ಲಾಕ್ಡೌನ್ ನಲ್ಲಿ ಜಪ್ತಿಯಾದ ವಾಹನಗಳನ್ನು ನಾಳೆ ಹಿಂದಿರುಗಿಸಲಾಗುವುದು – ಭಾಸ್ಕರ್ ರಾವ್
ಸುಖಾ ಸುಮ್ಮನೆ ಬೀದಿಗಿಳಿದು ಜಪ್ತಿಯಾದ ವಾಹನಗಳನ್ನ ಮೇ 1 ರಿಂದ ಹಿಂದಿರುಗಿಸಲಾಗುವುದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಹೌದು… ಲಾಕ್ ಡೌನ್ ಜಾರಿಯಲ್ಲಿದ್ದರೂ ಸಿಲಿಕಾನ್ ಸಿಟಿಯಲ್ಲಿ ಬೀದಿಗಿಳಿಯುತ್ತಿದ್ದ ಪುಂಡರ್ ವಾಹನಗಳನ್ನು ಜಪ್ತಿ ಮಾಡಲಾಗಿತ್ತು. ಅಲ್ಲದೇ, ಲಾಕ್ ಡೌನ್ ಮುಗಿಯುವವರೆಗೂ ವಾಹನಗಳನ್ನು ವಾಪಸ್ಸು ನೀಡುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ಖಡಕ್ ಸೂಚನೆ ಕೂಡ ನೀಡಿದ್ದರು. ಸದ್ಯ ಈ ವಾಹನಗಳನ್ನು ನಾಳೆ ಹಿಂದಿರುಗಿಸಲಾಗುವುದು.
ಅಗತ್ಯ ಸಮಯದಲ್ಲಿ ವಾಹನವಿಲ್ಲದೇ ಜನ ಚಿಂತೆಗೀಡಾಗಿದ್ದರು. ಅಲ್ಲದೇ, ಜಪ್ತಿ ಮಾಡಿದ್ದ ವಾಹನಗಳನ್ನು ಕೋರ್ಟ್ ಮೂಲಕವೇ ವಾಪಸ್ಸು ಬಿಡಿಸಿಕೊಳ್ಳಬೇಕು ಎಂಬ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸವಾರರು ಮತ್ತಷ್ಟು ಆತಂಕಕ್ಕೀಡಾಗಿದ್ದರು. ಆದರೀಗ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಇದಕ್ಕೆ ತಿಲಾಂಜಲಿ ಹಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಆಯುಕ್ತರು, ಲಾಕ್ಡೌನ್ ಆರಂಭದ ದಿನಗಳಲ್ಲಿ ಸೀಜ್ ಆಗಿರುವ ವಾಹನಗಳನ್ನು ಮೇ 1ರಿಂದ ವಾಪಸ್ ಮಾಡಲು ತೀರ್ಮಾನಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ. ಮುಖ್ಯಮಂತ್ರಿ, ಗೃಹ ಸಚಿವರ ಅನುಮತಿ ಮೇರೆಗೆ ವಾಹನಗಳ ವಾಪಸ್ಸು ನೀಡುತ್ತೇವೆ. ಆದರೆ, ಅದಕ್ಕೂ ಮುನ್ನ ವಾಹನಗಳ ದಾಖಲೆ ಪರಿಶೀಲಿಸಿ, ವಾಪಸ್ಸು ನೀಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಈವರೆಗೂ ಲಾಕ್ ಡೌನ್ ನಿಂದಾಗಿ 47,000 ವಾಹನಗಳನ್ನು ಜಪ್ತಿ ಮಾಡಲಾಗಿದ್ದು, ಸದ್ಯ ವಾಹನಗಳನ್ನು ಹಿಂದಿರುಗಿಸಲು ನಿರ್ಧರಿಸಲಾಗಿದೆ. ಆಯಾ ಠಾಣೆಯಲ್ಲಿ ವಾಹನಗಳನ್ನು ವಾಪಸ್ಸು ನೀಡಲಾಗುವುದು. ಆದರೆ, ಅದಕ್ಕೂ ಮುನ್ನ ಎನ್ಡಿಎಂಎ ಕಾಯ್ದೆಯನ್ವಯ ಶುಲ್ಕ ವಸೂಲಿ ಮಾಡಲಾಗುವುದು. ಮೊದಲು ಜಪ್ತಿ ಮಾಡಿದ ವಾಹನಗಳನ್ನು ಮೊದಲು ನೀಡುತ್ತೇವೆ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
https://twitter.com/deepolice12/status/1255695880042110976