ಹತ್ರಾಸ್ ಗ್ಯಾಂಗ್ರೇಪ್: ದಲಿತ ಮಹಿಳೆ ದೆಹಲಿ ಆಸ್ಪತ್ರೆಯಲ್ಲಿ ಸಾವು..!
ಸೆಪ್ಟೆಂಬರ್ 14 ರಂದು ಹತ್ರಾಸ್ ಜಿಲ್ಲೆಯ ನಾಲ್ಕು ಮೇಲ್ಜಾತಿಯ ಪುರುಷರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಉತ್ತರ ಪ್ರದೇಶದ 19 ವರ್ಷದ ದಲಿತ ಮಹಿಳೆ ನವದೆಹಲಿಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಬಲಿಪಶುವನ್ನು ಆರಂಭದಲ್ಲಿ 15 ದಿನಗಳ ಹಿಂದೆ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ನಾಲಿಗೆ ಕತ್ತರಿಸಲ್ಪಟ್ಟಿದ್ದು, ಬೆನ್ನು ತೀವ್ರವಾಗಿ ಗಾಯಗೊಂಡಿತ್ತು. ನಂತರ ಅವರನ್ನು ರಾಜಧಾನಿಯ ಸಫ್ದರ್ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸುವ ಮೊದಲು ಚಿಕಿತ್ಸೆಗಾಗಿ ಅಲಿಘರ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಸಂತ್ರಸ್ತೆಯನ್ನು ಹೊಲಕ್ಕೆ ಎಳೆದು ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವಳ ದುಪಟ್ಟಾಳಿಂದ ಕತ್ತು ಕೂಡ ಹಿಸುಕಲಾಗಿತ್ತು ಎನ್ನಲಾಗಿದೆ.
ಈ ಪ್ರಕರಣದಲ್ಲಿ ಎಸ್ಸಿ / ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯ ಆರೋಪದಡಿ ಹತ್ರಾಸ್ ಜಿಲ್ಲೆಯ ನಾಲ್ಕು ಮೇಲ್ಜಾತಿಯ ಪುರುಷರನ್ನು ಬಂಧಿಸಲಾಗಿದೆ.
ಸೆಪ್ಟೆಂಬರ್ 23 ರಂದು ಸಂತ್ರಸ್ತೆ ಪ್ರಜ್ಞೆ ಪಡೆದಾಗ ನೀಡಿದ ಹೇಳಿಕೆಯ ಆಧಾರದ ಮೇಲೆ ಅವರನ್ನು ಬಂಧಿಸಲಾಯಿತು. ಸಂದೀಪ್, ಅವರ ಚಿಕ್ಕಪ್ಪ ರವಿ (35) ಮತ್ತು ಅವರ ಸ್ನೇಹಿತ ಲುವ್ ಕುಶ್ ಎಂಬ ಮೂವರು ಈ ಅಪರಾಧ ಎಸಗಿದ್ದಾರೆ ಎಂದು ಆಕೆ ಆರೋಪಿಸಿದ್ದಾಳೆ.
ಘಟನೆ ನಡೆಯುವ ಮೊದಲು ತಮ್ಮ ಹಸುಗಳಿಗೆ ಹುಲ್ಲು ಕತ್ತರಿಸಲು ಹತ್ತಿರದ ಹೊಲಕ್ಕೆ ತೆರಳಿದ್ದ ಸಂತ್ರಸ್ತೆಯ ತಾಯಿ ಮಾದ್ಯಮಕ್ಕೆ ಮಾತನಾಡಿ, “ನಾನು ಅವಳಿಂದ 100 ಮೀಟರ್ ದೂರದಲ್ಲಿ ಕುಳಿತಿದ್ದೆ. ನಾನು ಅವಳನ್ನು ಉಳಿಸಬಹುದಿತ್ತು. ಅವಳು ಕರೆ ನನಗೆ ಕೇಳಿಸಲಿಲ್ಲ” ಎಂದಿದ್ದಾರೆ.