ಎಸ್ಸಿ/ಎಸ್ಟಿ ಅಭ್ಯರ್ಥಿಗಳು ಪಡೆಯುವ ವಿನಾಯತಿಗಳನ್ನು ವಿಶೇಷ ಚೇತನರೂ ಪಡೆಯಬಹುದು: ಸುಪ್ರಿಂ ಕೋರ್ಟ್
ದೈಹಿಕವಾಗಿ ನ್ಯೂನತೆಗೆ ಒಳಗಾಗಿರುವ ಎಲ್ಲಾ ವಿಶೇಷ ಚೇತನರು ಸಾರ್ವಜನಿಕ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ನೀಡಲಾಗುವ ಎಲ್ಲಾ ರೀತಿಯ ರಿಯಾಯಿತಿಗಳು ಮತ್ತು ಸೌಲಭ್ಯಗಳನ್ನು ಪಡೆದುಕೊಳ್ಳಲು ಅರ್ಹರಾಗಿದ್ದಾರೆ. ಅವರೂ ಕೂಡ ಅಗತ್ಯ ಸೌಲಭ್ಯಗಳನ್ನು ಪಡೆದುಕೊಳ್ಲಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ನೇತೃತ್ವದ ಮೂವರು ನ್ಯಾಯಾಧೀಶರಿದ್ದ ನ್ಯಾಯಪೀಠವು ಈ ತೀರ್ಪು ನೀಡಿದ್ದು ದೆಹಲಿ ಹೈಕೋರ್ಟ್ನ 2012 ರ ತೀರ್ಪನ್ನು ಎತ್ತಿಹಿಡಿದಿದೆ.
“ದೈಹಿಕ ನ್ಯೂನತೆ ಹೊಂದಿರುವ ವಿಶೇಷಚೇತನರೂ ಕೂಡ ಸಾಮಾಜಿಕವಾಗಿ ಹಿಂದುಳಿದಿದ್ದಾರೆ ಎಂದು ಹೈಕೋರ್ಟ್ ಸರಿಯಾಗಿ ಅಭಿಪ್ರಾಯಪಟ್ಟಿದೆ. ಅಲ್ಲದೆ, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ನೀಡಲಾಗುವ ಎಲ್ಲಾ ಅರ್ಹ ರಿಯಾಯಿತಿಗಳಿಗೆ ಅವರೂ ಅರ್ಹರಾಗಿರುತ್ತಾರೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪಂಜಾಬ್ ಮೂಲದ ವಿಶೇಷ ಚೇತನ ವ್ಯಕ್ತಿ ಆರ್ಯನ್ ರಾಜ್ ಅವರು ಚಂಡೀಘರ್ ಸರ್ಕಾರಿ ಕಾಲೇಜ್ ಆಫ್ ಆರ್ಟ್ಸ್ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾರಿಮನ್ ಅವರನ್ನೊಳಗೊಂಡ ನ್ಯಾಯಪೀಠ ತೀರ್ಪು ನೀಡಿದೆ.
ಬೌದ್ಧಿಕವಾಗಿ ವುಶೇಷಚೇತನರ ಅಗತ್ಯತೆಗಳನ್ನು ಪೂರೈಸಲು ಹೊಸ ಶೈಕ್ಷಣಿಕ ಕೋರ್ಸ್ಗಳನ್ನು ರಚಿಸಬೇಕು ಎಂದು ಅನ್ಮೋಲ್ ಭಂಡಾರಿ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಹೇಳಿದ್ದನ್ನು ನ್ಯಾಯಮೂರ್ತಿ ನಾರಿಮನ್ ಅವರ ನ್ಯಾಯಪೀಠ ಎತ್ತಿ ಹಿಡಿದಿದೆ.
“ಬೌದ್ಧಿಕವಾಗಿ / ಮಾನಸಿಕವಾಗಿ ದುರ್ಬಲರು, ಅಸಾಮರ್ಥ್ಯತೆ ಹೊಂದಿದವರು ಕೆಲವು ಮಿತಿಗಳನ್ನು ಹೊಂದಿದ್ದಾರೆ ಎಂಬ ಅಂಶವನ್ನು ನಾವು ಮರೆಯುವಂತಿಲ್ಲ. ಅಂತಹಾ ವ್ಯಕ್ತಿಗಳ ನಿರ್ದಿಷ್ಟ ಅಗತ್ಯಗಳನ್ನು ಪೂರೈಸುವ ಕೋರ್ಸ್ ಅನ್ನು ರಚಿಸುವ ಕಾರ್ಯಸಾಧ್ಯತೆಯನ್ನು ಪರೀಕ್ಷಿಸಲು ವಿಷಯ ತಜ್ಞರಿಗೆ ಸಲಹೆ ನೀಡಲಾಗುತ್ತದೆ. ಅಂತಹ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಚಿತ್ರಕಲೆ ಮತ್ತು ಅನ್ವಯಿಕ ಕಲೆಯ ವಿಭಾಗದಲ್ಲಿ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುವುದನ್ನು ಅವರು ಪರಿಶೀಲಿಸಬಹುದು ”ಎಂದು ಹೈಕೋರ್ಟ್ ತೀರ್ಪಿನ ಉಲ್ಲೇಖವನ್ನು ಸುಪ್ರೀಂ ಪೀಠ ಪುನರುಚ್ಚರಿಸಿದೆ.
ಸುಪ್ರೀಂ ಕೋರ್ಟ್ ಗೆ ರಾಜ್ ಅವರ ಪರ ಹಾಜರಾಗಿದ್ದ ಅನ್ಮೋಲ್ ಭಂಡಾರಿ ಪ್ರಕರಣದಲ್ಲಿ ಹೈಕೋರ್ಟ್ನ ಅಮಿಕಸ್ ಕ್ಯೂರಿಯೂ ಆಗಿದ್ದ ವಕೀಲ ರಾಜನ್ ಮಣಿ, ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿದ್ದು ವಿಶೇಷಚೇತನರ ಹಕ್ಕುಮಗಾಲಿಗೆ ಮಹತ್ವದ ಜಯ ಲಭಿಸಿದಂತಾಗಿದೆ ಎಂದಿದ್ದಾರೆ.