ರಾಜ್ಯಸಭೆಗೆ ಜೆಡಿಎಸ್ ಬೆಂಬಲಿಸುವ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ: ಡಿಕೆಶಿ
ಕಾಂಗ್ರೆಸ್ನ ಕಟ್ಟಾಳು ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯಸಭೆಗೆ ಅಭ್ಯರ್ಥಿಯನ್ನಾಗಿ ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಘೋಷಿಸಿದ್ದಾರೆ. ಆದರೆ, ಜೆಡಿಎಸ್ ಅನ್ನು ಬೆಂಬಲಿಸುವು ವಿಚಾರವಾಗಿ ಇನ್ನೂ ಯಾವುದೇ ನಿರ್ಧಾರವನ್ನು ಕೈಕೊಂಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಜೆಡಿಎಸ್ ಇದುವರೆಗೂ ಕಾಂಗ್ರೆಸ್ ಬಳಿ ಬೆಂಬಲ ಕೇಳಿಲ್ಲ. ಪಕ್ಷದ ಅಧ್ಯಕ್ಷನಾಗಿರುವ ನನ್ನನ್ನೂ ಯಾರೂ ಸಹ ಬೆಂಬಲ ಕೇಳಿಲ್ಲ. ಒಂದು ವೇಳೆ ಬೆಂಬಲ ಕೇಳಿದರೆ, ಬೆಂಬಲ ನೀಡುವ ಬಗ್ಗೆ ಪಕ್ಷಗಳ ಸಿದ್ಧಾಂತ ವಿಚಾರದ ಮೇಲೆ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ, ಕಾಂಗ್ರೆಸ್ನ 5 ಶಾಸಕರ ರಾಜೀನಾಮೆ ಕೊಡಿಸುತ್ತೇನೆ ಎಂದಿದ್ದ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಗೆ ಡಿಕೆಶಿ ತಿರುಗೇಟು ನೀಡಿದ್ದು, ‘ಯಾರೋ ಮೆಂಟಲ್ ಗಳು ಏನೇನೋ ಮಾತನಾಡುತ್ತಾರೆ. 30, 40, 50 ಅಂತ ಕಡ್ಲೆಪುರಿ ವ್ಯಾಪಾರ ಮಾಡುತ್ತಾರೆ. ನಮ್ಮ ಶಾಸಕರಿಗೆ ಅಗೌರವ ಕೊಡುವುದು ಬೇಡ. ಯಾರು ಏನೇನು ಮಾತನಾಡುತ್ತಾರೆ, ಸಭೆ ಮಾಡುತ್ತಾರೆ, ಯಾವ ಹೊಟೇಲ್ ನಲ್ಲಿ ಸಭೆ ಮಾಡಿದ್ದಾರೆ, ಯಾರನ್ನು ಕಾಯುತ್ತಿದ್ದರು ಎಂಬುದೆಲ್ಲವೂ ತಮಗೆ ಗೊತ್ತು. ನಾವು ಏನು ಸುಮ್ಮನೆ ಕುಳಿತಿಲ್ಲ. ನಮಗೆ ಬೇರೆಯವರ ವಿಚಾರ ಬೇಡ. ನಾವುಂಟು ನಮ್ಮ ಶಾಸಕರು ಉಂಟು’ ಎಂದು ಬಿಜೆಪಿ ಒಳಗಿನ ಭಿನ್ನಮತಕ್ಕೆ ಠಕ್ಕರ್ ಕೊಟ್ಟಿದ್ದಾರೆ.