Fact Check: ಹಿಂದೂ ದೇವಾಲಯಗಳನ್ನು ಮುಸ್ಲಿಂ ಮತ್ತು ಕ್ರೈಸ್ತರು ನಿಯಂತ್ರಿಸಲು ಅವಕಾಶ ಕೊಟ್ಟಿದೆಯೇ ಕೇರಳ ಸರ್ಕಾರ!
ದೇವಾಲಯಗಳನ್ನು ಈಗ ಹಿಂದೂಗಳಲ್ಲದ ಮುಸ್ಲಿಮರು ಮತ್ತು ಕ್ರೈಸ್ತರು ಕೂಡ ನಿಯಂತ್ರಿಸಬಹುದು ಎಂದು ಕೇರಳ ಸರ್ಕಾರ ಆದೇಶಿಸಿದೆ ಎಂಬ ಹೇಳಿಕೆಯೊಂದಿಗೆ ಚಿತ್ರವೊಂದು ವೈರಲ್ ಆಗುತ್ತಿದೆ. ಇದರ ಬಗ್ಗೆ ದಿ ಕ್ವಿಂಟ್ ಫ್ಯಾಕ್ಟ್ ಚೆಕ್ ಮಾಡಿದೆ.
ಆದರೆ, ಅಂತಹ ಯಾವುದೇ ನಿಯಮವಿಲ್ಲ ಎಂದು ದೇವಸ್ವಂ ನೇಮಕಾತಿ ಮಂಡಳಿಯ ಅಧ್ಯಕ್ಷ ರಾಜಗೋಪಾಲನ್ ನಾಯರ್ ತಿಳಿಸಿದ್ದಾರೆ. ದೇವಾಲಯದ ನಿರ್ವಹಣೆ ಸೇರಿದಂತೆ ಎಲ್ಲಾ ನೌಕರರು ಹಿಂದೂ ಧರ್ಮಕ್ಕೆ ಸೇರಿದವರಾಗಿರಬೇಕು ಎಂಬುದು ಕಾನೂನು ಎಂದು ಅವರು ಹೇಳಿದ್ದಾರೆ.
ಪ್ರತಿಪಾದನೆ: ಸುನೀಲ್ ಕುಮಾರ್ ಮಿತ್ತಲ್ ಎಂಬ ಫೇಸ್ಬುಕ್ ಬಳಕೆದಾರ ಚಿತ್ರದಲ್ಲಿ ಉಲ್ಲೇಖಿಸಲಾದ ಹೇಳಿಕೆ ಹೀಗಿದೆ: “केरल सर्कार ने बनाया कानून हिन्दू मंदिरों को अब मुसलमान व ईसाई भी करेंगे कण्ट्रोल, मंदिर का अध्यक्ष ईसाई या मुसलमान भी हो सकेगा”
(ಅನುವಾದ: ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಈಗ ಹಿಂದೂ ದೇವಾಲಯಗಳನ್ನು ನಿಯಂತ್ರಿಸಬಹುದು, ದೇವಾಲಯದ ಮುಖ್ಯಸ್ಥರು ಕ್ರಿಶ್ಚಿಯನ್ ಅಥವಾ ಮುಸ್ಲಿಂ ಕೂಡ ಆಗಿರಬಹುದು ಎಂದು ಕೇರಳ ಸರ್ಕಾರ ಹೊಸ ಕಾನೂನು ಮಾಡಿದೆ.)
ಸತ್ಯಾಂಶ: ಇತ್ತೀಚೆಗೆ ದೇವಾಲಯ ನಿರ್ವಹಣೆಗೆ ಸಂಬಂಧಿಸಿದ ಯಾವುದೇ ಆದೇಶದ ವರದಿಯಗಳು ಕಂಡುಬಂದಿಲ್ಲ.
ಅಲ್ಲದೆ, “ಕೇರಳದ ದೇವಾಲಯಗಳನ್ನು ನಿಯಂತ್ರಿಸುವ ಮೂರು ಕಾನೂನುಗಳಿವೆ. ಈ ಎಲ್ಲಾ ಕೆಲಸ/ಕಾರ್ಯಗಳಲ್ಲಿ ನೌಕರರು ಮತ್ತು ನಿರ್ವಹಣಾಕಾರರು ಹಿಂದೂ ಧರ್ಮದವರೇ ಇರಬೇಕು ಎಂಬ ನಿರ್ದಿಷ್ಟ ನಿಬಂಧನೆ ಇದೆ.” ಎಂದು ವೈರಲ್ ಪೋಸ್ಟ್ ಬಗ್ಗೆ ಪ್ರತಿಕ್ರಿಸಿರುವ ದೇವಸ್ವಂ ನೇಮಕಾತಿ ಮಂಡಳಿಯ ಅಧ್ಯಕ್ಷ ರಾಜಗೋಪಾಲನ್ ನಾಯರ್ ತಿಳಿಸಿದ್ದಾರೆ.
ಕೇರಳ ರಾಜ್ಯದ ದೇವಾಲಯಗಳನ್ನು ಯಾರು ನಿಯಂತ್ರಿಸುತ್ತಾರೆ ಎಂಬುದಕ್ಕೆ ನಿರ್ದಿಷ್ಟ ನಿಬಂಧನೆಗಳಿದ್ದು, ಅದು ಹೀಗಿದೆ:
‘ಕೇರಳದ ದೇವಸ್ವಂ ಮಂಡಳಿಗಳು ಮತ್ತು ದೇವಾಲಯಗಳ ಆಡಳಿತ’ ಎಂಬ ಶೀರ್ಷಿಕೆಯ ಶೋಧಗಂಗದಲ್ಲಿ ಪ್ರಕಟವಾದ ಅಧ್ಯಾಯದ ಪ್ರಕಾರ, ಎಲ್ಲಾ ದೇವಾಲಯಗಳನ್ನು ಸಾಮಾಜಿಕ-ಧಾರ್ಮಿಕ ಟ್ರಸ್ಟ್ಗಳಾದ ಸರ್ಕಾರಿ ನಿಯಂತ್ರಿತ ದೇವಸ್ವಂಗಳು ಅಥವಾ ಖಾಸಗಿ ಸಂಸ್ಥೆಗಳು / ಕುಟುಂಬಗಳು ನಿರ್ವಹಿಸುತ್ತವೆ. ಅವುಗಳ ಸದಸ್ಯರು ಹಿಂದೂಗಳೇ ಆಗಿರುತ್ತಾರೆ. ಕೇರಳದಲ್ಲಿ ಐದು ವಿಭಿನ್ನ ದೇವಸ್ವಂ ಮಂಡಳಿಗಳಿವೆ. ಎಲ್ಲಾ ಐದು ದೇವಸ್ವಂ ಮಂಡಳಿಗಳು ಹಿಂದೂ ಸದಸ್ಯರನ್ನು ಹೊಂದಿವೆ.
ದೇವಾಲಯ ನಿರ್ವಹಣಾ ಆದೇಶಕ್ಕೆ ಸಂಬಂಧಿಸಿದಂತೆ ಯಾವುದೇ ವರದಿಗಳು ದೊರೆಯದಿದ್ದರೂ, 2018ರಲ್ಲಿ ದಿ ಹಿಂದೂ ಪತ್ರಿಕೆ ವರದಿ ಮಾಡಿದ್ದ ಲೇಖನವೊಂದು ದೊರೆತಿದೆ.
ದಿ ಹಿಂದೂ ಲೇಖನದ ಪ್ರಕಾರ, 1950 ರ ತಿರುವಾಂಕೂರು-ಕೊಚ್ಚಿನ್ ಹಿಂದೂ ಧಾರ್ಮಿಕ ಸಂಸ್ಥೆಗಳ ಕಾಯ್ದೆ XV (ಟಿಸಿಆರ್ಐ) ಯಡಿಯಲ್ಲಿ ರಚಿಸಲಾದ ಸ್ವಾಯತ್ತ ಸಂಸ್ಥೆಯಾದ ತಿರುವಾಂಕೂರು ದೇವಸ್ವಂ ಮಂಡಳಿ ಮತ್ತು ಕೊಚ್ಚಿನ್ ದೇವಸ್ವಂ ಮಂಡಳಿಗಳಿಗೆ ಆಯುಕ್ತರನ್ನಾಗಿ ಹಿಂದೂಗಳನ್ನು ಮಾತ್ರ ನೇಮಕ ಮಾಡಲಿದೆ ಎಂದು ಕೇರಳ ಸರ್ಕಾರ ಕೇರಳ ಹೈಕೋರ್ಟ್ಗೆ ತಿಳಿಸಿದೆ.
ತಿರುವಾಂಕೂರು-ಕೊಚ್ಚಿನ್ ಹಿಂದೂ ಧಾರ್ಮಿಕ ಸಂಸ್ಥೆಗಳ ಕಾಯ್ದೆ 1950 ಕ್ಕೆ ತಿದ್ದುಪಡಿ ಮೂಲಕ ಹಿಂದೂಯೇತರರನ್ನು ದೇವಸ್ವಂ ಆಯುಕ್ತರನ್ನಾಗಿ ನೇಮಕ ಮಾಡಲು ಕೇರಳ ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಪಿ.ಎಸ್.ಶ್ರೀಧರನ್ ಪಿಳ್ಳೈ ಅವರು 2018ರಲ್ಲಿ ಸಲ್ಲಿಸಿದ ರಿಟ್ ಅನ್ನು ನ್ಯಾಯಾಲಯವು ಆಲಿಸಿತ್ತು.
2018 ರ ವಿವಾದಕ್ಕೆ ಸಂಬಂಧಿಸಿದಂತೆ ಪತ್ರಿಕ್ರಿಯಿಸಿದ್ದ ರಾಜಗೋಪಾಲನ್, “ತಿದ್ದುಪಡಿಯಲ್ಲಿ ಒಂದು ಗೊಂದಲವಿದೆ. ಮಂಡಳಿಗಳ ನೇಮಕಕ್ಕೆ ಸಂಬಂಧಿಸಿದಂತೆ ಕೆಲವರು ಉದ್ದೇಶಪೂರ್ವಕವಾಗಿ ಈ ಗೊಂದಲವನ್ನು ಸೃಷ್ಟಿಸಿದ್ದರು. ಆದರೆ, ಮಂಡಳಿಗೆ ನೇಮಕವಾಗುವ ಆಯುಕ್ತರು ಸೇರಿದಂತೆ ಎಲ್ಲಾ ಉದ್ಯೋಗಿಗಳು ಹಿಂದೂಗಳಾಗಿರಬೇಕು ಎಂದು ಆಯುಕ್ತರನ್ನು ನೇಮಕ ಮಾಡಲು ಮಾಡಿದ ನಿಬಂಧನೆಗಳಲ್ಲಿ ಮಂಡಳಿಯು ನಿರ್ದಿಷ್ಟವಾಗಿ ಹೇಳಿದೆ. ಆಯುಕ್ತರಷ್ಟೇ ಅಲ್ಲದೆ ಎಲ್ಲಾ ಉದ್ಯೋಗಿಗಳೂ ಹಿಂದೂಗಳೇ ಆಗಿರಲಿದ್ದಾರೆ” ಎಂದು ಅವರು ಹೇಳಿದ್ದರು.
ವೈರಲ್ ಆಗುತ್ತಿರುವ ಪೋಸ್ಟ್ನಲ್ಲಿ ಹಂಚಿಕೊಳ್ಳಲಾಗುತ್ತಿರುವ ಹೇಳಿಕೆ ಸುಳ್ಳು. ಕೇರಳದ ಎಲ್ಲಾ ದೇವಾಲಯಗಳನ್ನು ಹಿಂದೂಗಳು ಮಾತ್ರ ನಿಯಂತ್ರಿಸುತ್ತಾರೆ. ಪ್ರಸ್ತುತ ಆಯುಕ್ತರು ಕೂಡ ಹಿಂದೂ ಎಂದು ದೇವಸ್ವಂ ಮಂಡಳಿಗೆ ಸಂಬಂಧಿಸಿದ ಮೂಲಗಳು ತಿಳಿಸಿವೆ.
ಕಾನೂನು ಏನು ಹೇಳುತ್ತದೆ?
ತಿರುವಾಂಕೂರು-ಕೊಚ್ಚಿನ್ ಹಿಂದೂ ಧಾರ್ಮಿಕ ಸಂಸ್ಥೆಗಳ ಕಾಯ್ದೆ 1950 ರ ಸೆಕ್ಷನ್ 29 (1), ದೇವಸ್ವಂ ಇಲಾಖೆಯು ಹಿಂದೂ ಅಧಿಕಾರಿಗಳನ್ನು ಒಳಗೊಂಡಿರಬೇಕು ಎಂದು ಹೇಳಿದೆ.
“1097 ರಲ್ಲಿ ರಚಿಸಲಾದ ದೇವಸ್ವಂ ಇಲಾಖೆಯು ಮುಂದುವರಿಯುತ್ತದೆ ಮತ್ತು ಕಾಲಕಾಲಕ್ಕೆ ಮಂಡಳಿಯು ನಿರ್ಧರಿಸುವಂತಹ ಹಿಂದೂ ಅಧಿಕಾರಿಗಳು ಮತ್ತು ಇತರ ಸೇವಕರನ್ನು ಒಳಗೊಂಡಿರುತ್ತದೆ” ಎಂದು ಅದು ಹೇಳಿದೆ.
ಇದಲ್ಲದೆ, ಮಂಡಳಿಯ ನಾಮನಿರ್ದೇಶನಕ್ಕೆ ಅರ್ಹತೆಗೆ ಸಂಬಂಧಿಸಿದಂತೆ, ಮಂಡಳಿಯ ನಾಮನಿರ್ದೇಶನಕ್ಕೆ ಸಂಬಂಧಿಸಿದಂತೆ “ಒಬ್ಬ ವ್ಯಕ್ತಿಯು ತಿರುವಾಂಕೂರು-ಕೊಚ್ಚಿನ್ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಹಿಂದೂ ಧರ್ಮವನ್ನು ಪ್ರತಿಪಾದಿಸದ ಹೊರತು ಮಂಡಳಿಯ ಸದಸ್ಯನಾಗಿ ನಾಮನಿರ್ದೇಶನ ಅಥವಾ ಚುನಾವಣೆಗೆ ಅರ್ಹನಾಗಿರುವುದಿಲ್ಲ.” ಎಂದು ಕಾಯಿದೆಯ ಸೆಕ್ಷನ್ 6 ರಲ್ಲಿ ಹೇಳಲಾಗಿದೆ.
ಹಾಗಾಗಿ ಸ್ಪಷ್ಟವಾಗಿ ಹೇಳುವುದಾದರೆ, ಕೇರಳ ಸರ್ಕಾರವು ಹಿಂದೂ ಅಲ್ಲದವರಿಗೆ ರಾಜ್ಯದ ದೇವಾಲಯಗಳನ್ನು ನಿಯಂತ್ರಿಸಲು ಅನುವು ಮಾಡಿಕೊಡುವ ಹೊಸ ಕಾನೂನನ್ನು ಜಾರಿಗೆ ತಂದಿದೆ ಎಂದು ತಪ್ಪಾಗಿ ಹೇಳಲಾಗಿದೆ. ಆ ರೀತಿಯ ಯಾವುದೇ ಕಾನೂನುಗಳನ್ನು ಕೇರಳ ಸರ್ಕಾರ ರೂಪಿಸಿಲ್ಲ.
ಇದನ್ನೂ ಓದಿ: Fact Check: ಭಾರತೀಯ ಮಾಧ್ಯಮಗಳು ಮೋದಿಯವರ ಚೇಲಾಗಳೆಂದು ಅಮೆರಿಕಾ ವ್ಯಂಗ್ಯಚಿತ್ರಕಾರ ಚಿತ್ರಿಸಿದ್ದರೆ?