ಅಭಿನಯ ಶಾರದೆ ಹಿರಿಯ ನಟಿ ಜಯಂತಿ ಆಸ್ಪತ್ರೆಗೆ ದಾಖಲು..!
ಅಭಿನಯ ಶಾರದೆ ಹಿರಿಯ ನಟಿ ಜಯಂತಿ ಅವರಿಗೆ ತೀವ್ರ ಉಸಿರಾಟದ ತೊಂದರೆಯಿಂದ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೌದು… ಅಸ್ತಮಾದಿಂದ ಬಳಲುತಿದ್ದ ಅವರಿಗೆ ಈ ಹಿಂದೆ ಉಸಿರಾಟದ ತೊಂದರೆ ಎದುರಾಗಿತ್ತು. ವಿಕ್ರಮ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಿದ ಬಳಿಕ ಅವರು ಗುಣಮುಖರಾಗಿದ್ದರು. ಮತ್ತೆ ನಿನ್ನೆ ಜಯಂತಿಯವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ತಕ್ಷಣ ಅವರ ಪುತ್ರ ಕೃಷ್ಣ ಕುಮಾರ್ ಜಯಂತಿಯವರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಜಯಂತಿಯವರ ವಯಸ್ಸು 70 ದಾಟಿದ್ದು ಕೊರೊನಾ ಪರೀಕ್ಷೆ ಕೂಡ ಮಾಡಲಾಗಿದ್ದು ರೆಪೋರ್ಟ್ ನೆಗೆಟಿವ್ ಬಂದಿದೆ. ಇದರಿಂದ ಕುಟುಂಬಸ್ಥರು, ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಜೊತೆಗೆ ಸದ್ಯ ಚಿಕಿತ್ಸೆಗೆ ಜಯಂತಿಯವರು ಸ್ಪಂದಿಸುತ್ತಿದ್ದು, ಚೇತರಿಸಿಕೊಳ್ಳುವ ನಿರೀಕ್ಷೆ ಕೂಡ ಇದೆ.
ಕನ್ನಡ ಚಿತ್ರರಂಗದ ಮಟ್ಟಿಗೆ ಅಭಿನಯ ಶಾರದೆ ಎಂದು ಕರೆಸಿಕೊಂಡಿರುವ ಜಯಂತಿ ಸಾಹಸಿಂಹ ವಿಷ್ಣುವರ್ಧನ್ ಅವರ ಮೊದಲ ಚಿತ್ರ ನಾಗರಹಾವು ದಲ್ಲಿ ಮಾಡಿದ್ದ ಓನಕೆ ಓಬವ್ವ ಪಾತ್ರ ಇಂದಿಗೂ ಕಣ್ಣಿಗೆ ಕಟ್ಟಿದಂತೆ ಇದೆ.
ಕಳೆದ ವರ್ಷ ಐದು ಭಾಷೆಗಳಲ್ಲಿ ರಿಲೀಸ್ ಆದ ಸೈರಾ ನರಸಿಂಹ ರೆಡ್ಡಿ ಚಿತ್ರದ ಬಳಿಕ ಹಿರಿಯ ನಟಿ ಜಯಂತಿ ಮತ್ತೆ ಬೇರೆ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಅವರು ನಟಿಸಿದ ಕೊನೆಯ ಕನ್ನಡ ಸಿನಿಮಾ ‘ನಮಿತಾ ಐ ಲವ್ ಯೂ’ 2011ರಲ್ಲಿ ರಿಲೀಸ್ ಆಗಿತ್ತು.
ಕಲಾತ್ಮಕ ಸೇವೆ ಸಲ್ಲಿಸಿ ಎಷ್ಟೋ ಪ್ರೇಕ್ಷಕರನ್ನು ರಂಜಿಸಿರುವ ಜಯಂತಿರವರ ಆರೋಗ್ಯ ಸಮಸ್ಯೆಯಿಂದ ಹೊರ ಬಂದು ಸಕಲ ಆರೋಗ್ಯ, ಆಯಸ್ಸು ವೃದಿಯಾಗಲಿ ಎನ್ನುವುದು ಎಲ್ಲರ ಆಶಯ.