ಸಕ್ಕರೆ ನಾಡಲ್ಲೊಬ್ಬ ಪೊಲೀಸ್ ಗೂಂಡ..! : ರಾತ್ರಿ ವೇಳೆ ರಸ್ತೆ ಬದಿಯಲ್ಲಿ ನಿಂತ್ರೆ ಬೀಳುತ್ತೆ ಗೂಸಾ..!
ಸರ್ಕಾರ ಪೊಲೀಸ್ ಇಲಾಖೆಯನ್ನ ಜನಸ್ನೇಹಿ ಮಾಡಲು ನಾನಾ ಕಸರತ್ತು ನಡೆಸ್ತಿದೆ. ಆದ್ರೆ ಸಕ್ಕರೆನಾಡಲ್ಲಿರುವ ಈ ಪೊಲೀಸಪ್ಪ ಅದಕ್ಕೆ ತದ್ವಿರುದ್ಧ. ಜನಸ್ನೇಹಿಯಾಗಿ ಮಾದರಿಯಾಗ್ಬೇಕಿದ್ದ ಪೊಲೀಸ್ ಅಧಿಕಾರಿ ದಿನನಿತ್ಯ ಸಾರ್ವಜನಿಕರ ಮೇಲೆ ಗೂಂಡಾಗಿರಿ ನಡೆಸ್ತಾನಂತೆ. ಗೂಂಡಾ ಪೊಲೀಸಪ್ಪನ ದೌರ್ಜನ್ಯಕ್ಕೆ ಮುಗ್ಧ ಜನತೆ ಮೈ ಕೈ ಮೂಳೆ ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗುವಂತಾಗಿದೆ. ಸಕ್ಕರೆನಾಡಲ್ಲಿರುವ ಗೂಂಡಾ ಪೊಲೀಸಪ್ಪನ ದೌರ್ಜನ್ಯ ಕುರಿತ ಒಂದು ವರದಿ ಇಲ್ಲಿದೆ ನೋಡಿ…
ಪೊಲೀಸ್ ಇಲಾಖೆ ಇರೋದು ಕಾನೂನು ಸುವ್ಯವಸ್ಥೆ ಕಾಪಾಡಲು ಅನ್ನೋದು ಎಲ್ಲರಿಗೂ ಗೊತ್ತಿರುವಂತದ್ದೇ. ಆದರೆ, ಮಂಡ್ಯದ ಮಳವಳ್ಳಿಯ ವೃತ್ತ ನಿರೀಕ್ಷಕರ ಕಚೇರಿಯಲ್ಲಿರುವ ಸರ್ಕಲ್ ಇನ್ಸ್ ಪೆಕ್ಟರ್ ರಮೇಶ್, ಕಾನೂನು ಸುವ್ಯವಸ್ಥೆ ಕಾಪಾಡುವ ಹೆಸರಲ್ಲಿ ಸಾರ್ವಜನಿಕರ ಮೇಲೆ ಗೂಂಡಾಗಿರಿ ನಡೆಸ್ತಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.
ಹೀಗೆ, ಸಾರ್ವಜನಿಕರನ್ನ ಮನಬಂದಂತೆ, ಹಿಗ್ಗಾಮುಗ್ಗ ಥಳಿಸುತ್ತಿರವ ಈತನ ಹೆಸರು ರಮೇಶ್.ಮಂಡ್ಯದ ಮಳವಳ್ಳಿ ಸರ್ಕಲ್ ಇನ್ಸ್ ಪೆಕ್ಟರ್. ಈತ ಮಳವಳ್ಳಿಗೆ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಬಂದಾಗಿಂದ ಸಾರ್ವಜನಿಕರನ್ನ ರಕ್ಷಣೆ ಮಾಡಿ, ಜನಸ್ನೇಹಿ ಆಗುವ ಬದಲು ಮಾರಕವಾಗ್ತಿದ್ದಾರಂತೆ. ಇದರ ಪರಿಣಾಮವಾಗಿ ಅಮಾಯಕರಿಬ್ಬರು ತಮ್ಮ ಮೈ-ಕೈ ಮೂಳೆ ಮುರಿದುಕೊಂಡು ಆಸ್ಪತ್ರೆ ಸೇರುವಂತಾಗಿದೆ.
ತಮ್ಮ ದೇಹದ ಮೈ-ಕೈ ಮೂಳೆ ಮುರಿದು ಕೊಂಡು ನೋವಿನಲ್ಲಿ ನಿಂತಿರುವ ಇವರು ಶಿವಕುಮಾರ್ ಮತ್ತು ಸಿದ್ದಪ್ಪಾಜಿ ಅಂತಾ. ಇವರಿಬ್ಬರು ಅನಾರೋಗ್ಯದ ನಿಮಿತ್ತ ಚಿಕಿತ್ಸೆ ಪಡೆದುಕೊಳ್ಳುವ ಸಲುವಾಗಿ ತಮಿಳುನಾಡಿಗೆ ತೆರಳಿ ವಾಪಸ್ಸಾಗಿದ್ರು.ತಮಿಳುನಾಡಿನಿಂದ ಬರೋದು ತಡವಾದ್ರಿಂದ ವಿಧಿ ಇಲ್ಲದೆ ತಡರಾತ್ರಿ ಮಳವಳ್ಳಿ ಪಟ್ಟಣದಲ್ಲಿ ನಿಂತಿದ್ರು. ಏಕಾಏಕಿ ಶಿವಕುಮಾರ್, ಸಿದ್ದಪ್ಪಾಜಿ ಬಳಿ ಆಗಮಿಸಿದ ಸಿಪಿಐ ರಮೇಶ್ ಮನಬಂದಂತೆ, ಮನಸ್ಸೋ ಇಚ್ಛೆ ಇಬ್ಬರ ಮೇಲು ಹಲ್ಲೆ ನಡೆಸಿದ್ದಾನೆ. ಇದರಿಂದಾಗಿ ಮೊದಲೇ ತೋಳಿನ ಮೂಳೆ ಮುರಿದುಕೊಂಡಿದ್ದ ಸಿದ್ದಪ್ಪಾಜಿ ಜೊತೆಗೆ ಶಿವಕುಮಾರ್ ಅವರ ಸೊಂಟದ ಮೂಳೆ ಕೂಡ ಮುರಿದು ಗಾಯಗೊಂಡಿದ್ದಾರೆ. ಸಿಪಿಐ ರಮೇಶ್ ದೌರ್ಜನ್ಯ ಮತ್ತು ಗೂಂಡಾಗಿರಿ ವಿಡಿಯೋ ಸ್ಥಳೀಯ ಸಿಸಿಟಿವಿ ಒಂದರಲ್ಲಿ ರೆಕಾರ್ಡ್ ಆಗಿದೆ. ಸರ್ಕಲ್ ಇನ್ಸ್ ಪೆಕ್ಟರ್ ರಮೇಶ್ ವಿರುದ್ಧ ದೌರ್ಜನ್ಯದ ವಿಡಿಯೋ ದಾಖಲೆ ಸಹಿತ ದಕ್ಷಿಣ ವಲಯ ಐಜಿಪಿಗೆ ಗಾಯಾಳುಗಳು ದೂರು ನೀಡಿದ್ದು, ನಿರಂತರವಾಗಿ ಸಾರ್ವಜನಿಕರ ಮೇಲೆ ದೌರ್ಜನ್ಯ ಎಸಗುತ್ತಿರುವ ಗೂಂಡಾ ಪೊಲೀಸಪ್ಪನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಏನೇ ಆಗ್ಲೀ, ಜನಸ್ನೇಹಿ ಆಗ್ಬೇಕಿದ್ದ ಪೊಲೀಸ್ ಇಲಾಖೆಗೆ ಇಂತಹ ಗೂಂಡಾ ಪೂಲೀಸರು ಮಾರಕವೇ ಸರಿ. ಇನ್ನಾದರೂ, ಸಂಬಂಧಪಟ್ಟ ಹಿರಿಯ ಅಧಿಕಾರಿಗಳು, ಇಂತಹವರ ವಿರುದ್ಧ ಕ್ರಮವಹಿಸಿ ಇಲಾಖೆಯನ್ನ ಜನಸ್ನೇಹಿಯಾಗಿ ಮತ್ತು ಪೊಲೀಸ್ ಎಂದರೆ ಜನರಿಂದ ಭಯ ಮುಕ್ತವಾಗಿಸ್ತಾರ ಅನ್ನೋದನ್ನ ಕಾದುನೋಡ್ಬೇಕಿದೆ.