ನನಗೆ ಕೊರೊನಾ ಸೋಂಕಿದೆ, ಆಸ್ಪತ್ರೆಯಲ್ಲಿ ಬೆಡ್ಕೊಡಿ; ಯಡಿಯೂರಪ್ಪ ಮನೆ ಮುಂದೆ ಸೋಂಕಿತನ ಅಳಲು
ನನಗೆ ಕೊರೊನಾ ಸೋಂಕು ತಗುಲಿದೆ, ತನ್ನ ಮಗನಿಗೆ ಜ್ವರ ಬಂದಿದೆ. ನನಗೆ ಕೊರೊನಾ ಆಸ್ಪತ್ರೆಯಲ್ಲಿ ಬೆಡ್ ಕೊಡಿಸಿ. ಇಲ್ಲವಾರದರೆ, ನನ್ನ ಇಡೀ ಕುಟುಂಬಕ್ಕೆ ಸೋಂಕು ತಲುಲಬಹುದು. ಅಮೇಲೆ ಯಾರು ಗತಿ ಎಂದು ಬೆಂಗಳೂರಿನ ನಿವಾಸಿಯೊಬ್ಬರು ಮುಖ್ಯಮಂತ್ರಿ ಯಡಿಯೂರಪ್ಪ ಮನೆ ಮುಂದೆ ನಿಂತು ಅಸಹಾಯಕತೆಯಿಂದ ಕೇಳಿಕೊಂಡಿರುವ ಘಟನೆ ನಡೆಸಿದೆ.
ಚಿಕಿತ್ಸೆಗಾಗಿ ಹಲವು ಆಸ್ಪತ್ರೆಗಳಿಗೆ ಅಲೆದರೂ ಹಾಸಿಗೆ ಸಿಗದೆ ಹತಾಶೆಗೊಂಡ ಕೊರೊನಾ ರೋಗಿಯೊಬ್ಬರು ತನ್ನ ಪತ್ನಿ ಹಾಗೂ ಎರಡು ಪುಟ್ಟಮಕ್ಕಳ ಸಹಿತ ತಮ್ಮ ಕುಟುಂಬ ಸಮೇತ ಮುಖ್ಯಮಂತ್ರಿಗಳ ಅಧಿಕೃತ ನಿವಾಸದ ಬಳಿ ಆಗಮಿಸಿ ಚಿಕಿತ್ಸೆ ಕೊಡಿಸುವಂತೆ ಅಂಗಲಾಚಿದ್ದಾರೆ.
‘ಹಾಸಿಗೆ ಕೊರತೆಯಿಲ್ಲ’ ಎಂದು ಹೇಳುವ ಸರ್ಕಾರಕ್ಕೆ ಪರಿಸ್ಥಿತಿಯ ನೈಜ ದರ್ಶನವಾಗಿದೆ. ಬನಶಂಕರಿ ಸಮೀಪದ ಡಾ.ಬಿ.ಆರ್.ಅಂಬೇಡ್ಕರ್ ನಗರದ ನಿವಾಸಿಗೆ ಕೊರೊನಾ ಸೋಂಕು ತಗುಲಿತ್ತು. 3 ದಿನಗಳಿಂದ ಚಿಕಿತ್ಸೆಗಾಗಿ ಆತ ಹಲವು ಆಸ್ಪತ್ರೆಗಳಿಗೆ ಎಡ ತಾಕಿದರೂ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತ ಸೋಂಕಿತ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಕುಮಾರಕೃಪಾ ರಸ್ತೆಯಲ್ಲಿರುವ ಸರ್ಕಾರಿ ನಿವಾಸಕ್ಕೆ ತನ್ನ ಕುಟುಂಬ ಸಮೇತ ಬಂದಿದ್ದ. ಆಗ ಮುಖ್ಯಮಂತ್ರಿಗಳ ಮನೆ ಗೇಟಿನ ದ್ವಾರದಲ್ಲೇ ಸೋಂಕಿತನನ್ನು ತಡೆದ ಪೊಲೀಸರು ಅಂತಿಮವಾಗಿ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ ಈ ಸಂಬಂಧ ಪ್ರತಿಕ್ರಿಯಿಸಿರುವ ಸಿಎಂ ಆಪ್ತರೊಬ್ಬರು, ಸೋಂಕಿತ ವ್ಯಕ್ತಿ ಯಾವುದೇ ಆಸ್ಪತ್ರೆಗೂ ಹೋಗಿರಲಿಲ್ಲ, ಯಾವ ಆಸ್ಪತ್ರೆಯೂ ಚಿಕಿತ್ಸೆಗೆ ನಿರಾಕರಿಸಿಲ್ಲ, ಸೋಂಕಿತ ವ್ಯಕ್ತಿ ನೇರವಾಗಿ ಸಿಎಂ ಮನೆ ಬಳಿ ಬಂದಿದ್ದ ಎಂದು ಹೇಳಿದ್ದಾರೆ. ಆ ವ್ಯಕ್ತಿಗೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿಸಿದ್ದಾರೆ.
ಆದರೆ, ಈಗಾಗಲೇ ಇಬ್ಬರು ಸೋಂಕಿತರು ಆಸ್ಪತ್ರೆಗಳಲ್ಲಿ ಬೆಡ್ಸಿಗದೆ ಸಾವನ್ನಪ್ಪಿರುವ ಘಟನೆಗಳು ಇದೇ ಬೆಂಗಳೂರಿನಲ್ಲಿ ನಡೆದಿರುವುದು ನಮ್ಮ ಕಣ್ಣೆದುರುಗಿವೆ.