ ತಪಾಸಣೆ ಮಾಡಲಾಗಿದೆ. ಅವರ ಕುಟುಂಬ ಕೂಡ ಇಲ್ಲಿಯವರೆಗೆ ಯಾವುದೇ ಅನುಮಾನಗಳನ್ನು ಹುಟ್ಟುಹಾಕಿಲ್ಲ. ನಟನ ಸಹೋದರಿ, ಸೋದರ ಮಾವ, ಸೋದರ ಸಂಬಂಧಿ ಮತ್ತು ಮೂವರು ಸ್ನೇಹಿತರು ಶುಕ್ಲಾ ನಿಧನದ ಬಳಿಕ ಸಹಜ ಪ್ರತಿಕ್ರಿಯೆ ನೀಡಿದ್ದಾರೆ. ಅಂತ್ಯಸಂಸ್ಕಾರದ ಬಳಿಕ ಕುಟುಂಬಸ್ಥರ ವಿಚಾರಣೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಸಿದ್ಧಾರ್ಥ್ ಶುಕ್ಲಾ ಅವರ ಅಂತ್ಯಕ್ರಿಯೆ ಓಶಿವಾರದಲ್ಲಿ ನಡೆದಿದೆ. ಪ್ರಾಥಮಿಕ ವರದಿ ಅಥವಾ ಮರಣೋತ್ತರ ಪರೀಕ್ಷೆಯ ವರದಿಯನ್ನು ಅಧಿಕಾರಿಗಳು ಇನ್ನೂ ಹಂಚಿಕೊಳ್ಳಬೇಕಿದೆ.