ಕಾಂಗ್ರೆಸ್ ಸರ್ಕಾರ ನಡೆಸುತ್ತಿಲ್ಲ, ವ್ಯಾಪಾರ ಮಾಡುತ್ತಿದೆ; ಜ್ಯೋತಿರಾಧಿತ್ಯ ಸಿಂಧಿಯಾ
ರಾಜಸ್ಥಾನದಲ್ಲಿ ಉಂಟಾಗಿರುವ ಕಾಂಗ್ರೆಸ್ನ ರಾಜಕೀಯ ಬಿಕ್ಕಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಪೊಳ್ಳು ನೀತಿಗಳು ಹಾಗೂ ದುರ್ಬಲತೆಯೇ ಕಾರಣ. ಕಾಂಗ್ರೆಸ್ ಸರ್ಕಾರ ನಡೆಸುತ್ತಿಲ್ಲ, ವ್ಯಾಪಾರ ಮಾಡುತ್ತಿದೆ ಎಂದು ಮಧ್ಯಪ್ರದೇಶದ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಜ್ಯೋತಿರಾಧಿತ್ಯ ಸಿಂಧಿಯಾ ಹೇಳಿದ್ದಾರೆ.
ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ವಿರುದ್ಧ ಭಿನ್ನಾಭಿಪ್ರಾಯಗಳೊಂದಿಗೆ ಬಂಡಾಯ ಎದ್ದಿದ್ದ ಹಾಗೂ ಬಿಜೆಪಿ ಸೇರುತ್ತಾರೆ ಎನ್ನಲಾಗಿದ್ದ ರಾಜಸ್ಥಾನ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ರನ್ನು ಸಮರ್ಥಿಸಿಕೊಂಡಿರುವ ಸಿಂಧಿಯಾ, ಇಡೀ ದೇಶದ ವಿವಿದ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರ ಉರುಳುತ್ತಿದೆ. ದೇಶಾದ್ಯಂತ ಕಾಂಗ್ರೆಸ್ ದುರ್ಬಲಗೊವಾಗುತ್ತಿದೆ. ಇದಕ್ಕೆ ಪಕ್ಷದ ಹೈಕಮಾಂಡ್ ನೀತಿಗಳೇ ಕಾರಣ ಎಂದು ಕಿಡಿಕಾರಿದ್ದಾರೆ.
ರಾಜಸ್ಥಾನದಲ್ಲಿ ಪಕ್ಚ ಹಾಗೂ ಸರ್ಕಾರವನ್ನು ಸಮರ್ಥವಾಗಿ ಮುನ್ನಡೆಸಬಲ್ಲವರಾಗಿದ್ದ ಸಚಿನ್ ಪೈಲಟ್ ಅವರೊಂದಿಗೆ ಕಾಂಗ್ರೆಸ್ ನಡೆದುಕೊಂಡ ರೀತಿ ನಿಜಕ್ಕೂ ದುರದೃಷ್ಟಕರವಾದದ್ದು ಎಂದಿದ್ದಾರೆ.
ಪಕ್ಷ ಮುನ್ನಡೆಸಬಲ್ಲ ಸಾಮರ್ಥ್ಯ ಇರುವವರನ್ನು ಮೂಲೆಗುಂಪು ಮಾಡಿ ಲೂಟಿ ಹೊಡೆಯುವರ ಕೈಗೆ ಅಧಿಕಾರ ಕೊಡುವುದು ಕಾಂಗ್ರೆಸ್ ಹಳೆ ಚಾಳಿಯಾಗಿದೆ. ಇದಕ್ಕೆ 15 ತಿಂಗಳು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ನಡೆಸಿದ ಆಡಳಿತದ ವೈಖರಿಯೇ ಉದಾಹರಣೆಯಾಗಿದೆ ಎಂದು ಸಿಂಧಿಯಾ ಹೇಳಿದ್ದಾರೆ.
ಕಾಂಗ್ರೆಸ್ ಯಾವುದೇ ರಾಜ್ಯದಲ್ಲಿ ಸರ್ಕಾರ ಸ್ಥಾಪಿಸಿದರೂ ಅದನ್ನು ವ್ಯಾಪಾರದಂತೆ ನಡೆಸುತ್ತದೆ. ಕೇವಲ ಲಾಭದ ಧೋರಣೆಯನ್ನು ಮಾತ್ರ ಕಾಂಗ್ರೆಸ್ ಹೊಂದಿದ್ದು, ಇದರಿಂದ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಭ್ರಷ್ಟಾಚಾರದ ಶಿಖರ ಬೆಳೆಯುತ್ತಿದೆ ಎಂದು ಸಿಂಧಿಯಾ ಆರೋಪಿಸಿದ್ದಾರೆ.
ಪೈಲಟ್ ಅವಮನಿತರಾಗಿ ಪಕ್ಷ ಬಿಡುತ್ತಿದ್ದು, ಕಾಂಗ್ರೆಸ್ ಈ ಅಪರಾಧಕ್ಕೆ ತಕ್ಕ ಪ್ರತಿಫಲ ಉಣ್ಣಲಿದೆ ಎಂದು ಸಿಂಧಿಯಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಜಸ್ಥಾನದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಶಾಸಕರ ಸಭೆಯಲ್ಲಿ ಸಚಿನ್ ಬೆಂಬಲಿತರೂ ಭಾಗಿಯಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗುಹ್ವಾಟಿ ಅವರಿಗೆ ಬೆಂಬಲ ಸೂಚಿಸಿದ್ದರು. ಇದಾದ ನಂತರವೂ ಕಾಂಗ್ರೆಸ್ ಸಚಿನ್ ಪೈಲಟ್ ಅವರಿಗೆ ಪಕ್ಷಕ್ಕೆ ಹಿಂದಿರುಗಲು ಮುಕ್ತ ಅವಕಾಶ ನೀಡಿತ್ತು. ಆದರೂ, ಪಕ್ಷದ ಆಹ್ವಾನಕ್ಕೆ ಪ್ರತಿಕ್ರಿಯಿಸದ ಸಚಿನ್ರನ್ನು ನಿನ್ನೆ ಪಕ್ಷದಿಂದ ಅಮಾನತು ಮಾಡಿರುವುದಾಗಿ ರಾಜಸ್ಥಾನ ಕಾಂಗ್ರೆಸ್ ಘೋಷಿಸಿತ್ತು.
ಈ ಬೆನ್ನಲ್ಲೇ, ಇಂದು ಬೆಳಗ್ಗೆ 10 ಗಂಟೆಗೆ ಪತ್ರಿಕಾಗೋಷ್ಟಿ ನಡೆಸಿದ, ಸಚಿನ್ ಪೈಲಟ್ ತಾವೂ ಇನ್ನೂ ಕಾಂಗ್ರೆಸ್ ಸದಸ್ಯರಾಗಿಯೇ ಇರುವುದಾಗಿ ಹೇಳಿಕೊಂಡಿದ್ದಾರೆ.