ರಾಜ್ಯದಲ್ಲಿಂದು 22 ಹೊಸ ಕೊರೊನಾ ಪ್ರಕರಣ ಪತ್ತೆ : ಬೆಳಗಾವಿಯಲ್ಲೇ 14 ಕೇಸ್!
ಮಹಾಮಾರಿ ಕೊರೊನಾ ವೈರಸ್ ಕಾಡ್ಗಿಚ್ಚಿನಂತೆ ರಾಜ್ಯದಲ್ಲಿ ಹರಡುತ್ತದೆ. ಇಂದು 22 ಮಂದಿಗೆ ಕೊರೊನಾ ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 557ಕ್ಕೆ ಏರಿಕೆ ಕಂಡಿದೆ.
ಹೌದು… ರಾಜ್ಯದಲ್ಲಿಂದ 22 ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಇದರಲ್ಲಿ ಬೆಳಗಾವಿಯೇ ಮೇಲುಗೈ ಸಾಧಿಸಿ ಆತಂಕ ಸೃಷ್ಠಿ ಮಾಡಿದೆ. ಬೆಳಗಾವಿಯಲ್ಲಿಂದು ಒಟ್ಟು 14 ಜನರಿಗೆ ಕೊರೊನಾ ಪತ್ತೆಯಾಗಿದೆ. ಅದರಲ್ಲೂ ಬೆಳಗಾವಿ ಜಿಲ್ಲೆಯ ಹಾಟ್ಸ್ಪಾಟ್ ತಾಲೂಕು ಹಿರೇಬಾಗೇವಾಡಿಯಲ್ಲೇ 12 ಮಂದಿಗೆ ಸೋಂಕು ದೃಢಪಟ್ಟಿದ್ದು, ಆತಂಕಕ್ಕೆ ಕಾರಣವಾಗಿದೆ. ಉಳಿದಂತೆ ಬೆಂಗಳೂರಿನಲ್ಲಿ ಮೂವರಿಗೆ, ವಿಜಯಪುರದಲ್ಲಿ ಇಬ್ಬರಿಗೆ, ತುಮಕೂರು, ದಕ್ಷಿಣ ಕನ್ನಡ, ದಾವಣಗೆರೆ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಕೊರೊನಾ ತಗುಲಿದೆ. ದಾವಣಗೆರೆಯಲ್ಲಿ ನಿನ್ನೆಯಷ್ಟೇ ಸ್ಟಾಪ್ ನರ್ಸ್ಗೆ ಸೋಂಕು ಪತ್ತೆಯಾಗಿತ್ತು. ಇಂದು ದಾವಣಗೆರೆಯ ಜಾಲಿನಗರದ ನಿವಾಸಿ 68 ವರ್ಷದ ವೃದ್ಧನಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಏಪ್ರಿಲ್ 27ರಂದು ವೃದ್ಧ ಅನಾರೋಗ್ಯದಿಂದ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ಪ್ರತ್ಯೇಕವಾಗಿರಿಸಿ ಮುಂಜಾಗ್ರತ ಕ್ರಮ ಕೈಗೊಂಡಿದ್ದ ವೈದ್ಯರು ಚಿಕಿತ್ಸೆ ಕೊಡುತ್ತಿದ್ದರು. ಕೊರೊನಾ ಶಂಕೆ ವ್ಯಕ್ತವಾಗಿದ್ದರಿಂದ ಥ್ರೋಟ್ ಸ್ವ್ಯಾಬ್ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಸದ್ಯ ರಿಪೋರ್ಟ್ ಬಂದಿದ್ದು, ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ ನಿನ್ನೆ ದಾವಣಗೆರೆಯಲ್ಲಿ ಸೋಂಕು ಪತ್ತೆಯಾದ ಸ್ಟಾಪ್ ನರ್ಸ್ಗೂ ಈಗ ಪತ್ತೆಯಾದ ವೃದ್ಧನಿಗೂ ಯಾವುದೇ ಸಂಬಂಧವಿಲ್ಲ. ವೃದ್ಧನ ಕುಟುಂಬದ ಒಂದೂವರೆ ವರ್ಷದ ಮಗು, 3 ವರ್ಷದ ಮಗು ಸೇರಿ ಒಟ್ಟು ಒಂಬತ್ತು ಜನರನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಎಲ್ಲರ ರಕ್ತ ಹಾಗೂ ಥ್ರೋಟ್ ಸ್ವ್ಯಾಬ್ ಮಾದರಿಯನ್ನು ಸಂಗ್ರಹಿಸಿ ಶಿವಮೊಗ್ಗ ಲ್ಯಾಬ್ಗೆ ಕಳುಹಿಸಲಾಗಿದೆ. ಜೊತೆಗೆ ಜಾಲಿನಗರ ಸೀಲ್ಡೌನ್ ಮಾಡಲು ಪೊಲೀಸರು ಸಿದ್ಧತೆ ಮಾಡಲಾಗುತ್ತಿದೆ.
https://twitter.com/CMofKarnataka/status/1255758592659030019