ಸಚಿವ ಕಾರಜೋಳಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ನೆಟ್ಟಿಗರ ಆಕ್ರೋಶ…!
ದೇಶದಲ್ಲೇ ಕೊರೊನಾ ಸೋಂಕಿಗೆ ಮೊದಲು ಬಲಿಯಾದವರು ಕಲಬುರ್ಗಿಯ ನಿವಾಸಿ. ಹೀಗಾಗಿ ಇಡೀ ಜಿಲ್ಲೆಯಾದ್ಯಂತ ಜನ ಆತಂಕಕ್ಕೆ ಒಳಗಾಗಿದ್ದಾರೆ. ಅತೀ ವೇಗವಾಗಿ ಹರಡುತ್ತಿರುವ ಸೋಂಕಿನ ಬಗ್ಗೆ ಜನರಲ್ಲಿ ಆರೋಗ್ಯ ಸಚಿವರು ಅಭಯ ಮೂಡಿಸುತ್ತಿದ್ದರೆ, ಇತ್ತ ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ಮೌನ ತಾಳಿದ್ದಾರೆ.
ಇದಕ್ಕೆ ಸಿಟ್ಟಿಗೆದ್ದ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಕೊರೊನಾಗೆ ಮೊದಲ ಬಲಿ ಕಲಬುರಗಿಯಲ್ಲಿ ಆಗಿದ್ದ ಹಿನ್ನಲೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಜಿಲ್ಲೆಗೆ ಭೇಟಿ ನೀಡಿ ಜನರಿಗೆ ಧೈರ್ಯ ಹೇಳಿದ್ದಾರೆ. ಆದರೆ ಜಿಲ್ಲೆಯ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಜಿಲ್ಲೆಗೆ ಇದುವರೆಗೂ ಭೇಟಿ ನೀಡದೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳ ಜೊತೆ ಮಾತನಾಡುತ್ತಿದ್ದಾರೆ.ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಜನರು ಸಚಿವರ ವಿರುದ್ಧ ಗರಂ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಚಿವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಕಿಡಿಕಾರಿದ್ದಾರೆ.
ಕಲಬುರಗಿ ಜನತೆ ಸಾಮಾಜಿಕ ಜಾಲತಾಣಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳಗೆ ‘ಭಾವಪೂರ್ಣ ಶ್ರದ್ಧಾಂಜಲಿ’, ‘ಗೋವಿಂದ ಕಾರಜೋಳ ಗೋವಿಂದ ನಾಮ ಹಾಡುತ್ತಿದ್ದಾರೆ’, ‘ಗೋವಿಂದ ಕಾರಜೋಳ ಎಲ್ಲಿ ಅಡಗಿ ಕುಳಿತಿದ್ದಾರೆ ನೋಡ್ರಿ ಸ್ವಾಮಿ’, ‘ಇಂತಹವರು ನಾಯಕರು ನಮಗೆ ಬೇಕಾ’ ಎಂದು ಜನರು ಬರದು ಪೋಸ್ಟ್ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಹೀಗಿದ್ದರು ಸಹ ಗೋವಿಂದ ಕಾರಜೋಳ ಜಿಲ್ಲೆ ಕಾಲಿಟ್ಟಿಲ್ಲ.
ಈಗಲಾದರೂ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಭೇಟಿ ನೀಡಿ ಜನರಿಗೆ ಧೈರ್ಯ ತುಂಬುತ್ತಾರಾ ಕಾದು ನೋಡಬೇಕಿದೆ. ಇಲ್ಲವಾದಲ್ಲಿ ಜನ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ ಮುಂದೊಂದು ದಿನ ಹೀಗೊಂದು ಸಚಿವರು ಇದ್ದರು ಅನ್ನೋ ಮುಖವನ್ನೂ ಮರೆತರೂ ಆಶ್ವರ್ಯ ಪಡಬೇಕಿಲ್ಲ.