ಉನ್ನಾವೋ ರೇಪ್ ಸಂತ್ರಸ್ತೆ ತಂದೆ ಸಾವು: ಕುಲದೀಪ್ ಸೆಂಗಾರ್ ಸೇರಿ ಏಳು ಜನಕ್ಕೆ 10 ವರ್ಷ ಜೈಲು
ಉನ್ನಾವೋ ರೇಪ್ ಸಂತ್ರಸ್ತೆಯ ತಂದೆಯ ಸಾವಿನ ಪ್ರಕರಣದಲ್ಲಿ ಉಚ್ಚಾಟಿತ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್, ಅವರ ಸಹೋದರ ಮತ್ತು ಇಬ್ಬರು ಪೊಲೀಸರು ಸೇರಿದಂತೆ ಏಳು ಜನರಿಗೆ 10 ವರ್ಷ ಜೈಲು ಶಿಕ್ಷೆ ನೀಡಿ ಶುಕ್ರವಾರ ಜಿಲ್ಲಾ ಕೋರ್ಟ್ ಆದೇಶ ನೀಡಿದೆ.
ಈ ಪ್ರಕರಣದ ಹಿನ್ನಲೆಯನ್ನು ಗಮನಿಸಿದಾಗ ಈ ಆರೋಪಿಗಳಿಗೆ ಕಡೆಮೆ ಶಿಕ್ಷೆಗೆ ಅರ್ಹರಲ್ಲ ಎಂದು ಜಿಲ್ಲ ನ್ಯಾಯಾಧೀಶ ಧರ್ಮೇಶ್ ಶರ್ಮ ಹೇಳಿದ್ದಾರೆ. “ಕಾನೂನನ್ನು ಮುರಿದಿರುವುದು ನಿಜ. ಅಶೋಕ್ ಸಿಂಗ್ ಬಹದೂರಿಯ, ಕೆ ಪಿ ಸಿಂಗ್ ಮತ್ತು ಕುಲದೀಪ್ ಸಿಂಗ್ ಸೆಂಗಾರ್ ಗಳು ಸಾರ್ವಜನಿಕ ಅಧಿಕಾರಿಗಳು… ಅವರು ಕಾನೂನನ್ನು ಗೌರವಿಸಬೇಕು. ಅವರನ್ನು (ತಂದೆ) ಹೊಡೆದದ್ದು ಅವರ ಸಾವಿಗೆ ಕಾರಣವಾಯಿತು… ಇದು ಕಡಿಮೆ ಶಿಕ್ಷೆಗೆ ಅರ್ಹವಾದದ್ದಲ್ಲ” ಎಂದು ಕೋರ್ಟ್ ಹೇಳಿದೆ.
ಕೋರ್ಟ್ ಈ ಆದೇಶ ನೀಡಿದ ನಂತರ ಠಾಣಾ ಅಧಿಕಾರಿ ಅಶೋಕ್ ನ್ಯಾಯಧೀಶರಿಗೆ ಕ್ಷಮಾಪಣೆ ನೀಡುವಂತೆ ಕೋರಿ ಬೇಡಿಕೊಂಡಿದ್ದಾರೆ. “ ನನ್ನ ಮಕ್ಕಳ ತಪ್ಪೇನು. ನಾನು ನನ್ನ ಕೆಲಸ ಮಾಡುತ್ತಿದ್ದೆ. ಸೆಂಗಾರ್ ಜೊತೆಗೆ ನನ್ನ ಸಂಬಂಧವೇನಿಲ್ಲ. ಇದು ಸಾವಿನ ತರಹದ್ದು. ದಯವಿಟ್ಟು ನನಗೆ ಕ್ಷಮಾಪಣೆ ನೀಡಿ” ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಧೀಶರು “ನಮಗೆ ನಿರ್ಧಾರಗಳನ್ನು ಮಾಡುವುದು ಬಹಳ ಕಷ್ಟ. ಅಪರಾಧ ಮಾಡುವಾಗ ನೀವು ನಿಮ್ಮ ಮಡದಿ ಮತ್ತು ಮಕ್ಕಳ ಬಗ್ಗೆ ಯೋಚಿಸಬೇಕಿತ್ತು” ಎಂದಿದ್ದಾರೆ.
ಆರೋಪಿಗಳಿಗೆ ಶಿಕ್ಷೆ ನಿಡೀರುವ ಕೋರ್ಟ್ “ಕುಲದೀಪ್ ಸೆಂಗಾರ್ ಅವರ ಸಹಚರರಂತೆ ವರ್ತಿಸುತ್ತಿದ್ದ ವಿನೀತ್ ಮಿಶ್ರ, ಬೀರೇಂದರ್ ಸಿಂಗ್, ಶಶಿ ಪ್ರತಾಪ್ ಸಿಂಗ್ (ಮತ್ತು ಗುರುತು ಪತ್ತೆ ಹಚ್ಚಲಾಗರ ಇನ್ನು ಕೆಲವು ಮಂದಿಯೊಂದಿಗೆ) ಕಾಲಿನಲ್ಲಿ ಒದ್ದು, ಮುಷ್ಠಿಯಲ್ಲಿ ಹೊಡೆದು, ಬಂದೂಕಿನ ನಳಿಕೆಯಿಂದ ಚುಚ್ಚಿ ಹಿಂಸೆ ಕೊಟ್ಟಿರುವುದು ಸಾಬೀತಾಗಿದೆ” ಎಂದು ತಿಳಿಸಿದೆ.
ಸಾಕ್ಷ್ಯಗಳ ಕೊರತೆಯಿಂದ ಆರೋಪಿಗಳಾಗಿದ್ದ ಇತರ ಪೊಲೀಸ್ ಪೇದೆಗಳಾದ ಅಮೀರ್ ಖಾನ್, ಶೈಲೇಂದ್ರ ಸಿಂಗ್, ರಾಮ್ ಚರಣ್ ಸಿಂಗ್ ಮತ್ತು ಶರದ್ವೀರ್ ಸಿಂಗ್ ಅವರನ್ನು ಕೋರ್ಟ್ ಖುಲಾಸೆ ಮಾಡಿದೆ.
ಕೋರ್ಟ್ ನಲ್ಲಿ ಡ್ರಾಮಾ ಮಾಡಿದ ಕುಲದೀಪ್ ಸೆಂಗಾರ್
“ತಾನು ತಪ್ಪು ಮಾಡಿದ್ದರೆ ನನ್ನನ್ನು ಗಲ್ಲಿಗೆೇರಿಸಿ, ಬೇಕಾದರೆ ನನ್ನ ಕಣ್ಣಿಗೆ ಆಸಿಡ್ ಸುರಿಯಿರಿ ದಯವಿಟ್ಟು ನನಗೆ ನ್ಯಾಯ ಕೊಡಿ” ಎಂದು ಕುಲದೀಪ್ ನ್ಯಾಯಾಧೀಶ ಶರ್ಮ ಅವರ ಮುಂದೆ ಬೇಡಿಕೊಂಡ ಘಟನೆ ನಡೆದಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಾಧೀಶರು “ಇದು ಅಷ್ಟು ಸುಲಭ ಅಲ್ಲ. ಎಷ್ಟೋ ಫೋನ್ ಕಾಲುಗಳ ದಾಖಲೆ ಇದೆ. ಆರು ಘಂಟೆಯ ನಂತರ ಈ ಘರ್ಷಣೆ ನಡೆದಿದೆ…. ತಂದೆಗೆ ಹೊಡೆಯಲಾಗಿದೆ. ಯಾಕೆ ಈ ಕೆಲಸ ಮಾಡಿದಿರಿ” ಎಂದು ಪ್ರಶ್ನಿಸಿದ್ದಾರೆ.