ಬಾಡಿಗೆ ಆಧಾರದಲ್ಲಿ ಸಾರಿಗೆ ನಿಗಮದ ಬಸ್ಸುಗಳನ್ನು ಪಡೆಯಲು ಅನುಮತಿ..
ಲಾಕ್ ಡೌನ್ ನಿಂದಾಗಿ ಸ್ವಂತ ಊರುಗಳಿಗೆ ತೆರಳು ಸಾಧ್ಯವಾಗದೇ ವಲಸೆ ಕಾರ್ಮಿಕರು, ಯಾತ್ರಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರರು ಬೇರೆ ರಾಜ್ಯಗಳಿಗೆ ತೆರಳಲು ಸಾರಿಗೆ ನಿಗಮ ಬಸ್ಸುಗಳನ್ನು ಬಾಡಿಗೆಗೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಹೌದು… ರಾಜ್ಯಾದ್ಯಂತ ಕೊರೋನಾ ವೈರಾಣು (ಕೋವಿಡ್ -19) ಸಂಬಂಧ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಾರ್ಮಿಕರು, ಯಾತ್ರಾರ್ಥಿಗಳು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರ ವ್ಯಕ್ತಿಗಳು ಕರ್ನಾಟಕದಿಂದ ಇತರೆ ರಾಜ್ಯಗಳಿಗೆ ಪ್ರಯಾಣಿಸಲು ಪಾವತಿ ಆಧಾರದ ಮೇಲೆ ಎಲ್ಲಾ ಕೆ.ಎಸ್.ಆರ್.ಟಿ.ಸಿ./ಎನ್.ಡಬ್ಲ್ಯೂ ಕೆ.ಆರ್.ಟಿ.ಸಿ. /ಎನ್.ಇ.ಕೆ.ಆರ್.ಟಿ.ಸಿ. ಬಸ್ಸುಗಳನ್ನು ಬಾಡಿಗೆಗೆ ನೀಡಬಹುದು. ಇದೇ ರೀತಿಯ ಸೌಲಭ್ಯವನ್ನು ಕೈಗಾರಿಕಾ ಚಟುವಟಿಕೆಗಳಿಗೆ ಕಾರ್ಮಿಕರಿಗೂ ಸಹಾ ಪಾವತಿ ಆಧಾರದ ಮೇಲ್ ನೀಡಬಹುದು ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಸದಸ್ಯ ಕಾರ್ಯದರ್ಶಿ ರಾಜ್ಯ ಕಾರ್ಯಕಾರಿ ಸಮಿತಿ, ಕಂದಾಯ ಇಲಾಖೆ(ವಿಪತ್ತು ನಿರ್ವಹಣೆ) ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಶನಿವಾರ ಸುತ್ತೋಲೆ ಹೊರಡಿಸಲಾಗಿದೆ. ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಕಾರ್ಯಾರಂಭಿಸಲು ಅನುಮತಿ ನೀಡಿರುವ ಕೈಗಾರಿಕೆಗಳು ಕೂಡಾ ತಮ್ಮ ಕಾರ್ಮಿಕರನ್ನು ಕರೆದೊಯ್ಯಲು ಸಾರಿಗೆ ನಿಗಮದ ಬಸ್ಸುಗಳನ್ನು ಬಾಡಿಗೆಗೆ ಪಡೆಯಬಹುದು ಎಂದೂ ಈ ಸುತ್ತೋಲೆಯಲ್ಲಿ ತಿಳಿಸಲಾಗಿದೆ.