Bidar school : ಅಂದು ದೇಶದ್ರೋಹದ ಕೇಸ್, ಇಂದು ಕೊರೋನಾ ಕ್ವಾರಂಟೀನ್ ಕೇಂದ್ರ…
ಕೆಲ ತಿಂಗಳ ಹಿಂದೆ ಪೌರತ್ವ ಕಾಯಿದೆ ವಿರುದ್ಧ ನಾಟಕ ಪ್ರದರ್ಶಿಸಿ ಸರಕಾರದ ಕೆಂಗಣ್ಣಿಗೆ ತುತ್ತಾಗಿದದ ಇಲ್ಲಿನ ಶಹೀನ್ ಶಾಲೆ ಈಗ ಕೊರೋನಾ ಕ್ವಾರಂಟೀನ್ ಕೇಂದ್ರವಾಗಿ ಮಾರ್ಪಟ್ಟಿದೆ. ಕೊರೋನಾ ಸೋಂಕುಳ್ಳವರ ಸಂಪರ್ಕಿತರನ್ನು ಕಲೆ ಹಾಕುವ ಕ್ವಾರಂಟೀನ್ ಕೇಂದ್ರವಾಗಿ ಶಹೀನ್ ಶಾಲೆ ಮಾರ್ಪಟ್ಟಿದ್ದು, ಇಲ್ಲಿ 193 ಜನ ತತ್ಕಾಲ ವಾಸವಿದ್ದಾರೆ.
ಬೀದರಿನಲ್ಲಿ ಕೊರೋನಾ ಕೇಸುಗಳು ಪತ್ತೆಯಾದ ನಂತರ ಜಿಲ್ಲಾಡಳಿತ ಕ್ವಾಂಟೀನ್ ಕೇಂದ್ರಗಳನ್ನು ತೆರೆಯುವ ಸಿದ್ಧತೆಯಲ್ಲಿದ್ದಾಗ ಶಹೀನ್ ಶಾಲೆಯೂ ಗುರುತಾಯಿತು. ಕ್ವಾರಂಟೀನ್ ಕೇಂದ್ರವನ್ನಾಗಿ ತತ್ಕಾಲ ಶಾಲೆಯನ್ನು ಮಾರ್ಪಡಿಸಲು ಅನುಮತಿ ಕೋರಲಾಯಿತು. ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿದ ಶಹೀನ್ ಸಮೂಹದ ಮುಖ್ಯಸ್ಥ ಡಾ. ಅಬ್ದುಲ್ ಖಾದಿರ್ ಶಾಲೆಯನ್ನು ಬಿಟ್ಟುಕೊಟ್ಟರು. ಆರಂಭದಲ್ಲಿ ಈ ಶಾಲೆಯಲ್ಲಿ 130 ಸೋಂಕು ಸಂಪರ್ಕಿತರಿಗೆ ಆಶ್ರಯ ಕಲ್ಪಿಸಲಾಗಿತ್ತು ಬಳಿಕ ಬುಧವಾರ ಸುಮಾರು 60 ಮಂದಿ ಇಲ್ಲಿಗೆ ಬಂದಿದ್ದಾರೆ ..
ಸುತ್ತ ಮುತ್ತಲ ಪ್ರದೇಶದಲ್ಲಿ ಯಾರೂ ಕ್ವಾರಂಟೀನ್ ಕೇಂದ್ರಕ್ಕೆ ಜಾಗ ನೀಡಲು ಹಿಂದುಮುಂದು ನೋಡಿದ್ದ ಕಾರಣ ಶಹೀನ್ ಸಂಸ್ಥೆಯನ್ನು ಆಡಳಿತ ವರ್ಗ ಸಂಪರ್ಕಿಸಬೇಕಾಯಿತು. ಪೌರತ್ವ ಕಾಯಿದೆ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಆ ಕುರಿತು ನಾಟಕ ಪ್ರದರ್ಶಿಸಿದ್ದ ಕಾರಣ ಜಿಲ್ಲಾಡಳಿತ ಶಾಲೆಯ ಮುಖ್ಯಸ್ಥರು ಹಾಗೂ ಮಕ್ಕಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿತ್ತಲ್ಲದೇ ದೇಶದ್ರೋಹದ ಕೇಸು ಜಡಿದಿತ್ತು.