ಮೊಬೈಲ್ ಕರೆ ದಾಖಲೆಗಳ ಮೇಲೆ ಸರ್ಕಾರ ಕಣ್ಗಾವಲು; ದೂರಸಂಪರ್ಕಸೇವಾ ಸಂಸ್ಥೆಗಳ ಆತಂಕ
ಸುಪ್ರೀಂ ಕೋರ್ಟ್ ನಿರ್ದೇಶಿಸಿರುವ ಖಾಸಗಿತ್ವದ ನಿಯಮಗಳನ್ನು ಉಲ್ಲಂಘಿಸಿ, ಕಳೆದ ಕೆಲವು ತಿಂಗಳುಗಳ, ಕೆಲವು ದಿನಗಳಂದಿನ, ದೇಶದ ಹಲವು ರಾಜ್ಯಗಳಲ್ಲಿನ ಮೊಬೈಲ್ ಬಳಕೆದಾರರ ಕರೆ ದಾಖಲೆಗಳನ್ನು ನೀಡುವಂತೆ ಕೇಂದ್ರ ಸರ್ಕಾರ ಮೊಬೈಲ್ ಸೇವಾ ಸಂಸ್ಥೆಗಳನ್ನು ಕೇಳಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ದೂರಸಂಪರ್ಕ ಇಲಾಖೆಯ (ಡಿ ಓ ಟಿ) ಪ್ರಾದೇಶಿಕ ಕಚೇರಿಗಳಿಂದ ದೂರಸಂಪರ್ಕ ಸೇವೆ ನೀಡುವ ಸಂಸ್ಥೆಗಳಿಗೆ ಇಂತಹ ಕೋರಿಕೆಯನ್ನು ಸಲ್ಲಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ. ದೆಹಲಿ, ಆಂಧ್ರ ಪ್ರದೇಶ, ಹರ್ಯಾಣ, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ, ಕೇರಳ, ಒರಿಸ್ಸಾ, ಮಧ್ಯಪ್ರದೇಶ ಮತ್ತು ಪಂಜಾಬ್ ರಾಜ್ಯಗಳ ಮೊಬೈಲ್ ಬಳಕೆದಾರರ ಕರೆ ದಾಖಲೆಗಳನ್ನು ಕೇಳಿರುವುದಾಗಿ ದ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಇದರ ಬಗ್ಗೆ ಸಂಶಯ ವ್ಯಕ್ತಪಡಿಸಿ ಪೆಬ್ರವರಿ 12 ರಂದು ಭಾರತದ ದೂರಸಂಪರ್ಕ ಸೇವಾ ಸಂಸ್ಥೆಗಳ ಸಂಘ ಡಿ ಓ ಟಿ ಕಾರ್ಯದರ್ಶಿ ಆಂಶು ಪ್ರಕಾಶ್ ಅವರಿಗೆ ದೂರು ನೀಡಿದೆ. ದೆಹಲಿ ಹಲವು ಸಚಿವರು, ಸಂಸದರು, ನ್ಯಾಯಾಧೀಶರು ಮುಂತಾದ ಗಣ್ಯರು ನೆಲೆಸುವ ಪ್ರದೇಶವಾಗಿದ್ದು, ಇಂತಹ ಪ್ರದೇಶಗಳಲ್ಲಿ ಎಲ್ಲ ಕರೆ ದಾಖಲೆಯನ್ನು ಕೇಳುವುದು ಕಣ್ಗಾವಲಿನ ಆರೋಪಕ್ಕೆ ಕಾರಣಾಗುತ್ತದೆ ಎಂದು ಪ್ರಕಾಶ್ ಅವರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಪೆಬ್ರವರಿ 2, 3 ಮತ್ತು 4 ನೇ ತಾರೀಕಿನ ದೆಹಲಿಯ ಪ್ರದೇಶದ 53 ದಶಲಕ್ಷ ಮೊಬೈಲ್ ಬಳಕೆದಾರರ ಕರೆ ದಾಖಲೆಗಳನ್ನು ಡಿ ಓಟಿ ಕೇಳಿದೆ ಎಂದು ತಿಳಿದಿರುವುದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಆ ಸಮಯದಲ್ಲಿ ಸಿ ಎ ಎ ವಿರೋಧಿ ಪ್ರತಿಭಟನೆಗಳು ದೆಹಲಿಯಲ್ಲಿ ತೀವ್ರವಾಗಿದ್ದವು. ದೆಹಲಿ ಚುನಾವಣೆಯ ಪ್ರಚಾರ ಕೂಡ ನಡೆದಿದ್ದ ಸಮಯ ಅದು.