ಐಎಎಸ್ ಹುದ್ದೆಗೆ ದಿಢೀರ್ ರಾಜೀನಾಮೆ ನೀಡಿದ ಶಶಿಕಾಂತ್ ಸೆಂಥಿಲ್ ಯಾರು ಗೊತ್ತಾ..?
ಶಶಿಕಾಂತ್ ಸೆಂಥಿಲ್ ಮೂಲತಃ ತಮಿಳುನಾಡಿನವರು.ಅವರು ತಿರುಚಿರಾಪಳ್ಳಿಯ ವಿಶ್ವವಿದ್ಯಾನಿಲಯದಿಂದ ಎಲೆಕ್ಟ್ರಾನಿಕ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ಪದವಿ ಪಡೆದರು.ನಂತರ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು ಜನರೊಂದಿಗೆ ಬೆರೆತು ಕೆಲಸ ಮಾಡಬೇಕೆಂಬ ಹಠದಿಂದ ತಮ್ಮ ಉದ್ಯೋಗವನ್ನು ತೊರೆದು IAS ಪರೀಕ್ಷೆ ಬರೆದರು.2009 ರ UPSC ಪರೀಕ್ಷೆಯಲ್ಲಿ ತಮಿಳುನಾಡಿನ ಟಾಪರ್ ಆಗಿ ಮೂಡಿ ಬಂದ ಅವರು ರಾಷ್ಟ್ರಮಟ್ಟದಲ್ಲಿ 9 ನೇ ಸ್ಥಾನ ಪಡೆದಿದ್ದ ಪ್ರತಿಭಾವಂತರಾಗಿದ್ಧರು.
ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿ ಆಯ್ಕೆಯಾಗುವ ಮೊದಲು ಶಶಿಕಾಂತ್ ಬಳ್ಳಾರಿಯಲ್ಲಿ ಸಹಾಯಕ ಕಮೀಷನರ್ ಆಗಿ,ಶಿವಮೊಗ್ಗ ಜಿಲ್ಲಾ ಪಂಚಾಯತ್ ನಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ,ಚಿತ್ರದುರ್ಗ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಉಪ ಆಯುಕ್ತರಾಗಿ ಸೇವೆ ಸಲ್ಲಿಸಿದ್ಧಾರೆ.
ಇಂಗ್ಲೀಷ್ ,ತಮಿಳು ತಿಳಿದಿರುವ ಶಶಿಕಾಂತ್ ಸೆಂಥಿಲ್ ಕರ್ನಾಟಕದಲ್ಲಿ ಒಂಭತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಕನ್ನಡ,ತುಳು ಭಾಷೆಗಳ ಮೇಲೂ ಹಿಡಿತ ಸಾಧಿಸಿದ್ಧರು.
ಮಂಗಳೂರಿನಂತಹ ಸೂಕ್ಷ್ಮ ಪ್ರದೇಶದಲ್ಲಿ ಕೋಮುವಾದ,ಮರಳು ಮಾಫಿಯಾ,ಮಳೆ,ಕಡಲ್ಕೊರೆತ ,ಭೂ ಕುಸಿತದಂತಹ ಪ್ರಕ್ರತಿ ವಿಕೋಪ,ಡೆಂಗ್ಯೂ ನಂತಹ ಹಲವಾರು ಸಮಸ್ಯೆಗಳನ್ನು ದಿಟ್ಟವಾಗಿ ಎದುರಿಸಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ತರಲು ಪ್ರಾಮಾಣಿಕವಾಗಿ ಪ್ರಯತ್ನಪಟ್ಟ ಜಿಲ್ಲಾಧಿಕಾರಿಗಳಲ್ಲಿ ಸೆಂಥಿಲ್ ಕೂಡಾ ಒಬ್ಬರು.
IPS ಮತ್ತು IAS ಪರೀಕ್ಷೆ ಬರೆಯುವುದು,ಅಧಿಕಾರಿಯಾಗಿ ಆಯ್ಕೆಯಾಗುವುದು ಒಬ್ಬ ರಾಜಕಾರಣಿಯಾಗಿ ಆಯ್ಕೆಯಾಗುವುದಕ್ಕಿಂತಲೂ ಕಷ್ಟದ ಕೆಲಸ.ಒಂದು ಜಿಲ್ಲೆಯ ಸಂಪೂರ್ಣ ಜವಾಬ್ದಾರಿ ಇರುವುದು ಅಲ್ಲಿನ ರಾಜಕಾರಣಿಗಳಿಗಿಂತಲೂ ಹೆಚ್ಚಾಗಿ ಅಲ್ಲಿನ ಜಿಲ್ಲಾಧಿಕಾರಿಯ ಮೇಲೆ.
ಇಂಜಿನಿಯರ್ ಆಗಿ ಲಕ್ಷಗಟ್ಟಲೆ ದುಡಿದು ಆರಾಮವಾಗಿ ಇರಬಹುದಾಗಿದ್ದ ಶಶಿಕಾಂತ್ ಸೆಂಥಿಲ್ ನಂತಹವರು ಈ ಸಮಾಜದಲ್ಲಿ ಏನೋ ಬದಲಾವಣೆ ಮಾಡಬೇಕೆಂದು ಏನೆಲ್ಲಾ ಸಾಹಸ ಮಾಡಿ ಮುಂದೆ ಬರುತ್ತಾರೆ.ಆದರೆ ಕೊನೆಗೆ ತಮ್ಮ ಆಸೆಯನ್ನು ಪೂರೈಸಲಾಗದೆ ಹತಾಶವಾಗಿ ಬರಿಗೈಯಲ್ಲೇ ಹಿಂದಿರುಗಿ ಹೋಗುವಂತೆ ಮಾಡುವ ಈ ವ್ಯವಸ್ಥೆ ಎಷ್ಟು ಕ್ರೂರವಾಗಿ ಬದಲಾಗುತ್ತಿದೆ ಎಂಬುದನ್ನು ನಾವೆಲ್ಲಾ ಗಂಭೀರವಾಗಿ ಪರಿಗಣಿಸಬೇಕಾಗಿದೆ.