ಹುಬ್ಬಳ್ಳಿಯಲ್ಲಿ ಜೋರಾಗಿದೆ ಸಿಎಎ ಮತ್ತು ಎನ್ಆರ್ಸಿ ಪರ- ವಿರೋಧಿ ಹೋರಾಟ
ಹುಬ್ಬಳ್ಳಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಪರ ಮತ್ತು ವಿರೋಧಿ ಅಲೆ ಜೋರಾಗಿದೆ. ಸಿಎಎ ಬೆಂಬಲಿಸಿ ಎಬಿವಿಪಿ ಕಾರ್ಯಕರ್ತರು ಬೃಹತ್ ಹೋರಾಟ ನಡೆಸಿದ್ದಾರೆ. ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ನೂತನ ಕಾಯ್ದೆಗೆ ತೀವೃ ವಿರೋಧ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವರಿಗೆ ಗುಲಾಬಿ ಹೂವಿನ ಜೊತೆಗೆ ಕಾಯ್ದೆ ಹಿಂಪಡೆಯುವಂತೆ ಮನವಿ ಕೊಟ್ಟಿದ್ದಾರೆ.
ಎಬಿವಿಪಿ ಮಹಾತಿರಂಗಾ ಯಾತ್ರೆ.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ಹುಬ್ಬಳ್ಳಿಯಲ್ಲಿ ಎಬಿವಿಪಿಯಿಂದ ಬೃಹತ್ ಮಹಾ ತಿರಂಗಾ ಯಾತ್ರೆ ನಡೆಯಿತು. ರಾಷ್ಟ್ರಧ್ವಜ ಹಿಡಿದ ಸಾವಿರಾರು ವಿದ್ಯಾರ್ಥಿಗಳು, ನಗರದ ಬಿವಿಬಿ ಕಾಲೇಜು ಮೈದಾನದಿಂದ ಸಂಗೊಳ್ಳಿರಾಯಣ್ಣ ವೃತ್ತದವರೆಗೆ ಮೆರವಣಿಗೆ ಮಾಡಿದ್ರು. ನಂತರ ಸಂಗೊಳ್ಳಿರಾಯಣ್ಣ ವೃತ್ತದಲ್ಲಿ ಬಹಿರಂಗ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ಸಿಎಎ ಮತ್ತು ಎನ್ಆರ್ಸಿ ಪರ ಘೋಷಣೆಗಳನ್ನು ಕೂಗಿದ್ರು.
ಪೌರತ್ವ ಕಾಯ್ದೆಯ ಕುರಿತು ತಪ್ಪು ಸಂದೇಶಗಳನ್ನು ಹರಿಬಿಡಲಾಗುತ್ತಿದೆ. ರಾಜಕೀಯ ಲಾಭಕ್ಕಾಗಿ ಜನರಲ್ಲಿ ಆತಂಕ ಸೃಷ್ಟಿಸುವ ಕೆಲಸವಾಗುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾರ ಪೌರತ್ವವನ್ನೂ ಕಸಿದುಕೊಳ್ಳುವುದಿಲ್ಲ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಜಾಗೃತಿ ಮೂಡಿಸಿದ್ರು. ತಿರಂಗಾ ಯಾತ್ರೆಯಲ್ಲಿ ಶಂಕ್ರಣ್ಣ ಮುನವಳ್ಳಿ ಮತ್ತು ವೀರೇಶ್ ಬಾಳಿಕಾಯಿ ಸೇರಿದಂತೆ ಹಲವು ಎವಿವಿಪಿ ಮುಖಂಡರು ಭಾಗವಹಿಸಿದ್ದರು.
ಮಹಿಳಾ ಕಾಂಗ್ರೆಸ್ ಬಿಳಿ ಗುಲಾಬಿ ಹೋರಾಟ.
ಇನ್ನೊಂದೆಡೆ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್ಆರ್ಸಿ ಜಾರಿ ವಿರೋಧಿಸಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಪ್ರತಿಭಟನೆ ಮಾಡಿದ್ರು. ಮಹಾನಗರ ಪಾಲಿಕೆ ಬಳಿಯಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರ ಕಚೇರಿ ಎದುರು ಮೌನ ಹೋರಾಟ ನಡೆಸಿದ್ರು. ಭೀಕರ ಪ್ರವಾಹದಿಂದ ಉತ್ತರ ಕರ್ನಾಟಕದ ಜನರು ಸಂಕಷ್ಟದಲ್ಲಿದ್ದಾರೆ. ನೆರೆಯಲ್ಲಿ ಮನೆ ಮತ್ತು ಆಸ್ತಿಗಳ ಜೊತೆಗೆ ದಾಖಲೆಗಳು ಕೊಚ್ಚಿಹೋಗಿವೆ. ಎನ್ಆರ್ಸಿ ಜಾರಿಗೊಳಿಸಿದ್ರೆ ಬಹಳಷ್ಟು ಕುಟುಂಬಗಳಿಗೆ ಪೌರತ್ವ ಸಾಬೀತುಡಿಸುವ ದಾಖಲೆಗಳನ್ನು ಕೊಡಲು ಆಗಲ್ಲ. ಹೀಗಾಗಿ ಬಹಳಷ್ಟು ಪ್ರವಾಹ ಸಂತ್ತಸ್ತರು ಆತಂಕದಲ್ಲಿದ್ದಾರೆ. ಕೇಂದ್ರ ಸರ್ಕಾರ ಸಿಎಎ ಮತ್ತು ಎನ್ಆರ್ಸಿ ಕಾಯ್ದೆ ಜಾರಿ ವಿಚಾರವನ್ನು ಕೂಡಲೆ ಕೈಬಿಡಬೇಕೆಂದು ಒತ್ತಾಯಿಸಿದ್ರು. ಬಿಳಿಯ ಗುಲಾಬಿ ಹೂಗಳನ್ನು ಹಿಡಿದು ಪ್ರಲ್ಹಾದ್ ಜೋಶಿಯವರ ಕಚೇರಿಗೆ ಆಗಮಿಸಿದ್ರು. ಕಚೇರಿ ಸಿಬ್ಬಂಧಿಗೆ ಗುಲಾಬಿ ಹೂವಿನ ಜೊತೆಗೆ ಮನವಿ ಪತ್ರವನ್ನು ಸಲ್ಲಿಸಿದ್ರು.
ಗೊಂದಲಕ್ಕೆ ಬೀಳಬೇಕಾಗಿದೆ ತೆರೆ.
ಸಿಎಎ ಮತ್ತು ಎನ್ಆರ್ಸಿ ಕಾಯ್ದೆ ದೇಶದ ಸುಭದ್ರೆತೆಗೆ ಅವಶ್ಯಕವಾಗಿರುವ ಅಸ್ತ್ರಗಳು ಎಂಬುದು ಒಂದು ವರ್ಗದ ನಂಬಿಕೆ. ಇನ್ನೊಂದು ವರ್ಗದವರಿಗೆ ಈ ಕಾಯ್ದೆಗಳು ಜನ ವಿರೋಧಿ ಎನ್ನುವ ಸಂಶಯ. ಪರ ಮತ್ತು ವಿರೋಧಿ ಚರ್ಚೆಗಳು, ಹೋರಾಟಗಳು ಜನಸಾಮಾನ್ಯರಲ್ಲಿ ಗೊಂದಲ ಮೂಡಿಸಿರುವುದಂತೂ ಸತ್ಯ. ಎದ್ದಿರುವ ಪ್ರಶ್ನೆಗಳಿಗೆ ಸೂಕ್ತ ಉತ್ತರ ಕೊಟ್ಟು ಕಾನೂನುಗಳನ್ನು ಜಾರಿಗೆ ತಂದರೆ ಒಳಿತು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.