ಲಾಕ್ ಡೌನ್ ನಡುವೆ ಎಣ್ಣೆ ಅಂಗಡಿ ಓಪನ್ : ಓಡೋಡಿ ಬಂದ ಮದ್ಯಪ್ರಿಯರಿಗೆ ಬಿಗ್ ಶಾಕ್..!
ಲಾಕ್ ಡೌನ್ ನಿಂದಾಗಿ ಎಲ್ಲಿಯೂ ಮದ್ಯ ಮಾರಾಟವಾಗುತ್ತಿಲ್ಲ. ಹೀಗಾಗಿ ಮದ್ಯದಂಗಡಿಗಳಲ್ಲಿ ಕಳ್ಳತನದ ಪ್ರಕರಣಗಳು ಬಳಕಿಗೆ ಬರುತ್ತಿರುವಾಗಲೇ ಸಡನ್ ಆಗಿ ಎಣ್ಣೆ ಅಂಗಡಿ ಒಂದು ಓಪನ್ ಆಗಿದೆ. ಇದರಿಂದ ಸ್ವರ್ಗದ ಬಾಗಿಲು ತೆರೆದಂತೆ ಸಂತಸಗೊಂಡ ಮದ್ಯಪ್ರಿಯರಿಗೆ ಜೀವ ಮಾನದ ಶಾಕ್ ಸಿಕ್ಕಿದೆ.
ಹೌದು.. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಯಳ್ಳಂಬಳಸೆ ಗ್ರಾಮದಲ್ಲಿ ಘಟನೆ ನಡೆದಿದೆ. ಅಲ್ಲಿನ ಬಾರ್ ಒಂದು ಇಂದು ಬೆಳ್ಳಂಬೆಳಗ್ಗೆ ಶೆಟರ್ ಓಪನ್ ಮಾಡಿ ಬಿಟ್ಟಿತ್ತು. ಅದನ್ನು ಕಂಡ ಮದ್ಯಪ್ರಿಯರು ಅದರ ಮುಂದು ಜಮಾಯಿಸಿಬಿಟ್ಟರು. ಅದೂ ಒಬ್ಬಿಬ್ಬರಲ್ಲ, ಲಾಕ್ಡೌನ್ ನಿಯಮ ಗಾಳಿಗೆ ತೂರಿ ನೂರಾರು ಜನರು ಆಸೆಕಂಗಳಿಂದ ಸೇರಿಬಿಟ್ಟಿದ್ದರು.
ಆದ್ರೆ ಅಲ್ಲಿನ ಅಸಲಿಯತ್ತೇ ಬೇರೆ. ಯಾಕಂದ್ರೆ ಆ ಬಾರ್ಗೆ ಹಿಂದಿನ ರಾತ್ರಿ ಯಾರೋ ದುಷ್ಕರ್ಮಿಗಳು ಕನ್ನ ಹಾಕಿ ಎಣ್ಣೆ ಬಾಟಲ್ಗಳನ್ನು ಎಗರಿಸಿಬಿಟ್ಟಿದ್ದರು. ವಿಷಯ ತಿಳಿದ ಮಾಲೀಕ ಯಗಟಿ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು, ಪರಿಶೀಲನೆಗಾಗಿ ಎಣ್ಣೆ ಅಂಗಡಿ ಬಾಗಿಲು ತೆರೆದಿದ್ದರು. ಆದ್ರೆ, ಇದನ್ನೇ ತಪ್ಪಾಗಿ ಭಾವಿಸಿದ ಕುಡುಕ ಮಹಾಶಯರು ಬಾಗಿಲನು ತೆರೆದು ದರುಶನ ಕೊಡುತಿದೆ ಮದಿರೆ ಅಂತಾ ಭಾವಿಸಿಬಿಟ್ಟಿದ್ದರು. ಹೀಗಾಗಿ, ಅಲ್ಲಿಗೆ ನೂರಾರು ಜನ ಆಗಮಿಸಿ ನೂಕುನುಗ್ಗಲಿಗೆ ಕಾರಣವಾಗಿತ್ತು. ತದನಂತರದಲ್ಲಿ ಯಗಟಿ ಪೊಲೀಸರು ಜನರನ್ನು ನಿಯಂತ್ರಿಸುವಲ್ಲಿ ಹೈರಾಣಾಗಿ ಹೋದ್ರು.
ಒಟ್ಟಿನಲ್ಲಿ ಅದೇನೇ ಇದ್ದರೂ, ಲಾಕ್ಡೌನ್ ಬಳಿಕ ಒಂದು ವೇಳೆ ಮದ್ಯದಂಗಡಿಗಳು ಓಪನ್ ಆದ್ರೆ, ಅವುಗಳ ಮುಂದೆ ಅದ್ಯಾವ ಪರಿಸ್ಥಿತಿ ನಿರ್ಮಾಣವಾಗಬಹುದು ಅನ್ನೋದಕ್ಕೆ ಈ ಘಟನೆಯಂತೂ ಉದಾಹರಣೆಯಾಗಿದ್ದು ಸುಳ್ಳಲ್ಲ.