ಮೃತ ವ್ಯಕ್ತಿಯ ಕುಟುಂಬಕ್ಕೆ 7.64 ಕೋಟಿ ರೂ. ಪರಿಹಾರ ನೀಡಬೇಕೆಂದು ಆದೇಶಿಸಿದ ಸುರ್ಪೀಂ ಕೋರ್ಟ್
ದುಬೈನಿಂದ ಮಂಗಳೂರಿಗೆ 2010ರ ಮೇ 22 ರಂದು ಪ್ರಯಾಣ ಬೆಳೆಸಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ಫ್ಲೈಟ್ 812 ಅಪಘಾತಕ್ಕೀಡಾಗಿತ್ತು. ವಿಮಾನದಲ್ಲಿದ್ದ 166 ಪ್ರಯಾಣಿಕರಲ್ಲಿ 158 ಮಂದಿ ಸಾವಿಗೀಡಾಗಿದ್ದರು. ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಸಂಬಂಧಿಕರಿಗೆ ಸುಪ್ರೀಂ ಕೋರ್ಟ್ 7.64 ಕೋಟಿ ರೂ. ಪರಿಹಾರ ನೀಡಬೇಕೆಂದು ಆದೇಶಿಸಿದೆ.
45 ವರ್ಷದ ಮಹೇಂದ್ರ ಕೊಡ್ಕಾನಿಯ ಅವರ ಪತ್ನಿ, ಮಗಳು ಮತ್ತು ಮಗನಿಗೆ ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗ (ಎನ್ಸಿಡಿಆರ್ಸಿ) ಈ ಹಿಂದೆ 7.35 ಕೋಟಿ ರೂ ನೀಡಬೇಕಾಗಿತ್ತು. ಇದೀಗ ಒಂಬತ್ತು ವರ್ಷದ ವಾರ್ಷಿಕ ಬಡ್ಡಿ ಶೇ. 9 ರಷ್ಟು ಹೆಚ್ಚುವರಿಯಾಗಿ ಸೇರಿಸಿ ಏರ್ ಇಂಡಿಯಾ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಕೊಡ್ಕನಿಯವರು ಯುಎಇ ಮೂಲದ ಕಂಪನಿಯೊಂದಕ್ಕೆ ಮಧ್ಯಪ್ರಾಚ್ಯದ ಪ್ರಾದೇಶಿಕ ನಿರ್ದೇಶಕರಾಗಿದ್ದರು. ವಿಮಾನವು ರನ್ ವೇ ಓವರ್ಶಾಟ್ ಮಾಡಿ ಬೆಟ್ಟದ ಪಕ್ಕಕ್ಕೆ ಇಳಿದು ಬೆಂಕಿ ಹೊತ್ತಿದ ಪರಿಣಾಮ ಅಪಘಾತಕ್ಕೀಡಾಗಿತ್ತು. ಅಪಘಾತದಲ್ಲಿ ಕೊಡ್ಕನಿ ವೃತಪಟ್ಟಿದ್ದರು.
ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಅಜಯ್ ರಸ್ತೋಗಿ ಅವರಿದ್ದ ಪೀಠವು “ಮೇಲಿನ ಮುಖ್ಯಸ್ಥರ ಖಾತೆಗೆ ಪಾವತಿಸಬೇಕಾದ ಒಟ್ಟು ಮೊತ್ತವು 7,64,29,437 ರೂ. ಆಗುತ್ತದೆ. ವಾರ್ಷಿಕ ಶೇ.9 ಬಡ್ಡಿದರವನ್ನೂ ಸೇರಿಸಿ ಪಾವತಿಸಬೇಕು. ದೂರುದಾರರಿಗೆ ಪಾವತಿಸಬೇಕಾದ ಬಾಕಿ ಮೊತ್ತವನ್ನು ಎರಡು ತಿಂಗಳ ಅವಧಿಯಲ್ಲಿ ಪಾವತಿಸಬೇಕು. ” ಎಂದಿದೆ.