ಮಹದಾಯಿ ವಿಚಾರದಲ್ಲಿ ಜನರ ಋಣ ತೀರಿಸಿ, ಇಲ್ಲವಾದ್ರೆ ರಾಜೀನಾಮೆ ನೀಡಿ: ಡಿಕೆಶಿ

ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ಮಂತ್ರಿ ಸ್ಥಾನದ ಆಸೆ ತೋರಿಸಿ ಸರ್ಕಾರ ಮಾಡಲು ಆಗುತ್ತದೆ, ನಿಮಗೆ ಮತ ನೀಡಿದ ಉತ್ತರ ಕರ್ನಾಟಕದ ಮತದಾರರ ಹಕ್ಕಿನ ಮಹದಾಯಿ ನೀರು ಕೊಡಿಸಲು ನಿಮ್ಮಿಂದ ಆಗುವುದಿಲ್ಲವೇ? ಜನರ ಋಣ ತೀರಿಸಿ ಇಲ್ಲವಾದ್ರೆ ರಾಜೀನಾಮೆ ನೀಡುವುದು ಉತ್ತಮ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಹುಬ್ಬಳ್ಳಿಗೆ ಆಗಮಿಸಿದ ಡಿಕೆ ಶಿವಕುಮಾರ್ ಅವರು ವಿಮಾನ ನಿಲ್ದಾಣದಲ್ಲಿ ಗುರುವಾರ ಮಾಧ್ಯಮಗಳ ಜತೆ ಮಾತನಾಡಿದರು. ಈ ವೇಳೆ ಅವರು ಹೇಳಿದ್ದಿಷ್ಟು…

  

‘ನಮ್ಮ ಸರ್ಕಾರ ಇರುತ್ತದೆ ಎಂದು ಭಾವಿಸಿದ್ದೆ. ಆದರೆ ಪ್ರಬಲ ಆಪರೇಷನ್ ಮಾಡುವ ಮೂಲಕ ನಮ್ಮ ಸರ್ಕಾರ ಬೀಳಿಸಲಾಗಿದೆ. ಪ್ರಜಾಪ್ರಭುತ್ವದಲ್ಲಿ ಏನೇನು ಆಗಬಾರದೋ ಅದೆಲ್ಲವೂ ಆಗುತ್ತಿದೆ.

ಈ ಭಾಗದ ಶಾಸಕರಿಗೆ ಮಂತ್ರಿ ಸ್ಥಾನ ಹಾಗೂ ಇತರ ಆಮೀಷ ತೋರಿರುವುದು ಭ್ರಷ್ಟಾಚಾರ ಅಲ್ಲವೇ? ಈ ಸರ್ಕಾರ ಬಂದು 100 ದಿನ ಆದರೂ ಈ ಭಾಗದ ಜನರ ಪ್ರಮುಖ ಬೇಡಿಕೆ ಮಹದಾಯಿ ಕುಡಿಯುವ ನೀರಿನ ಯೋಜನೆಯ ಕುರಿತು ಒಂದು ನೋಟಿಫಿಕೇಷನ್ ಹೊರಡಿಸಿಲ್ಲ.

ನಿನ್ನೆ ನಾನು ಕೋರ್ಟ್ ಕೆಲಸದ ಹಿನ್ನೆಲೆಯಲ್ಲಿ ದೆಹಲಿಗೆ ಹೋಗಿದ್ದಾಗ ಸಮಿತಿ ರಚನೆ ಮಾಡಲಾಗಿದೆ ಎಂಬುದನ್ನು ನೋಡಿದೆ. ನ್ಯಾಯಾಧಿಕರಣದಲ್ಲಿ ನಮಗೆ ಕುಡಿಯಲು 5 ಟಿಎಂಸಿಯಷ್ಟು ನೀರು ಸಿಕ್ಕಿದೆ. ಇನ್ನು ಹೆಚ್ಚಿನ ನೀರು ಬೇಕು ಎಂದು ನಮ್ಮ ಅರ್ಜಿ ನ್ಯಾಯಾಲಯದಲ್ಲಿ ಇದೆ. ಅದು ಆಮೇಲಿನ ವಿಚಾರ ಸಧ್ಯಕ್ಕೆ ನಮಗೆ ಸಿಕ್ಕಿರುವ ನೀರನ್ನು ಜನರಿಗೆ ತಲುಪಿಸಬೇಕಲ್ಲವೇ.

ಈ ಭಾಗದಿಂದ ಪ್ರಹ್ಲಾದ್ ಜೋಷಿ, ಸುರೇಶ್ ಅಂಗಡಿ ಅವರು ಕೇಂದ್ರದಲ್ಲಿ ಮಂತ್ರಿ ಆಗಿದ್ದಾರೆ. ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ, ಲಕ್ಷ್ಮಣ್ ಸವದಿ ಸೇರಿ ಅನೇಕರು ರಾಜ್ಯ ಸರ್ಕಾರದ ಉನ್ನತ ಸ್ಥಾನದಲ್ಲಿದ್ದಾರೆ. ಆದರೂ ದೆಹಲಿಯಲ್ಲಿ ರಾಜ್ಯಕ್ಕೆ ಯಾವ ಪ್ರಾಮುಖ್ಯತೆ ತಂದುಕೊಟ್ಟಿದ್ದಾರೆ ಎಂಬುದು ಇದರಿಂದಲೇ ತಿಳಿಯುತ್ತದೆ.

ಮಹದಾಯಿ ನೀರು ಸಿಗದೆ ಈ ಭಾಗದ ಜನರು ನೋವಿನಲ್ಲಿ ಬಳಲುತ್ತಿದ್ದಾರೆ. ಈ ಜನರ ನೋವಿಗೆ ಸ್ಪಂದಿಸಲು ನಿಮಗೆ ಸಾಧ್ಯವಾಗದಿದ್ದರೆ ನೀವು ಆ ಸ್ಥಾನದಲ್ಲಿ ಕೂರಲು ಲಾಯಕ್ಕಲ್ಲ. ಈ ವಿಚಾರದಲ್ಲಿ ಕೋರ್ಟ್ ಆದೇಶ ಇದೆ, ಅಗತ್ಯ ಜಾಗ ಇದೆ, ಹಣವೂ ಇದೆ. ಬೇರೆ ಯೋಜನೆಗಳನ್ನು ಸ್ವಲ್ಪ ತಡೆದು ಈ ಯೋಜನೆಗೆ ಒತ್ತು ನೀಡಿದರೆ ಜನರ ಸಮಸ್ಯೆಗೆ ಬೇಗ ಪರಿಹಾರ ಸಿಗುತ್ತದೆ. ಆದರೆ ಇದಕ್ಕೆ ಒಂದು ನೋಟಿಫಿಕೇಷನ್ ಹೊರಡಿಸಲು ಅವರಿಂದ ಸಾಧ್ಯವಾಗುತ್ತಿಲ್ಲ.

ವಿಧಾನಸಭೆ ಚುನಾವಣೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಅಷ್ಟು ದೊಡ್ಡ ಪ್ರಮಾಣದಲ್ಲಿ ಇಲ್ಲಿನ ಜನ ಮತ ಹಾಕಿ ಗೆಲ್ಲಿಸಿದರಲ್ಲಾ ಅವರ ಋಣ ತೀರಿಸುವುದಕ್ಕಾದರೂ ಮಹದಾಯಿ ವಿಚಾರದಲ್ಲಿ ಆಸಕ್ತಿ ವಹಿಸಬೇಕಿತ್ತು. ಉಪಕಾರ ಸ್ಮರಣೆ ಇರಬೇಕು ಇಲ್ಲವಾದರೆ ಯಡಿಯೂರಪ್ಪನವರು ರಾಜೀನಾಮೆ ಕೊಟ್ಟು ಹೋಗುವುದೇ ಒಳ್ಳೆಯದು.

ದೇವಾಲಯ ಭೇಟಿ ಸೇರಿದಂತೆ ಖಾಸಗಿ ಕಾರ್ಯಕ್ರಮದ ಮೇರೆಗೆ ನಾನು ಹುಬ್ಬಳ್ಳಿಗೆ ಆಗಮಿಸಿದೆ. ನನ್ನ ಕಷ್ಟಕಾಲದಲ್ಲಿ ನನ್ನ ಪರವಾಗಿ ಹೋರಾಡಿದ, ನನಗಾಗಿ ಪೂಜೆ, ಪ್ರಾರ್ಥನೆ, ಹರಕೆ ಮಾಡಿಕೊಂಡ ಜನರಿಗೆ ಅಭಿನಂದನೆ ಸಲ್ಲಿಸಲು ಕಾರ್ಯಕ್ರಮ ಮಾಡಲು ನಿರ್ಧರಿಸಿದ್ದೇನೆ.’

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights