‘ದೆಹಲಿಗೆ ಬಿಎಸ್ವೈ 6 ಬ್ಯಾಗ್ ತೆಗೆದುಕೊಂಡು ಹೋದ್ರು, ಅದ್ರಲ್ಲೇನಿತ್ತು?’ – ಹೆಚ್ಡಿಕೆ ವ್ಯಂಗ್ಯ
ದೆಹಲಿಗೆ ಹೋಗುವಾಗ ಸಿಎಂ ಯಡಿಯೂರಪ್ಪ 6 ಬ್ಯಾಗ್ ಗಳನ್ನು ತೆಗೆದುಕೊಂಡು ಹೋದ್ರು ಅದರಲ್ಲಿ ಏನಿತ್ತು ಅನ್ನೋದನ್ನ ಅವರೇ ಹೇಳಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.
ಆರು ಬ್ಯಾಗ್ ಗಳಲ್ಲಿ ರಾಜ್ಯದ ಸಮಸ್ಯೆಗಳನ್ನು ತೆಗೆದುಕೊಂಡು ಹೋದ್ರೋ ಅಥವಾ ಬೇರೆ ಏನಾದ್ರು ತೆಗೆದುಕೊಂಡು ಹೋಗಿದ್ರೋ ಅವರೇ ಹೇಳಬೇಕು. ಜೊತೆಗೆ ಪ್ರಧಾನಿ ಮೋದಿ ಅವರನ್ನು ಇವರು ಒಬ್ಬರೇ ಹೋಗಿ ಭೇಟಿ ಮಾಡಿದ್ರೋ ಅಥವಾ ಬ್ಯಾಗ್ ಗಳೊಂದಿಗೆ ಹೋಗಿ ಭೇಟಿ ಮಾಡಿದ್ರೋ ಎಂದು ವ್ಯಂಗ್ಯವಾಡಿದ್ದಾರೆ.
ನಿನ್ನೆ ಸಿಎಂ ಯಡಿಯೂರಪ್ಪ ದೆಹಲಿಗೆ ಪುತ್ರ ವಿಜಯೇಂದ್ರ ಜೊತೆಗೆ ವಿಶೇಷ ವಿಮಾನದಲ್ಲಿ ತೆರಳಿದ್ದರು. ನಿನ್ನೆ ಸಂಜೆ ನರೇಂದ್ರ ಮೋದಿ ಅವರನ್ನೂ ಭೇಟಿ ಮಾಡಿದ್ದರು. ಆದರೆ ರಾಜ್ಯದಲ್ಲಿ ಯಡಿಯೂರಪ್ಪ ಮೋದಿಯನ್ನು ಭೇಟಿ ಮಾಡುತ್ತಿರುವುದು ಸಿಎಂ ಬದಲಾವಣೆ ವಿಚಾರಕ್ಕೆ ಎನ್ನುವ ಹೇಳಿಕೆಗಳು ಹರಿದಾಡುತ್ತಿದ್ದವು. ಇದಕ್ಕೆ ಇಂದು ದೆಹಲಿಯಿಂದಲೇ ಪ್ರತಿಕ್ರಿಯಿಸಿದ ಯಡಿಯೂರಪ್ಪ ‘ರಾಜೀನಾಮೆ ಕೇಳಿಲ್ಲ, ಕೊಟ್ಟಿಲ್ಲ, ಸಿಎಂ ಬದಲಾವಣೆ ವಿಚಾರ ಶುದ್ಧ ಸುಳ್ಳು ಸುದ್ದಿ’ ಎಂದು ವಿರೋಧಿ ಬಣಗಳಿಗೆ ತಿರುಗೇಟು ಕೊಟ್ಟಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಕುಮಾರಸ್ವಾಮಿ ಇಲ್ಲಿಂದ ದೆಹಲಿಗೆ ವಿಶೇಷ ವಿಮಾನದಲ್ಲಿ ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ಹೋಗುವಾಗ 6 ಬ್ಯಾಗ್ ಎತ್ತುಕೊಂಡು ಹೋದ್ರು. ಅದ್ರಲ್ಲೇನಿತ್ತು ಅನ್ನೋದನ್ನ ಅವರೇ ಹೇಳಬೇಕು ಎಂದು ವ್ಯಂಗ್ಯವಾಡಿದ್ದಾರೆ.