ರಾಜ್ಯದಲ್ಲಿ ಒಂದೇ ದಿನ ಸಾವಿರ ಕೊರೊನಾ ಪ್ರಕರಣ; ಬೆಂಗಳೂರಿನಲ್ಲಿ 500ಕ್ಕೂ ಹೆಚ್ಚು!
ಕರ್ನಾಟಕದಲ್ಲಿ ಕೊರೊನಾ ನಿಜವಾಗಿಯೂ ಕಾದಂಬರಿಯೇ ಆಗಿದೆ. ದಿನ ಕಳೆದಂತೆ ತನ್ನ ದಾಖಲೆಯನ್ನು ತಾನೆ ಮುರಿದು ಹೊಸ ದಾಖಲೆಯನ್ನು ಬರೆಯುತ್ತಿದೆ. ಇಂದು ಒಂದೇ ದಿನ 918 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 11,923ಕ್ಕೆ ಏರಿಕೆಯಾಗಿದೆ.
ರಾಜ್ಯಾದ್ಯಂತ 918 ಕೊರೋನಾ ಪ್ರಕರಣಗಳು ಕಾಣಿಸಿಕೊಂಡಿದ್ದರೆ, ರಾಜ್ಯ ರಾಜಧಾನಿ ಬೆಂಗಳೂರು ನಗರ ಒಂದರಲ್ಲಿಯೇ ಇಂದು ಸುಮಾರು 596 ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಬೆಂಗಳೂರು ಕೊರೋನಾ ಡೇಂಜರಸ್ ಸಿಟಿಯಾಗಿ ಬದಲಾಗುತ್ತಿದೆಯೇ? ಎಂಬ ಆತಂಕ ಜನ ಸಾಮಾನ್ಯರಲ್ಲಿ ಮೂಡಿದೆ.
ಇದು ಸೋಂಕಿತರ ಲೆಕ್ಕಾಚಾರವಾದರೆ ಇನ್ನೂ ಇಂದು ಒಂದೇ ದಿನ ರಾಜ್ಯಾದ್ಯಂತ 11 ಜನ ಕೊರೋನಾದಿಂದ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ 3 ಜನ ಈ ಕೊರೊನಾದಿಂದ ಸಾವಿಗೀಡಾಗಿದ್ದಾರೆ. ಈ ಸಾವಿನ ಪ್ರಕರಣಗಳೂ ಸೇರಿ ಸಾವಿನ ಸಂಖ್ಯೆ 191ಕ್ಕೆ ಏರಿಕೆಯಾಗಿದೆ. ಸೋಂಕಿತರ ಮತ್ತು ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ರಾಜ್ಯ ಸರ್ಕಾರಕ್ಕೆ ತಲೆನೋವಿನ ಸಂಗತಿಯಾಗಿದೆ. ಇದೇ ಕಾರಣಕ್ಕೆ ರಾಜ್ಯ ಸರ್ಕಾರ ಪ್ರತಿ ಭಾನುವಾರ ರಾಜ್ಯಾದ್ಯಂತ ಕರ್ಫ್ಯೂ ಹೇರಲು ಮುಂದಾಗಿದೆ ಎನ್ನಲಾಗುತ್ತಿದೆ.