ಹೆಚ್.ಡಿ. ಕುಮಾರಸ್ವಾಮಿ ಮತ್ತು ಕುಟುಂಬ ಸದಸ್ಯರ ವಿರುದ್ಧ 200 ಎಕರೆ ಭೂ ಕಬಳಿಕೆ ಆರೋಪ!
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮತ್ತು ಕುಟುಂಬ ಸದಸ್ಯರ ವಿರುದ್ಧ ಭೂ ಕಬಳಿಕೆ ಆರೋಪ ಕೇಳಿ ಬಂದಿದೆ.
ಇಂಥಹದೊಂದು ಆರೋಪವನ್ನು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ, ಎಸ್.ಆರ್. ಹಿರೇಮಠ ಅವರು ಮಾಡಿದ್ದಾರೆ. ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆದ ಭೂ ಕಬಳಿಕೆ ದಾಖಲೆಗಳನ್ನು ಹಿರೇಮಠ್ ಅವರು ಬಿಡುಗಡೆ ಮಾಡಿದ್ದಾರೆ.
ರಾಮನಗರ ಜಿಲ್ಲೆಯ ಕೇತಿ್ಅನ ಹಳ್ಳಿಯಲ್ಲಿ 200 ಎಕರೆ ಭೂ ಕಬಳಿಕೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ದೇವೆಗೌಡರ ಪತ್ನಿಯ ಸಹೋದರಿ ಸಾವಿತ್ರಮ್ಮ, ಸಂಬಂಧಿ ಡಿ.ಸಿ. ತಮ್ಮಣ್ಣ ಹಾಗೂ ತಮ್ಮಣ್ಣ ಸೋದರ ನಂಜುಡಯ್ಯರಿಂದ ಭೂ ಕಬಳಿಕೆಯಾಗಿದೆ. ನೂರಾರು ಕೋಟಿ ರೂಪಾಯಿ ಬೆಲೆಬಾಳುವ ಜಮೀನು ಕಬಳಿಸಿದ್ದಾರೆ. ಈ ಬಗ್ಗೆ ಕರ್ನಾಟಕ ಹೈಕೋರ್ಟ್ನಲ್ಲಿ 131 ಪುಟಗಳ ರಿಟ್ ಪಿಟಿಷನ್ ಹಾಕಿದ್ದೇವೆ. ಹೈಕೋರ್ಟ್ನಲ್ಲಿ ವಿಚಾರಣೆಗೂ ಬಂದಿದೆ. ಮುಂದಿನ ಮಂಗಳವಾರ ಈ ಪ್ರಕರಣ ನ್ಯಾಯಾಲಯದ ಎದುರು ಬರಲಿದೆ.
ಈ ಬಗ್ಗೆ 2014 ರ ಆಗಸ್ಟ್ 5 ರಂದು ಲೋಕಾಯುಕ್ತರು ಐದು ಪುಟಗಳ ಆದೇಶ ಹೊರಡಿಸಿ, ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ನಾಲ್ಕು ತಿಂಗಳೊಳಗೆ ಕ್ರಮ ಕೈಗೊಳ್ಳಲು ತಿಳಿಸಿತ್ತು.
ಕಬಳಿಕೆಯಾದ ಭೂಮಿ ಸರ್ಕಾರದ ವಶಕ್ಕೆ ಪಡೆದು ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿತ್ತು. ಸರ್ಕಾರದ ಭೂಮಿ ಸರ್ಕಾರಕ್ಕೆ ಮರಳಿ ಬರಬೇಕು. ಕಬಳಿಸಿದವರು ಹಾಗೂ ಕಬಳಿಸಲು ಅನುಕೂಲ ಮಾಡಿದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಆ್ಯಕ್ಷನ್ ಆಗಬೇಕು ಅಂತಾ ನಾವು ದೂರಿನಲ್ಲಿ ಕೇಳಿದ್ದೇವೆ ಎಂದಿದ್ದಾರೆ.